ಬೆಂಗಳೂರು: ರಾಜ್ಯದ ತಳಸಮುದಾಯಗಳ ಪರವಾಗಿ ಮಹಿಳೆಯರ ಹಾಗು ದಲಿತರ ಘನತೆಯ ಹಕ್ಕಿಗಾಗಿ ಹೋರಾಡಿದ ಮಹಾನ್ ಚೇತನ ದಲಿತರ ನಾಯಕ ಪ್ರೊ. ಬಿ.ಕೃಷ್ಣಪ್ಪರವರ 88ನೇ ಜನ್ಮ ದಿನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಎಸ್ಎಸ್ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷ್ಣಪ್ಪ ರವರು ತಮ್ಮ ಕೊನೆ ಉಸಿರು ಇರುವವರೆವಿಗೂ ದಲಿತ ಹಕ್ಕುಗಳಿಗಾಗಿ ಹೋರಾಡಿದ್ದಾರೆ. ದಲಿತ ಚಳವಳಿಗಳನ್ನು ಗಟ್ಟಿಗೊಳಿಸಬೇಕು ಎಂಬ ಕೃಷ್ಣಪ್ಪ ರವರ ಬದ್ಧತೆ ಅವರು ಮಾಡಿದ ತ್ಯಾಗಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಬಹುಜನ ವಿಮೋಚಕ ಪ್ರೊ.ಬಿ.ಕೃಷ್ಣಪ್ಪ ರವರ 88ನೇ ಜನ್ಮ ದಿನ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಂಗಳೂರು ನಗರ ವಿಶ್ವವಿದ್ಯಾಲದಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜೂನು 09 ದಂದು ಪ್ರೊ.ಬಿ.ಕೃಷ್ಣಪ್ಪ ರವರ 88ನೇ ಜನ್ಮ ದಿನಾಚರಣೆ ನೆನಪಿನಲ್ಲಿ ‘ನಾಗರಿಕ ಹಕ್ಕು ರಕ್ಷಣಾ ದಿನ’ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜೊತೆಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆರಂಭಗೊಂಡಿರುವ ‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (DCRE)’ ಪೊಲೀಸ್ ಠಾಣೆಗಳನ್ನು ಆರಂಭಿಸಿರುವ ರಾಜ್ಯ ಸರ್ಕಾರದ ದಲಿತರ ಬದ್ಧತೆಯ ನಿರ್ಧಾರವನ್ನು ಅಭಿನಂದಿಸುವುದಕ್ಕೂ ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಚಳವಳಿಗಾರರು, ದಲಿತ ಸಮುದಾಯದ ಸದಸ್ಯರು ಭಾಗವಹಿಸಬೇಕು ಎಂದು ಈ ಮೂಲಕ ಮನವಿ ಮಾಡಿದರು.
ಪರಿಶಿಷ್ಟ ಜಾತಿ ಎಂದು ಹೇಳಿಕೊಂಡು ನಕಲಿ ಜಾತಿ ಪ್ರಮಾಣಪತ್ರ ಮಾಡಿಸುತ್ತಿರುವವರ ಬಗ್ಗೆ
ಪರಿಶಿಷ್ಟ ಜಾತಿಯ 101 ಜಾತಿಗಳಲ್ಲೇ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಮೀಸಲಾತಿ ಸೌಲಭ್ಯಗಳಾದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗು ಆರ್ಥಿಕವಾಗಿ ವಂಚಿತರಾಗಿರುವ ಬೇಡ ಜಂಗಮ-ಬುಡ್ಗ ಜಂಗಮ ಜಾತಿಗಳಿಗೂ ಮತ್ತು ವೀರಶೈವ ಜಂಗಮರಿಗೂ ಯಾವುದೇ ಸಂಬಂಧ ಇಲ್ಲ .
ಸಮಾಜದಲ್ಲಿ ಅತ್ಯಂತ ದುಸ್ತರವಾಗಿ ಬದುಕುತ್ತಿರುವ ಬೇಡ-ಬುಡ್ಗ ಜಂಗಮ ಜಾತಿಗಳು ಮತ್ತು ವೀರಶೈವ ಜಂಗಮರ ನಡುವೆ ಮೇಲ್ನೋಟಕ್ಕೆ ಗೋಚರಿಸುವಂತೆ ಸಾಕಷ್ಟು ಭಿನ್ನತೆಗಳಿವೆ.
ಅಲೆಮಾರಿ ಸಮುದಾಯವಾಗಿರುವ ಬೇಡ-ಬುಡ್ಗ ಜಂಗಮರು ಮಾಂಸಹಾರಿಗಳಾಗಿದ್ದಾರೆ. ವೀರಶೈವ ಜಂಗಮರು ಸಸ್ಯಾಹಾರಿಗಳಾಗಿದ್ದು ಮಾಂಸಹಾರಿಗಳಾದ ದಲಿತ ಸಮುದಾಯಗಳ ಜೊತೆ ಹಿಂದಿನಿಂದಲೂ ಯಾವುದೇ ರೀತಿಯ ಸಾಂಸ್ಕೃತಿಕ ಒಡನಾಟ ಹೊಂದಿರದ ವೀರಶೈವ ಜಂಗಮರು ಕೇವಲ ಮೀಸಲಾತಿ ಸೌಲಭ್ಯ ಪಡೆಯುವುದಕ್ಕಾಗಿ ಮಾತ್ರ ತಮ್ಮನ್ನು ‘ಪರಿಶಿಷ್ಟ ಜಾತಿ’ ಎಂದು ಹೇಳಿಕೊಂಡು ನಕಲಿ ಜಾತಿ ಪ್ರಮಾಣಪತ್ರಗಳ ಮೂಲಕ ತಮ್ಮ ಲಿಂಗಾಯತ ಜಾತಿ ಪ್ರಮಾಣ ಬಳಸಿಕೊಂಡು ಸರ್ಕಾರಿ ಕೆಲಸಗಳನ್ನು ಕಬಳಿಸುತ್ತಿದ್ದಾರೆ. ಇದರಿಂದ, ಅರ್ಹ ತಳಸಮುದಾಯವೊಂದಕ್ಕೆ ವಂಚನೆಯಾಗುತ್ತದೆ ಎಂಬುದನ್ನು ನಾವು ಗಂಭೀರವಾಗಿ ಚಿಂತಿಸಬೇಕಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು (ಕಾಂತರಾಜು ಆಯೋಗ) ನಡೆಸಿದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕೂಡ ಬೇಡ ಜಂಗಮ ಸಮುದಾಯದ ಜನಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು ಲಿಂಗಾಯತ ಜಂಗಮರಿಗೆ ಸೇರಿದ ಅನೇಕರು ತಮ್ಮನ್ನು ಬೇಡ ಜಂಗಮರು ಎಂದು ಬರೆಸಿರುವುದೇ ಇದಕ್ಕೆಲ್ಲಾ ಕಾರಣ ಎಂದು ತಿಳಿದು ಬಂದಿದೆ.
ಅಧಿಸೂಚಿತ ಪರಿಶಿಷ್ಟ ಜಾತಿಗಳ (SC) ಪಟ್ಟಿಯ ಭಾಗವಾಗಿರುವ ಬೇಡಜಂಗಮರು ಅಥವಾ ಬುಡ್ಗ ಜಂಗಮರು ಎಂಬ ಸಮುದಾಯವು ನೀಡುವ ಮೀಸಲಾತಿ ಪ್ರಯೋಜನಗಳು ಇತರೆ ಹಿಂದುಳಿದ ವರ್ಗಗಳು (OBC) ಎಂದು ವರ್ಗೀಕರಿಸಲ್ಪಟ್ಟ ದೊಡ್ಡ ವೀರಶೈವ-ಲಿಂಗಾಯತ ಗುಂಪಿನ ಅಡಿಯಲ್ಲಿ ಬರುವ ಅನೇಕ ಜಂಗಮರು ತಮ್ಮನ್ನು ಬೇಡ ಜಂಗಮರು ಎಂದು ಗುರುತಿಸಿಕೊಳ್ಳಲು ಕಾರಣ ಅಲೆಮಾರಿ ಸಮುದಾಯಗಳ ಮೀಸಲಾತಿ ಕಬಳಿಸುವುದೇ ಆಗಿದೆ ಎಂದು ಸ್ಪಷ್ಟನೆ ನೀಡಿದರು.
ಬೇಡ ಜಂಗಮ ಸಮುದಾಯದ ಜನಸಂಖ್ಯೆ ಹೆಚ್ಚಳಕ್ಕೆ ಸಚಿವರು ನಾಗಮೋಹನ ದಾಸ್ ಒಪ್ಪಿಕೊಂಡಿದ್ದಾರೆ
ಬೇಡ ಜಂಗಮ ಸಮುದಾಯದ ಜನಸಂಖ್ಯೆಯಲ್ಲಿನ ‘ಅಸಹಜ ಹೆಚ್ಚಳ’ ವಾಗಿದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಜಸ್ಟೀಸ್ ನಾಗಮೋಹನ್ದಾಸ್ರವರೇ ಒಪ್ಪಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಮೀಕ್ಷೆಯಲ್ಲಿ 1961ರ ಸಾಮಾನ್ಯ ಜನಗಣತಿಯಲ್ಲಿ 5141 ರಷ್ಟಿದ್ದ ಜನಸಂಖ್ಯೆಯು 2015ರ ವೇಳೆಗೆ 4,10,804ಕ್ಕೆ ಏರಿದೆ.
ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು ಮತ್ತು ಬಳ್ಳಾರಿಯ ಗಡಿ ಜಿಲ್ಲೆಗಳಲ್ಲಿ ಕಂಡುಬರುವ ತೆಲುಗು ಮಾತನಾಡುವ ಸಮುದಾಯವು ಮಾಂಸಹಾರಿ ಅಲೆಮಾರಿ ಸಮುದಾಯವಾಗಿದ್ದು ವಲಯ ಮತ್ತು ಮಾದಿಗ ಸಮುದಾಯದಿಂದ ಭಿಕ್ಷೆ ಬೇಡುವ ಮತ್ತು ತಮ್ಮ ಸದಸ್ಯರಿಗೆ ಧಾರ್ಮಿಕ ವಿಧಿಗಳನ್ನು ನಿರ್ವಹಿಸುತ್ತದೆ.
ಲಿಂಗಾಯತ ಜಂಗಮರನ್ನು ಒಳಗೊಂಡ ಬೇಡ ಜಂಗಮರನ್ನು ಎಣಿಕೆ ಮಾಡುವುದು ಸಹ ಅಪಾಯಕಾರಿ ಪ್ರವೃತ್ತಿಯಾಗಿದೆ. ಅವರನ್ನು ಪಟ್ಟಿಯಲ್ಲಿ ಸೇರಿಸುವುದರಿಂದ ಎಸ್.ಸಿ. ಗಳು ಎಂಬುದಕ್ಕೆ ಪುರಾವೆಯಾಗಿ ಪರಿಗಣಿಸಬಹುದು. ದೀರ್ಘಾವಧಿಯಲ್ಲಿ ಇದು ರಾಜಕೀಯ ಪ್ರಾತಿನಿಧ್ಯ ಹಾಗು ಸರ್ಕಾರಿ ನೌಕರಿಗಳ ಮೇಲೂ ಪರಿಣಾಮ ಬೀರುತ್ತದೆ. ವೀರಶೈವ ಜನಾಂಗಕ್ಕೆ ಸೇರಿದವರು ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ. ವೀರಶೈವರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಾಕಷ್ಟು ಪ್ರಬಲರಾಗಿದ್ದು ತಮ್ಮ ಪ್ರಭಾವ ಬಳಸಿಕೊಂಡು ವಂಚಿತ ಸಮುದಾಯದ ತಟ್ಟೆಯಲ್ಲಿರುವ ಅನ್ನವನ್ನು ಕಿತ್ತುಕೊಳ್ಳಬಾರದು. ರಾಜಕೀಯವಾಗಿ ಸಾಕಷ್ಟು ಅನುಭವಿಸಿರುವ ವೀರಶೈವ ಜಂಗಮರು ಪುರೋಹಿತ ವೃತ್ತಿಯನ್ನು ಮಾಡುತ್ತಿದ್ದಾರೆ. ಹೂ ಮಾಲೀಕರೂ ಆಗಿರುವ ಅವರು ಪರಿಶಿಷ್ಟ ಜಾತಿ ಎಂದು ಜಾತಿಪ್ರಮಾಣಪತ್ರ ಪಡೆಯುವ ಮೂಲಕ ದಲಿತರ ಪಾಲು ಕಸಿದುಕೊಳ್ಳುತ್ತಿದ್ದಾರೆ.
ವಿಶೇಷ ಪೊಲೀಸ್ ಠಾಣೆಗಳಲ್ಲಿ ಸರ್ಕಾರ ಮೂಲಭೂತ ಸೌಕರ್ಯ ಕಲ್ಪಿಸಲಿ
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ನಿರ್ವಹಣೆಗೆ ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ವಿಶೇಷ ಪೊಲೀಸ್ ಠಾಣೆ’ ಗಳನ್ನು (DCRE) ಆರಂಭಿಸಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸ್ವಾಗತಿಸುತ್ತದೆ.
ಆದರೆ ರಾಜ್ಯಾದ್ಯಂತ ಬೆರಳಣಿಕೆಯಷ್ಟು ಠಾಣೆಗಳಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯ, ಕೊಲೆ ಹಾಗು ದೇವಸ್ಥಾನ ಪ್ರವೇಶ ನಿರ್ಬಂದದಂತಹ ಅಸ್ಪೃಶ್ಯತೆ ಆಚರಣೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಸರ್ಕಾರ ಕೂಡಲೇ ವಿಶೇಷ ಪೊಲೀಸ್ ಠಾಣೆಗಳನ್ನು ಕಾರ್ಯಾರಂಭ ಮಾಡಿ ಠಾಣೆಗಳ ಕಾರ್ಯನಿರ್ವಹಣೆಗೆ ಪೂರಕವಾಗಿ ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.
ಸುದ್ದಿಗೋಷ್ಠಿಯಲ್ಲಿ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ನಿರ್ಮಲ ಇಂದಿರಾ ಕೃಷ್ಣಪ್ಪ ಪ್ರೊ. ಬಿ ಕೃಷ್ಣಪ್ಪ ಟ್ರಸ್ಟ್ ನ ಮುಖ್ಯಸ್ಥರು, ರಾಜ್ಯ ಸಂಘಟನಾ ಸಂಚಾಲಕರು ಕಾರಹಳ್ಳಿ ಶ್ರೀನಿವಾಸ್ ಸೇರಿದಂತೆ ಅನೇಕ ದಲಿತ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.