ಬೆಂಗಳೂರು: ಕೆಎಸ್ಆರ್ಟಿಸಿ ನಿಗಮದಲ್ಲಿ 8 ವರ್ಷಗಳ ಬಳಿಕ ನೇಮಕಾತಿ – 2000 ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ನಿಯೋಜನಾ ಆದೇಶ ಪತ್ರವನ್ನು ಸಾರಿಗೆ ಹಾಗು ಮುಜರಾಯಿ ಖಾತೆ ಸಚಿವ ರಾಮಲಿಂಗ ರೆಡ್ಡಿ ವಿತರಣೆ ಮಾಡಿದರು.
ಆದೇಶ ಪತ್ರಗಳನ್ನು ವಿತರಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದವರು, ಚಾಲನಾ ಸಿಬ್ಬಂದಿಯ ನೇಮಕಾತಿಯು ಪಾರದರ್ಶಕವಾಗಿ ಮಾಡಿದ್ದು, ಮಾನವ ಹಸ್ತಕ್ಷೇಪವಿರುವುದಿಲ್ಲ. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆಗೊಳಿಸಲಾಗಿರುತ್ತದೆ. ಹೊಸದಾಗಿ ನೇಮಕಗೊಂಡಿರುವ ಚಾಲನಾ ಸಿಬ್ಬಂದಿಗಳು ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಹಾಗೂ ಮಹಿಳಾ ಪ್ರಯಾಣಿಕರೊಂದಿಗೆ, ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿಸಿದರು. ಅಪಘಾತ ಸಂಭವಿಸಿದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ನಿಗಮವು ಕರೋನಾ ನಂತರ ಹಲವು ಅಡತಡೆಗಳನ್ನು ಎದುರಿಸಿಕೊಂಡು ಆರ್ಥಿಕವಾಗಿ ಯಶಸ್ಸಿನ ಮಾರ್ಗವನ್ನು ನೋಡುತ್ತಿದ್ದು, ಹಲವಾರು ಕಾರ್ಮಿಕ ಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿರುತ್ತದೆ. ನೌಕರರು ಹಾಗೂ ಅವರ ಅವಲಂಭಿತರಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತಿದೆ ಎಂದರು.
ಮೃತರ ಅವಲಂಭಿತರಿಗೆ ನೌಕರಿ
ನಾಲ್ಕು ಸಾರಿಗೆ ನಿಗಮಗಳಿಂದ ಸುಮಾರು 1000 ಕ್ಕೂ ಹೆಚ್ಚು ಮೃತರ ಅವಲಂಭಿತರಿಗೆ ನೌಕರಿಯನ್ನು ನೀಡಿದ್ದು, ಸುಮಾರು 9000 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಈಗಾಗಲೇ 7500 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡಿರುತ್ತದೆ. ಅಪಘಾತದಿಂದ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬವನ್ನು ಆರ್ಥಿಕವಾಗಿ ಸಧೃಡಗೊಳಿಸುವ ಸಲುವಾಗಿ ರೂ.1 ಕೋಟಿ ವಿಮಾ ಯೋಜನೆ, ಸ್ವಾಭಾವಿಕವಾಗಿ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬಕ್ಕೆ ರೂ.10 ಲಕ್ಷಗಳ ಕಟುಂಬ ಕಲ್ಯಾಣ ಯೋಜನೆ ಅಡಿ ಪರಿಹಾರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ನೇಮಕಾತಿ ಆದೇಶದಲ್ಲಿರುವ ಬಗ್ಗೆ
*ನಿಗಮದಲ್ಲಿ 8 ವರ್ಷಗಳ ಬಳಿಕ ನೇಮಕಾತಿ – ಇಂದು 2000 ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ನಿಯೋಜನಾ ಆದೇಶ ವಿತರಣೆ*
* ನಿಗಮದಲ್ಲಿ 2020ನೇ ಸಾಲಿನಲ್ಲಿ ಚಾಲಕ-ಕಂ-ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು.
* ಸದರಿ ನೇಮಕಾತಿ ಪ್ರಕ್ರಿಯೆಗಳು ಚಾಲನೆಯಲ್ಲಿದ್ದಾಗ ಕೋವಿಡ್-19 ರ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿತ್ತು.
* ಸರ್ಕಾರವು ದಿನಾಂಕ: 13-10-2023 ರಂದು 300 ತಾಂತ್ರಿಕ ಸಹಾಯಕ ಹಾಗೂ 2000 ಚಾಲಕ-ಕಂ-ನಿರ್ವಾಹಕ ಹುದ್ದೆಗಳನ್ನು ಭರ್ತಿಮಾಡಲು ಅನುಮತಿ ನೀಡಿತು.
* ಅದರಂತೆ, ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಜನವರಿ-2024 ರ ಮಾಹೆಯಲ್ಲಿ ವಿಭಾಗ /ಘಟಕಗಳಿಗೆ ಹಂಚಿಕೆ ಮಾಡಲಾಯಿತು.
* 2000 ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಒಟ್ಟು 25,494 ಅರ್ಜಿಗಳು ಸ್ವೀಕೃತಗೊಂಡಿರುತ್ತದೆ. ದಾಖಲಾತಿ ಪರಿಶೀಲನೆಗೆ ಹಾಜರಾದ ಅಭ್ಯರ್ಥಿಗಳ ಪೈಕಿ13954 ಅಭ್ಯರ್ಥಿಗಳು ಚಾಲನಾ ವೃತ್ತಿ ಪರೀಕ್ಷೆ ಪಡೆಯಲು ಅರ್ಹರಾಗಿದ್ದರು.
* ಅಭ್ಯರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹುಮ್ನಾಬಾದ್ ಚಾಲನಾ ತರಬೇತಿ ಕೇಂದ್ರ ಮತ್ತು ಕರಾರಸಾ ನಿಗಮದ ಹಾಸನ ಚಾಲನಾ ತರಬೇತಿ ಕೇಂದ್ರಗಳಲ್ಲಿ ಪರೀಕ್ಷೆ ಪಡೆಯುಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ 2672 ಅಭ್ಯರ್ಥಿಗಳು ಹುಮ್ನಾಬಾದ್ ಹಾಗೂ 11,282 ಅಭ್ಯರ್ಥಿಗಳು ಹಾಸನ ತರಬೇತಿ ಕೇಂದ್ರಗಳಲ್ಲಿ ಚಾಲನಾವೃತ್ತಿ ಪರೀಕ್ಷೆ ಪಡೆಯಲು ಆಯ್ಕೆ ಮಾಡಿಕೊಂಡಿರುತ್ತಾರೆ.
* ಚಾಲನಾ ವೃತ್ತಿ ಪರೀಕ್ಷೆಯು ಸಂಪೂರ್ಣ ಗಣಕೀಕೃತವಾಗಿದ್ದು, ಮೊದಲ ಬಾರಿಗೆ ಚಾಲನಾ ವೃತ್ತಿಪರೀಕ್ಷೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು.
* ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳಲ್ಲಿ ಮೆರಿಟ್/ಮೀಸಲಾತಿ ಅನುಸಾರ 2000 ಹುದ್ದೆಗಳಿಗೆ ದಿನಾಂಕ:05-06-2025 ರಂದು ಸಂಭವನೀಯ ಆಯ್ಕೆಪಟ್ಟಿ ಪ್ರಕಟಿಸಿ, ಅಭ್ಯರ್ಥಿಗಳಿಂದ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿತ್ತು.
*. ದಿನಾಂಕ:12-06-25 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ನಿಗಮದ ವೆಬ್-ಸೈಟ್ ನಲ್ಲಿ ಪ್ರಕಟಿಸಲಾಯಿತು
* ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಜೇಷ್ಠತೆ/ಮೆರಿಟ್ ಆಧಾರದಲ್ಲಿ ಗಣಕೀಕೃತ ಕೌನ್ಸಿಲಿಂಗ ಮೂಲಕ ವಿಭಾಗ/ಘಟಕಗಳಿಗೆ ನೇರವಾಗಿ ನಿಯೋಜಿಸಲಾಗುತ್ತಿದೆ.
* ಈ ಸಂಬಂಧ ದಿನಾಂಕ: 16-06-2025 ರಿಂದ 19-06-2025 ರವರೆಗೆ ಗಣಕೀಕೃತ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು, ವಿಭಾಗ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ದಿನಾಂಕ: 05-7-2025 ರೊಳಗಾಗಿ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.
*ದಿನಾಂಕ: 16-06-2025 ರಂದು ಕೌನ್ಸಿಲಿಂಗ್ ನಲ್ಲಿ ವಿಭಾಗ ಆಯ್ಕೆಮಾಡಿಕೊಂಡ ಅಭ್ಯರ್ಥಿಗಳ ಪೈಕಿ 50/50 ಅಂಕಗಳಿಸಿರುವ ಅಭ್ಯರ್ಥಿಗಳಿಗೆ ದಿನಾಂಕ: 17-06-2025 ರಂದು ಕೇಂದ್ರ ಕಚೇರಿಯಲ್ಲಿ ನಿಯೋಜನಾ ಆದೇಶ ವಿತರಣೆ ಮಾಡಲಾಯಿತು.
* ನಿಗಮದಲ್ಲಿ ಅನುಕಂಪದ ಆಧಾರದ ಮೇಲೆ ಕಳೆದ ಒಂದು ವರ್ಷದ ಅವಧಿಯಲ್ಲಿ 209 ಮೃತಾವಲಂಬಿತರಿಗೆ ನೌಕರಿ ನೀಡಲಾಗಿದೆ.
* ನಾಲ್ಕು ಸಾರಿಗೆ ನಿಗಮದಲ್ಲಿ 1,000 ಮೃತಾವಲಂಭಿತರಿಗೆ ನೇಮಕಾತಿ ನೀಡಲಾಗಿದೆ
* ಒಟ್ಟಾರೆ ನಿಗಮದಲ್ಲಿ ಕಳೆದ ಒಂದುವರೆ ವರ್ಷದಲ್ಲಿ 2500 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.
2. ಶಕ್ತಿ ಯೋಜನೆ:
ಕರ್ನಾಟಕ ಸರ್ಕಾರವು ಶಕ್ತಿ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದು 2 ವರ್ಷಗಳು ಪೂರ್ಣಗೊಂಡಿದ್ದು, ಈವರೆಗೂ (16.06.2025) 478 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ನಿಗಮದಲ್ಲಿ ಬಸ್ಸುಗಳಲ್ಲಿ ಪ್ರಯಾಣಿಸಿದ್ದು, ಉಚಿತ ಟಿಕೇಟ್ ಮೌಲ್ಯ ರೂ.12,092 ಕೋಟಿಗಳಾಗಿರುತ್ತದೆ.
3. ಸಾರಿಗೆ ಸುರಕ್ಷಾ ರೂ. 1 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿರುತ್ತದೆ.
ಇದುವರೆವಿಗೂ 26 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ವಿತರಿಸಲಾಗಿದ್ದು, ಈವರೆಗೂ 26 ಸಿಬ್ಬಂದಿಗಳ ಅವಲಂಭಿತರಿಗೆ ಒಟ್ಟು ರೂ.26 ಕೋಟಿ ಪರಿಹಾರ ನೀಡಲಾಗಿದೆ.
4. ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ:
ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಅವರಿಗೆ ನೆರವಾಗಲು ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡುವ ಸದುದ್ದೇಶದಿಂದ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೇಡಿಕೆ ಬಂದ ಹಿನ್ನಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡಲಾಗುತ್ತಿದ್ದ ಪರಿಹಾರ ಮೊತ್ತವಾದ ರೂ. 3 ಲಕ್ಷಗಳನ್ನು ದಿನಾಂಕ: 01.11.2023 ರಿಂದ ರೂ.10 ಲಕ್ಷಗಳಿಗೆ ಹೆಚ್ಚಿಸಿ ಮರಣ ಪ್ರಕರಣಗಳಿಗೆ ಅನ್ವಯವಾಗುವಂತೆ ಜಾರಿಗೆ ತರಲಾಗಿರುತ್ತದೆ.
ಈ ಪರಿಷ್ಕೃತ ಪರಿಹಾರ ಯೋಜನೆ ಅಡಿ ಇದುವರೆವಿಗೂ 125 ಪ್ರಕರಣಗಳಲ್ಲಿ ತಲಾ ರೂ.10 ಲಕ್ಷಗಳಂತೆ ಒಟ್ಟು ರೂ.12.5 ಕೋಟಿಗಳ ಪರಿಹಾರ ನೀಡಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ, ರಾಮಲಿಂಗಾರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಸಚಿವರು, ಎಸ್.ಆರ್. ಶ್ರೀನಿವಾಸ್ (ವಾಸು), ಅಧ್ಯಕ್ಷರು ಕೆ.ಎಸ್.ಆರ್.ಟಿ.ಸಿ ಹಾಗೂ ಶಾಸಕರು ಗುಬ್ಬಿ ವಿಧಾನಸಭಾ ಕ್ಷೇತ್ರ ಹಾಗೂ ಮೊಹಮ್ಮದ್ ರಿಜ್ವಾನ್ ನವಾಬ್, ಉಪಾಧ್ಯಕ್ಷರು, ಕೆ.ಎಸ್.ಆರ್.ಟಿ.ಸಿ ರವರು, ಸಾಂಕೇತಿಕವಾಗಿ 51 ಚಾಲಕ ಕಂ ನಿರ್ವಾಹಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಅಕ್ರಂ ಪಾಷ, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ, ಡಾ. ನಂದಿನಿದೇವಿ ಕೆ., ಭಾ.ಆ.ಸೇ. ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ), ಇಬ್ರಾಹಿಂ ಮೈಗೂರ, ಭಾಆಸೇ., ನಿರ್ದೇಶಕರು (ಮಾಹಿತಿ ತಂತ್ರಜ್ಞಾನ) ಕರಾರಸಾ ನಿಗಮ, ಕಾರ್ಮಿಕ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.