ಬೆಂಗಳೂರು: ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಶೇ. 100 ರಷ್ಟು ಸಮೀಕ್ಷೆ ಪೂರ್ಣಗೊಳಿಸುವ ಸಲುವಾಗಿ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲು ವಲಯ ಆಯುಕ್ತರಾದ ಸುರಾಳ್ಕರ್ ವಿಕಾಸ್ ಕಿಶೋರ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯಕ್ಕೆ ಸಂಬಂಧಿಸಿದಂತೆ ಇಂದು ಪಶ್ಚಿಮ ವಲಯ ಕಛೇರಿಯಲ್ಲಿ ನಡೆದ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮೀಕ್ಷೆ ಪೂರ್ಣಗೊಳಿಸುವ ಸಲುವಾಗಿ ಎಲ್ಲಾ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿದರೆ ಸರ್ವೆ ಮಾಡಬೇಕಿರುವ ಮನೆಗಳನ್ನು ಸುಲಭವಾಗಿ ಗುರುತಿಸಬಹುದಾಗಿರುತ್ತದೆ. ಈ ನಿಟ್ಟಿನಲ್ಲಿ ಕೂಡಲೇ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಸ್ಟಿಕ್ಕರ್ ಗಳನ್ನು ಅಂಟಿಸಲು ಸೂಚನೆ ನೀಡಿದರು.
ಸ್ಟಿಕ್ಕರ್ ಅಂಟಿಸುವ ವೇಳೆ ಸರ್ವೇ ಆಗಿದೆಯೇ ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಅದಕ್ಕಾಗಿ ಎನ್.ಎಸ್.ಎಸ್, ಎಸಿಸಿ, ನೋಂದಾಯಿತ ಸಂಸ್ಥೆಗಳ ಸಹಯೋಗ ಪಡೆಯಲು ತಿಳಿಸಿದರು.
ಬೆಸ್ಕಾಂ, ಜಲಮಂಡಳಿಯ ದತ್ತಾಂಶ ಆಧಾರದ ಮೇಲೆ ಸಮೀಕ್ಷೆ ಕಾರ್ಯವನ್ನು ಪರಿಶೀಲಿಸಿ, ಬಾಕಿ ಸಮೀಕ್ಷೆ ಮಾಡಬೇಕಿರುವುದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
*ವಿವಿಧ ಆಯಾಮದಲ್ಲಿ ಸಮೀಕ್ಷಾ ಕಾರ್ಯ:*
ಸಮೀಕ್ಷಾ ಕಾರ್ಯದಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸುವ ಉದ್ದೇಶದಿಂದ 22ನೇ ಜೂನ್ 2025 ರವರೆಗೆ ಅವಧಿಯನ್ನು ವಿಸ್ತರಿಸಿ, ಈ ಕೆಳಕಂಡ ಸ್ಥಳಗಳಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.
* ನಾಗರೀಕ ಸೇವಾ ಕೇಂದ್ರಗಳಾದ, “ಕರ್ನಾಟಕ ಒನ್” (Karnataka one) “ಬೆಂಗಳೂರು ಒನ್” (Bengaluru one) ಮತ್ತು “ಗ್ರಾಮ ಒನ್”(Grama one) ಕೇಂದ್ರಗಳು.
* ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಸಹ ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ.
* ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಕಚೇರಿಗಳಲ್ಲಿ ಪ್ರತ್ಯೇಕವಾದ ಶಿಬಿರಗಳ ವ್ಯವಸ್ಥೆ.
* ಸ್ವಯಂ ಪ್ರೇರಿತವಾಗಿ ಆನ್ ಲೈನ್ ಲಿಂಕ್ ಮೂಲಕ https://schedulecastesurvey.karnataka.gov.in/selfdeclaration/ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ.
*1,77,718 ಪರಿಶಿಷ್ಟ ಜಾತಿ ಮನೆಗಳ ಸಮೀಕ್ಷೆ:*
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 27 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯ ಸಕ್ರಿಯವಾಗಿ ನಡೆಯುತ್ತಿದ್ದು, *14ನೇ ಜೂನ್ 2025ರ ವೇಳೆಗೆ* 1,77,718 ಪರಿಶಿಷ್ಟ ಜಾತಿಯವರ ಮನೆಗಳಿಗೆ ಹಾಗೂ 32,02,449 ಪರಿಶಿಷ್ಟ ಜಾತಿಯಲ್ಲದ ಮನೆಗಳಿಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲಾಗಿದೆ.
ಈ ವೇಳೆ ವಲಯ ಜಂಟಿ ಆಯುಕ್ತರಾದ ಸಂಗಪ್ಪ, ಉಪ ಆಯುಕ್ತರು, ಕಂದಾಯ ಅಧಿಕಾರಿಗಳು ಸೇರಿದಂತೆ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.