ಬೆಂಗಳೂರು: ವಿಪತ್ತು ನಿರ್ವಹಣೆಗೆ ಸಮುದಾಯಗಳ ಸಂಪೂರ್ಣ ಸಹಕಾರ ಇಲ್ಲದೇ ಹೋದಲ್ಲಿ, ವಿಪತ್ತು ನಿರ್ವಹಿಸಲು ಸರ್ಕಾರಗಳು ಎಷ್ಟೇ ಕಾನೂನು ರೂಪಿಸಿದರೂ ವ್ಯರ್ಥ ಎಂದು ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಭಿಪ್ರಾಯಪಟ್ಟರರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS), ಕರ್ನಾಟಕ ಸರ್ಕಾರ, ಭಾರತೀಯ ವಿಜ್ಞಾನ ಸಂಸ್ಥೆ (IISc), ಭಾರತೀಯ ವೈದ್ಯಕೀಯ ಸಂಘ (IMA) ಜೀವರಕ್ಷಾ ಟ್ರಸ್ಟ್ ಹಾಗೂ ಭಾರತೀಯ ರೈಲ್ವೇಸ್ ಇನ್ಸ್ಟಿಟ್ಯೂಟ್ ಆಫ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ (IRIDM) ಸಹಯೋಗದಲ್ಲಿ ಐಐಎಸ್ಸಿನಲ್ಲಿ ಆಯೋಜಿಸಲಾಗಿದ್ದ “CBDM ಇಂಡಿಯಾ 2025- ವಿಪತ್ತು ಆರೋಗ್ಯ ಸಿದ್ಧತೆ” ಕುರಿತು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚೆಗಷ್ಟೆ ಅಂಕೋಲಾದಲ್ಲಿ ನಡೆದ ಭೂಕುಸಿತದಂತಹ ಪ್ರಾಕೃತಿಕ ವಿಕೋಪದಿಂದ ಇಡೀ ಕುಟುಂಬವೇ ಪ್ರಾಣ ಕಳೆದುಕೊಂಡಿದೆ . ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಮನೆ ಅಥವಾ ಅಂಗಡಿ ನಿರ್ಮಿಸದೇ ಇದಿದ್ದರೆ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ, ಇಂತಹ ದುರಂತಗಳನ್ನು ತಪ್ಪಿಸಲು ಸೂಕ್ಷ್ಮ ಪ್ರದೇಶಗಳಿಂದ ದೂರವಿರುವ ನಿರ್ಧಾರವನ್ನು ಸಮುದಾಯಗಳು ಸ್ವಯಂ ಪ್ರೇರಿತವಾಗಿ ತೆಗೆದುಕೊಂಡು, ಮುಂದಾಗುವ ಅನಾಹುತ ತಪ್ಪಿಸಬೇಕು, ಇದಕ್ಕೆ ಸಮುದಾಯಗಳ ಬೆಂಬಲ ಬೇಕು ಎಂದರು.
ಪ್ರವಾಹ ಹಾಗೂ ಬರಗಾಲದಂತಹ ತುರ್ತು ಸಂದರ್ಭದಲ್ಲಿ ರೈತರು ಹಾಗೂ ಸಮುದಾಯಗಳನ್ನು ಎಚ್ಚರಗೊಳಿಸಲು ವಿಪತ್ತು ನಿರ್ವಹಣಾ ಕೋಶದಲ್ಲಿ 70 ಲಕ್ಷಕ್ಕೂ ಅಧಿಕ ರೈತರ ಮೊಬೈಲ್ ಸಂಖ್ಯೆ ನೋಂದಣಿಯಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ ಅವರೆಲ್ಲರಿಗೂ ಎಚ್ಚರಿಕೆ ನೀಡಬಹುದಾಗಿದೆ ಎಂದು ಹೇಳಿದರು.
ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಎಚ್ಚರಿಕೆ ಸಂದೇಶಗಳು
*ನಗರದಲಿ 201 ಪ್ರವಾಹ ಪೀಡಿತ ಸ್ಥಳಗಳ ಗುರುತು*:
ಇನ್ನು ಬೆಂಗಳೂರಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಪ್ರವಾಹದ ಬಗ್ಗೆಯೂ ಸಾಕಷ್ಟು ಎಚ್ಚರಿಕೆ ಹೊಂದಿದ್ದೇವೆ, ಈಗಾಗಲೇ ನಗರಾದ್ಯಂತ 201 ಪ್ರವಾಹ ಪೀಡಿತ ಸ್ಥಳಗಳನ್ನು ಗುರುತಿಸಿದ್ದೇವೆ. ಮನೆ ಅಥವಾ ಸ್ಥಾವರ ಕಟ್ಟಡಗಳನ್ನು ನಿರ್ಮಿಸಲಾದ ಈ ಸ್ಥಳಗಳಲ್ಲಿ ಹೆಚ್ಚಿನವು ಸರ್ಕಾರಿ ಅಧಿಕಾರಿಗಳಿಂದ ಸರಿಯಾದ ಅನುಮೋದನೆಯನ್ನೇ ಪಡೆದಿಲ್ಲ. ಇದರಿಂದ ಅತಿಕ್ರಮಣದ ತೆರವು ಅಥವಾ ಅವುಗಳನ್ನು ಪುನರ್ವಸತಿ ಮಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಸರ್ಕಾರ ಯಾವುದೇ ರೀತಿಯ ಕ್ರಮಕ್ಕೆ ಮುಂದಾದರೆ ಅದು ಜನವಿರೋಧಿಯಾಗುತ್ತದೆ. ಆದ್ದರಿಂದ ಸಮುದಾಯದ ಸಹಕಾರವೇ ಏಕೈಕ ಪರಿಹಾರವಾಗಿದೆ. ಹೀಗಾಗಿ ಜನರೇ ಈ ವಿಕೋಪಗಳ ಬಗ್ಗೆ ಜಾಗೃತರಾಗಿ ಅತಿಕ್ರಮಣ ಮಾಡದಂತೆ ಸ್ವಯಂ ಎಚ್ಚರಿಕೆ ಹೊಂದಬೇಕು ವಿಷಯವಾಗಿದೆ.
*ಹವಾಮಾನ ಬದಲಾವಣೆ ನಮ್ಮ ಮುಂದಿರುವ ಸವಾಲಾಗಿದ್ದು, ಕಳವಳಕಾರಿ ವಿಷಯವಾಗಿದ್ದು, 3080 ಸಾವುಗಳು ಸಂಭವಿಸಿದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 18 ರಷ್ಟು ಹೆಚ್ಚಾಗಿದೆ. ಮಾನವ ನಿರ್ಮಿತ ವಿಪತ್ತುಗಳು ಸಹ ಗಮನಾರ್ಹವಾಗಿ ಹೆಚ್ಚುತ್ತಿವೆ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
ವರ್ಚುವಲ್ ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ಡಿಎಂಎ) ಸದಸ್ಯ ಪಿವಿಎಸ್ಎಂನ ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹಸ್ನೈನ್ ಮಾತನಾಡಿ, ವಿಶಿಷ್ಟ ನಾಗರಿಕ-ಮಿಲಿಟರಿ ದೃಷ್ಟಿಕೋನದ ಮೂಲಕ ವಿಕೋಪದ ಕುರಿತ ಒಳನೋಟ ಒದಗಿಸಿದರು. “ವಿಪತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಜಾಗೃತಿ ಮತ್ತು ಸಮುದಾಯವನ್ನು ತೊಡಗಿಸಿಕೊಳ್ಳುವಿಕೆ ಎರಡು ಪ್ರಮುಖ ವಿಷಯ ಎಂದರು.
ಜೀವರಕ್ಷಣೆ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ. ಎಂ.ಎ. ಬಾಲಸುಬ್ರಹ್ಮಣ್ಯ ಮಾತನಾಡಿ, “ವಿಪತ್ತು ಸಂದರ್ಭಗಳಲ್ಲಿ – ಪ್ರಕೃತಿಯಿಂದ ಅಥವಾ ಸಂಘರ್ಷದಿಂದ ಆಗಿರುವ ಜೀವವೂ ಸನ್ನದ್ಧತೆಯ ವಿಜಯವಾಗಿದೆ. ಸಿಬಿಡಿಎಂ ಇಂಡಿಯಾ 2025 ರಲ್ಲಿ, ನಮ್ಮ ಗಮನ ಆರೋಗ್ಯ, ವೇಗ ಮತ್ತು ಸಹಾನುಭೂತಿಯ ಮೇಲೆ. ನಾವು ನಮ್ಮ ಜನರಿಗೆ ತರಬೇತಿ ನೀಡುತ್ತಿದ್ದೇವೆ, ನಮ್ಮ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುತ್ತಿದ್ದೇವೆ ಎಂದರು.
“ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರು ವಿಪತ್ತು ಪ್ರತಿಕ್ರಿಯೆಯ ಮಾನಸಿಕ ಆರೋಗ್ಯ ಅಪಾಯದ ಬಗ್ಗೆ ಒತ್ತಿ ಹೇಳಿದರು. ಗ್ರಾಮದಿಂದ ರಾಜ್ಯ ಮಟ್ಟದವರೆಗಿನ ಪ್ರತಿಯೊಂದು ತುರ್ತು ಪ್ರತಿಕ್ರಿಯೆ ಪ್ರೋಟೋಕಾಲ್ನಲ್ಲಿ ಇದನ್ನು ನಿರ್ಮಿಸಬೇಕು” ಎಂದು ಅವರು ಹೇಳಿದರು.
ಸಮ್ಮೇಳನದಲ್ಲಿ ವಿಪತ್ತು ನಿರ್ವಹಣಾ ಅಧಿಕಾರಿಗಳು, ಸಶಸ್ತ್ರ ಪಡೆಗಳು, ಆರೋಗ್ಯ ಸಂಸ್ಥೆಗಳು, ಶೈಕ್ಷಣಿಕ, ನಾಗರಿಕ ಸಮಾಜ ಮತ್ತು ಯುವ ಜಾಲಗಳ ಅಧಿಕಾರಿಗಳು ಸೇರಿದಂತೆ 800 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಡಾ. ರಾಮ್ ಕೆ ನಾಯರ್, ತಾಂತ್ರಿಕ ನಿರ್ದೇಶಕ, ಜೀವರಕ್ಷಾ ಮತ್ತು ಸಿಬಿಡಿಎಂ 2025 ರ ಸಂಘಟನಾ ಕಾರ್ಯದರ್ಶಿ, ಡಾ.ಎಂ.ಆರ್.ಸೀತಾರಾಮನ್ ಐಎಂಎ, ಡಾ.ಪ್ರತಿಮಾ ಮೂರ್ತಿ ನಿರ್ದೇಶಕಿ ನಿಹ್ಮಾನ್ಸ್, ಡಾ.ಬಿ.ಸಿ.ಭಗವಾನ್ ಉಪಕುಲಪತಿ ಆರ್ಜಿಯುಎಚ್ಎಸ್, ವಿವಿಎಸ್ ಶ್ರೀನಿವಾಸ್ ನಿರ್ದೇಶಕ ಐಆರ್ಐಡಿಎಂ, ಡಾ.ನವಕಾಂತ ಭಟ್ ನರ ವಿಜ್ಞಾನ ಕೇಂದ್ರದ ನಿರ್ದೇಶಕರು IISc ಉಪಸ್ಥಿತರಿದ್ದರು.