ಸೇಲಂ (ತಮಿಳುನಾಡು): ಉಕ್ಕು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಇಲ್ಲಿನ ಉಕ್ಕು ಸ್ಥಾವರಕ್ಕೆ ಉನ್ನತ ಅಧಿಕಾರಿಗಳ ಜತೆ ಭೇಟಿ ನೀಡಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು; ಸ್ಥಾವರದ ಉತ್ಪಾದನೆ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಸಭೆಗಳನ್ನು ನಡೆಸಿದರು.
ಕುಮಾರಸ್ವಾಮಿ ಅವರು ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸೇಲಂ ಉಕ್ಕು ಸ್ಥಾವರಕ್ಕೆ ಎರಡನೇ ಬಾರಿಗೆ ಭೇಟಿ ನೀಡಿದ್ದಾರೆ.
ಭಾರತೀಯ ಉಕ್ಕು ಪ್ರಾಧಿಕಾರ (SAIL) ಅಧ್ಯಕ್ಷ ಅಮರೆಂದು ಪ್ರಕಾಶ್, ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ಅಭಿಜಿತ್ ನರೇಂದ್ರ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಶುಕ್ರವಾರ ಸಂಜೆ ಹೊತ್ತಿಗೆ ಸೇಲಂ ಉಕ್ಕು ಸ್ಥಾವರಕ್ಕೆ ಆಗಮಿಸಿದ ಸಚಿವರು, ಮೊದಲು ಇಡೀ ಉಕ್ಕು ಸ್ಥಾವರವನ್ನು ವೀಕ್ಷಿಸಿ ಉತ್ಪಾದನೆ, ಮಾನವ ಸಂಪನ್ಮೂಲ, ಅದಿರು ಪೂರೈಕೆ, ವಿವಿಧ ವಿಭಾಗಗಳ ಕಾರ್ಯಕ್ಷಮತೆ ಸೇರಿದಂತೆ ಅನೇಕ ಅಗತ್ಯ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಉಕ್ಕು ಸ್ಥಾವರದಲ್ಲಿ ಸಚಿವರು ಮುಖ್ಯವಾಗಿ ಪ್ರವಾಸದ ಸಮಯದಲ್ಲಿ, ಮರುಬಳಕೆಯ ಅದರಲ್ಲಿಯೂ ಕಚ್ಛಾ ಹಳೇ ಉಕ್ಕನ್ನು ಕರಗಿಸಿ ತಯಾರು ಮಾಡಲಾಗುತ್ತಿರುವ ಗ್ರೀನ್ ಸ್ಟೀಲ್ ಉತ್ಪಾದನೆ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಸ್ಕ್ರ್ಯಾಪ್ ಯಾರ್ಡ್, ಉಕ್ಕು ಘನೀಕೃತ ವಿಭಾಗ, ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ (ಇಎಎಫ್) ಸೇರಿದಂತೆ ಕೆಲ ಪ್ರಮುಖ ಕಾರ್ಯಾಚರಣೆಯ ವಿಭಾಗಗಳಿಗೆ ಸಚಿವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಟಾರ್ಚ್ ಕಟಿಂಗ್ ಮಷಿನ್ ಮತ್ತು ಕರಗಿದ ಕಬ್ಬಿಣವನ್ನು ಹಾಟ್ ರೋಲ್ಡ್ ಕಾಯಿಲ್ಗಳು, ಕೋಲ್ಡ್ ರೋಲಿಂಗ್ ಅನ್ನಾಗಿ ಪರಿವರ್ತಿಸುವುದನ್ನು ಸಹ ವೀಕ್ಷಿಸಿದರು.
“ನಾನು ಇಲ್ಲಿ ವೀಕ್ಷಿಸಿದ ತಾಂತ್ರಿಕ ಅತ್ಯಾಧುನಿಕತೆ ಮತ್ತು ಉತ್ಪಾದನೆಯ ಕ್ಷಮತೆಯ ಮಟ್ಟವು ಶ್ಲಾಘನೀಯ. ಈ ಸ್ಥಾವರವು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗಳ ಅಡಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ” ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಜೊತೆಗೆ, ಸೇಲಂ ಉಕ್ಕು ಸ್ಥಾವರವು ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ ಆಧಾರಿತ ಮಾರ್ಗವು ಭಾರತದ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಬದ್ಧತೆಗೆ ಅನುಗುಣವಾಗಿ ಸ್ವಚ್ಛ, ಸುಸ್ಥಿರ ಉಕ್ಕಿನ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಚಿವರು ಹೇಳಿದರು.
ಅಲ್ಲದೆ, 2030ರ ವೇಳೆಗೆ ಭಾರತವು ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿ ಮಾಡಿರುವ ಗುರಿ. ಈ ಮೈಲುಗಲ್ಲು ಮುಟ್ಟುವ ನಿಟ್ಟಿನಲ್ಲಿ ಸಚಿವ ಕುಮಾರಸ್ವಾಮಿ ಅವರು ಪ್ರಮುಖವಾಗಿ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.
ಹಾಗೆಯೇ; 2070ರ ವೇಳೆಗೆ ಉಕ್ಕು ಉತ್ಪಾದನೆ ಪ್ರಕ್ರಿಯೆಯಲ್ಲಿ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಇಳಿಸುವ ಗುರಿಯನ್ನು ಹೊಂದಲಾಗಿದೆ. 2047ರ ವೇಳೆಗೆ ವಿಕಸಿತ ಭಾರತ್ ಗುರಿಯನ್ನು ಸಾಧಿಸುವ ದಿಸೆಯಲ್ಲಿ ಉಕ್ಕು ಸಚಿವಾಲಯದ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಅದಕ್ಕೆ ಪೂರಕವಾಗಿ ಸೇಲಂ ಉಕ್ಕು ಸ್ಥಾವರದಲ್ಲಿ ಕೈಗೊಳ್ಳಲಾಗಿರುವ ಸುಧಾರಣಾ ಕ್ರಮಗಳ ಬಗ್ಗೆ ಸಚಿವರು ಅಧಿಕಾರಿಗಳು ಹಾಗೂ ಸ್ಥಾವರದ ಉನ್ನತ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸ್ಥಾವರವು ಸ್ಟೇನ್ಲೆಸ್ ಸ್ಟೀಲ್ ಪೈಪ್ಗಳು, ರೈಲ್ವೆ ವ್ಯಾಗನ್ಗಳು, ಸೇತುವೆಗಳ ನಿರ್ಮಾಣ, ಸಬ್ಮರ್ಸಿಬಲ್ ಪಂಪ್ ಘಟಕ, ಖಾಲಿ ನಾಣ್ಯಗಳು, ಎಸ್ಎಸ್ ರೂಫ್ ಶೀಟ್ಗಳು, ದೇಶೀಯ ಎಲ್ಪಿಜಿ ಸಿಲಿಂಡರ್ಗಳನ್ನು ತಯಾರಿಸುವುದಕ್ಕೆ ಅಗತ್ಯವಾದ ಉಕ್ಕನ್ನು ಪೂರೈಸುವ ಮೂಲಕ ಬಹುರಾಷ್ಟ್ರೀಯ ಆದ್ಯತೆಗಳಿಗೆ ಕೊಡುಗೆ ನೀಡುತ್ತದೆ ಎಂದು ಕೇಂದ್ರ ಸಚಿವರು ಸಂತಸ ವ್ಯಕ್ತಪಡಿಸಿದರು.
ರೈಲ್ವೆ, ರಕ್ಷಣೆ, ಇಂಧನ, ಮೂಲಸೌಕರ್ಯ ಮತ್ತು ಗೃಹೋಪಯೋಗಿ ವಸ್ತುಗಳ ತಯಾರಿಕೆಯಂತಹ ನಿರ್ಣಾಯಕ ವಲಯಗಳಿಗೆ ಸೇಲಂ ಉಕ್ಕು ಸ್ಥಾವರವು ಉಕ್ಕು ಒದಗಿಸುತ್ತಿದೆ. ಹೀಗಾಗಿ ಈ ಸ್ಥಾವರವನ್ನು ಭಾರತದ ಸ್ಟೇನ್ಲೆಸ್ ಸ್ಟೀಲ್ ಪರಿಸರ ವ್ಯವಸ್ಥೆಯಲ್ಲಿ ಒಂದು ಮೂಲ ಆಧಾರ ಸ್ತಂಭ ಎಂದು ಪರಿಗಣಿಸಲಾಗಿದೆ ಎಂದು ಸಚಿವರು ಒತ್ತಿ ಹೇಳಿದರು.
*ಲಾಭದಾಯಕತೆ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಉನ್ನತ ಮಟ್ಟದ ಪರಿಶೀಲನಾ ಸಭೆ;*
ಕಾರ್ಖಾನೆಯ ಭೇಟಿ ನಂತರ ಸಚಿವರು ಉನ್ನತ ಮಟ್ಟದ ಅಧಿಕಾರಿಗಳ ಜತೆ ಪರಿಶೀಲನಾ ಸಭೆ ನಡೆಸಿದರು. ಸೇಲಂ ಉಕ್ಕು ಸ್ಥಾವರವನ್ನು ಲಾಭದಾಯಕ ಮತ್ತು ಹೆಚ್ಚಿನ ಸಾಮರ್ಥ್ಯದ ಘಟಕವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.