ಬೆಂಗಳೂರು: “ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರದ ಪ್ರಯುಕ್ತ “ಲೋಕ ಕಲ್ಯಾಣ”ಕ್ಕಾಗಿ ವಿಶೇಷ ಪೂಜೆ ಪ್ರಾರ್ಥನೆಯನ್ನು ಮಂತ್ರಾಲಯ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ ನೆರವೇರಲಾಯಿತು.
ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ತಮ್ಮ ಅಮೃತ ಹಸ್ತದಿಂದ “ಲೋಕಕಲ್ಯಾಣಕ್ಕಾಗಿ” ಶ್ರೀಮನ್ಮೂಲರಾಮಚಂದ್ರದೇವರ ಸಂಸ್ಥಾನ ಪೂಜೆಯೊಂದಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಮಹಾ ಮಂಗಳಾರತಿಯನ್ನು ನೆರವೇರಿಸಿದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.
ತದನಂತರದಲ್ಲಿ ಪರಮಪೂಜ್ಯ ಶ್ರೀಪಾದಂಗಳವರು ಆಶೀರ್ವಚನವನ್ನು ನೀಡುತ್ತಾ ಪ್ರತಿಯೊಬ್ಬ ಭಕ್ತರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತಿಯಿಂದ ಜಪಿಸಿ ಪ್ರಾರ್ಥಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹವನ್ನು ಪಡೆದುಕೊಳ್ಳಿ ಎಂಬುದಾಗಿ ಭಕ್ತರಿಗೆ ಅನುಗ್ರಹ ಸಂದೇಶದೊಂದಿಗೆ ಸಾವಿರಾರು ಭಕ್ತರಿಗೆ ಫಲ ಮಂತ್ರಾಕ್ಷತೆ ಶೇಷ ವಸ್ತ್ರ ಅನುಗ್ರಹಿಸಿ ಮಂತ್ರಾಲಯ ಕ್ಷೇತ್ರಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಗುರುಗಳ ಪೂರ್ವಾಶ್ರಮದ ತಂದೆಯವರಾದ ಪಂಡಿತ ಕೇಸರಿ ರಾಜಾ. ಎಸ್. ಗಿರಿ ಆಚಾರ್ಯರು ಹಾಗೂ ರಾಜಾ. ಕೆ ವಾದಿಂದ್ರಾಚಾರ್ಯರು ಮತ್ತು ಭಕ್ತರು ಈ ಪೂಜಾ ವೈಭವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.