ಬೆಂಗಳೂರು: ನಗರದಲ್ಲಿ ಬಿಬಿಎಂಪಿ ವತಿಯಿಂದ 1,287 ಉದ್ಯಾನವನಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಎಲ್ಲಾ ಉದ್ಯಾನವನಗಳಲ್ಲಿ ಹಸಿರೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ತೋಟಗಾರಿಕಾ ಉಪ ನಿರ್ದೇಶಕರು ಹೇಳಿದರು.
ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಎಂ.ಎನ್ ಕೃಷ್ಣಾರಾವ್ ಉದ್ಯಾನವನದಲ್ಲಿ ಇಂದು ನಡೆದ “ಬೆಂಗಳೂರು ಹಬ್ಬ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಪರಿಸರವನ್ನು ಆನಂದಿಸಬೇಕೆಂಬ ಉದ್ದೇಶದಿಂದ ಪಾಲಿಕೆಯು ಎಲ್ಲಾ ಉದ್ಯಾನವನಗಳ ಸಮಯವನ್ನು ಬೆಳಿಗ್ಗೆ 5 ರಿಂದ ರಾತ್ರಿ 10 ಗಂಟೆಯವರೆಗೆ ವಿಸ್ತರಿಸಿದೆ. ನಿಮ್ಮ ಹತ್ತಿರದಲ್ಲಿರುವ ಉದ್ಯಾನವನಗಳನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ, ಇತರರಿಗೂ ಸ್ವಚ್ಛತೆ ಕಾಪಾಡಲು ಅರಿವು ಮೂಡಿಸಲು ನಾಗರಿಕರಲ್ಲಿ ಅರಿವು ಮೂಡಿಸಿದರು.
ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಉದ್ಯಾನವನಗಳಿಗೆ ಫೆನ್ಸಿಂಗ್ ಹಾಕಲಾಗಿದೆ. ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ವಾಯುವಿಹಾರಕ್ಕಾಗಿ ಉತ್ತಮ ವಾಯು ವಿಹಾರ ಮಾರ್ಗ ನಿರ್ಮಾಣ ಮಾಡಲಾಗಿದೆ. ಅದಲ್ಲದೆ ವ್ಯಾಯಾಮ ಮಾಡಲು ಜಿಮ್ ಉಪ ಕರಣಗಳ ಅಳವಡಿಕೆ, ಮಕ್ಕಳಿಗಾಗಿ ಆಟಿಕೆಗಳ ಅಳವಡಿಕೆ ಸೇರಿದಂತೆ ಇನ್ನಿತರೆ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ಯಾನವನಗಳ ಉನ್ನತೀಕರಣ ಕಾರ್ಯ ಮಾಡಲಾಗುತ್ತಿದೆ. ಅಲ್ಲದೇ ಉದ್ಯಾನವನಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಹಬ್ಬ”ಕಾರ್ಯಕ್ರಮದಲ್ಲಿ ನಮ್ಮ ಪಾರಂಪರಿಕ ಸಂಸ್ಕೃತಿ, ಕಲೆಗಳು ಮತ್ತು ಇನ್ನಿತರ ಕಲಾ ಚಟುವಟಿಕೆಗಳಾದ ಡೊಳ್ಳುಕುಣಿತ, ಜಾನಪದ ಗಾಯನ, ಸುಗಮ ಸಂಗೀತ ಮತ್ತು ಜಾನಪದ ಕಲಾತಂಡಗಳ ಮೂಲಕ ನಾಗರಿಕರನ್ನು ರಂಜಿಸಲಾಯಿತು.
*ವರ್ಷವಿಡಿ ಕಾರ್ಯಕ್ರಮ:*
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 27 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 27 ಉದ್ಯಾನವನಗಳಲ್ಲಿ ಮೇ 17 ರಿಂದ ಮಾರ್ಚ್-2026 ರವರೆಗೆ ವರ್ಷವಿಡೀ ಸಾಂಸ್ಕೃತಿಕ ಮತ್ತು ಮಕ್ಕಳಿಗೆ ಉತ್ತೇಜಿಸುವ ಕಲೆಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಂತೆ ಈಗಾಗಲೇ 3 ಉದ್ಯಾನವನಗಳಲ್ಲಿ ನಡೆಸಿರುವ ಬೆಂಗಳೂರು ಹಬ್ಬ ಕಾರ್ಯಕ್ರಮಕ್ಕೆ ಹೆಚ್ಚು ಪ್ರಶಂಸೆ ವ್ಯಕ್ತವಾಗಿದ್ದು, ಇಂದು ಕೃಷ್ಣಾರಾವ್ ಉದ್ಯಾನವನದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಈ ವೇಳೆ ತೋಟಗಾರಿಕಾ ವಿಭಾಗದ ವಲಯ ಮಟ್ಟದ ಅಧಿಕಾರಿ, ಸ್ಥಳಿಯ ನಿವಾಸಿಗಳು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.