ಬೆಂಗಳೂರು: ನಗರದ ಸ್ವಚ್ಚತೆ ಕಾಪಾಡುವಲ್ಲಿ ಜಲಮಂಡಳಿಯ ನೈರ್ಮಲ್ಯೀಕರ ಕಾರ್ಮಿಕರ ಪಾತ್ರ ಹಿರಿದಾಗಿದೆ. ಇವರ ಸೇವೆ ಹಾಗೂ ತ್ಯಾಗವನ್ನು ಗೌರವಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಐತಿಹಾಸಿಕ “ಜಲಮಂಡಳಿ ಅನ್ನಪೂರ್ಣ ಯೋಜನೆ” ಯನ್ನು ಅನುಷ್ಠಾನಗೊಳಿಸಿದೆ ಎಂದು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹೇಳಿದರು.
ಇಂದು ಜಲಮಂಡಳಿಯ ರಜತ ಭವನದಲ್ಲಿ “ಜಲಮಂಡಳಿ ಅನ್ನಪೂರ್ಣ ಯೋಜನೆ” ಅಡಿಯಲ್ಲಿ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಿ ಮಾತನಾಡಿದರು. ಈ ಯೋಜನೆಯಡಿ 700 ಕ್ಕೂ ಹೆಚ್ಚು ನೈರ್ಮಲ್ಯೀಕರಣ ಕಾರ್ಮಿಕರಿಗೆ ಪ್ರತಿತಿಂಗಳು 1500 ರೂಪಾಯಿಗಳನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗಲಿದ್ದು, ಆರೋಗ್ಯಕರ ಉಪಾಹಾರವನ್ನು ಖಚಿತಪಡಿಸುವ ಜೊತೆಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವವನ್ನೂ ನೀಡಲಿದೆ. ಜಲಮಂಡಳಿಗೆ ದೊಡ್ಡ ಇತಿಹಾಸವಿದೆ. ಜನಸಾಮಾನ್ಯರ ಸೇವೆಯಲ್ಲಿ ತೊಡಗಿರುವ ಈ ಸಂಸ್ಥೆ ಮಾನವ ಸೇವೆಯ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು.
ನೈರ್ಮಲ್ಯೀಕರಣ ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದ್ದು, ಅವರ ಮಕ್ಕಳೂ ಡಾಕ್ಟರ್, ಇಂಜಿನಿಯರ್, ಕೆಎಎಸ್ ಅಧಿಕಾರಿಗಳಾಗಿ ಬೆಳೆವ ಕನಸು ನನಸಾಗುವಂತೆ ಸರ್ಕಾರ ನಿಂತಿದೆ ಎಂದು ಭರವಸೆ ನೀಡಿದರು. ನಗರದ ನೀರು ಮತ್ತು ಒಳಚರಂಡಿ ಸೇವೆಗಳಲ್ಲಿ ನಷ್ಟದಿಂದ ಲಾಭದತ್ತ ಸಾಗುತ್ತಿರುವ ಬದಲಾವಣೆಯನ್ನು ಉಲ್ಲೇಖಿಸಿದ ಡಿಸಿಎಂ, ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಿದ ಪರಿಣಾಮವಾಗಿ ಇಂದು ನಾಗರಿಕರಿಗೆ ಸರಳವಾಗಿ ನೀರು ದೊರೆಯುತ್ತಿದೆ ಎಂದು ತಿಳಿಸಿದರು. ಐದನೇ ಹಂತದ ಕಾವೇರಿ ಯೋಜನೆ ಯಶಸ್ವಿಯಾಗಿ ಜಾರಿಯಾಗಿದೆ, ಇದೀಗ ಬೆಳೆಯುತ್ತಿರುವ ನಗರಕ್ಕೆ ನೀರು ಪೂರೈಸಲು ಕಾವೇರಿ 6 ನೇ ಹಂತದ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಈ ಯೋಜನೆಯ ತಾಂತ್ರಿಕ ಅಂಶಗಳನ್ನು ವಿವರಿಸಿದರು. ನೈರ್ಮಲ್ಯೀಕರಣ ಕಾರ್ಮಿಕರು ನಮ್ಮ ನಗರವನ್ನು ಸ್ವಚ್ಛವಾಗಿ ಇಡಲು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಈ ಯೋಜನೆಯ ಮೂಲಕ ನಾವು ಅವರ ಶ್ರಮವನ್ನು ಗೌರವಿಸುತ್ತಿದ್ದೇವೆ. ಅವರು ಉತ್ತಮ ಉಪಹಾರ ಸೇವಿಸಲಿ ಎನ್ನುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರತಿದಿನದ ಉಪಾಹಾರಕ್ಕಾಗಿ ನೇರ ಹಣ ಪಾವತಿಸುವ ಈ ವ್ಯವಸ್ಥೆ ಕಾರ್ಮಿಕರ ಗೌರವವನ್ನು ಹೆಚ್ಚಿಸುವುದರೊಂದಿಗೆ ಇತರೆ ನಗರಗಳಿಗೆ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಮದನ್ ಮೋಹನ್, ಪ್ರಧಾನ ಮುಖ್ಯ ಎಂಜನಿಯರ್ ಬಿ.ಎಸ್. ದಲಾಯತ್, ಮುಖ್ಯ ಇಂಜಿನೀಯರ್ಗಳಾದ ಎಸ್.ವಿ.ವೆಂಕಟೇಶ,ರಾಜೀವ್, ದೇವರಾಜ್, ಜಯಶಂಕರ್, ಪರಮೇಶ, ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಆರ್ಥಿಕ ಸಲಹೆಗಾರರಾದ ಸುಬ್ಬರಾಮಯ್ಯ, ಜಲಮಂಡಳಿ ನೌಕರ ಸಂಘದ ಅಧ್ಯಕ್ಷರಾದ ಗೋವಿಂದರಾಜು, ಬೆಂಗಳೂರು ವಾಟರ್ ಸಪ್ಲೆ ಮತ್ತು ಸ್ಯಾನಿಟರಿ ವರ್ಕರ್ಸ್ ಯೂನಿಯನ್ ಅಧ್ಯಕ್ಷರಾದ ಸಿದ್ದಪ್ಪ ಸೇರಿದಂತೆ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.