ಬೆಂಗಳೂರು: ಬಿಯರ್ ಮತ್ತು ಇತರ ಪಾನೀಯ ತಯಾರಿಸುವ ಡೆನ್ಮಾರ್ಕ್ನ ಜಾಗತಿಕ ಕಂಪನಿ ಕಾರ್ಲ್ಸ್ಬರ್ಗ್ ಗ್ರೂಪ್, ರಾಜ್ಯದಲ್ಲಿ ₹350 ಕೋಟಿ ಬಂಡವಾಳ ಹೂಡಿಕೆಗೆ ಮಾಡಿಕೊಂಡಿರುವ ಒಪ್ಪಂದದ ಪ್ರಗತಿಯನ್ನು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಪರಿಶೀಲಿಸಿದ್ದಾರೆ.
ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ಡೆನ್ಮಾರ್ಕ್ಗೆ ಭೇಟಿ ನೀಡಿರುವ ರಾಜ್ಯದ ಉನ್ನತ ಮಟ್ಟದ ನಿಯೋಗದ ನೇತೃತ್ವವಹಿಸಿರುವ ಸಚಿವರು, ಕಂಪನಿಯ ಸಿಇಒ ಜಾಕೊಬ್ ಆರಪ್ ಆ್ಯಂಡರ್ಸನ್ ಅವರನ್ನು ಭೇಟಿಯಾಗಿ ಫಲಪ್ರದ ಮಾತುಕತೆ ನಡೆಸಿದರು. ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರ ಸಮಾವೇಶದಲ್ಲಿ ಕಂಪನಿಯು ಸಹಿ ಹಾಕಿದ್ದ ₹350 ಕೋಟಿ ಹೂಡಿಕೆ ಒಪ್ಪಂದದ ಪ್ರಗತಿಯನ್ನು ಪರಿಶೀಲಿಸಿದರು.
ಕಾರ್ಲ್ಸ್ಬರ್ಗ್ ಸೇರಿದಂತೆ ಕೆಕೆ ವಿಂಡ್ ಸೊಲುಷನ್ಸ್, ನೊವೊನೆಸಿಸ್, ನೊವೊ ನಾರ್ಡಿಸ್ಕ್, ಡೆನ್ಮಾರ್ಕ್ ಕೈಗಾರಿಕಾ ಒಕ್ಕೂಟ (ಡಿಐ) ಮತ್ತು ಭಾರತ ಹಾಗೂ ಡೆನ್ಮಾರ್ಕ್ ವಾಣಿಜ್ಯೋದ್ಯಮ ಸಂಘ (ಐಡಿಸಿಸಿ) ಜೊತೆ ಸರಣಿಯೋಪಾದಿ ಸಭೆ ನಡೆಸಿದರು. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶಗಳನ್ನು ಡೆನ್ಮಾರ್ಕ್ ಉದ್ಯಮ ದಿಗ್ಗಜರಿಗೆ ಮನವರಿಕೆ ಮಾಡಿಕೊಟ್ಟರು.
ಎಲೆಕ್ಟ್ರಾನಿಕ್ಸ್ ಮತ್ತು ಪ್ಲಾಟ್ಫಾರ್ಮ್ ಸಿಸ್ಟಮ್ಸ್ ವಿಭಾಗದಲ್ಲಿ ರಾಜ್ಯದಲ್ಲಿನ ತನ್ನ ಉತ್ಪನ್ನಗಳ ತಯಾರಿಕೆ ವಿಸ್ತರಿಸಲು ಸಚಿವರು ಕೆಕೆ ವಿಂಡ್ ಸೊಲುಷನ್ಸ್ಗೆ ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಬೆಂಬಲ – ಸಹಕಾರಕ್ಕೆ ಕಂಪನಿಯು ತೃಪ್ತಿ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಜ್ಞಾನ, ಯೋಗಕ್ಷೇಮ ಮತ್ತು ನಾವೀನ್ಯತೆ (ಕ್ವಿನ್ ಸಿಟಿ) ಯೋಜನೆಯಲ್ಲಿ ಭಾಗಿಯಾಗಲು ನೊವೊನೆಸಿಸ್ ಆಸಕ್ತಿ ವ್ಯಕ್ತಪಡಿಸಿದೆ. ರಾಜ್ಯದಲ್ಲಿನ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಪನಿಯ ತಯಾರಿಕಾ ಸಾಮರ್ಥ್ಯ ವಿಸ್ತರಿಸಲು ಸಚಿವರು ಆಹ್ವಾನ ನೀಡಿದ್ದಾರೆ.
ಔಷಧಿ ತಯಾರಿಕೆಯ ಜಾಗತಿಕ ಪ್ರಮುಖ ಕಂಪನಿ ನೊವೊ ನಾರ್ಡಿಸ್ಕ್ ಜೊತೆಗಿನ ಸಭೆಯಲ್ಲಿ ಸಚಿವ ಪಾಟೀಲ ಅವರು ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಮನವಿ ಮಾಡಿಕೊಂಡಿದ್ದಾರೆ.
ಡೆನ್ಮಾರ್ಕ್ ಕೈಗಾರಿಕಾ ಒಕ್ಕೂಟ (ಡಿಐ) ಮತ್ತು ಭಾರತ- ಡೆನ್ಮಾರ್ಕ್ ವಾಣಿಜ್ಯೋದ್ಯಮ ಸಂಘದ (ಐಡಿಸಿಸಿ) ಪದಾಧಿಕಾರಿಗಳನ್ನು ಭೇಟಿಯಾದ ರಾಜ್ಯದ ನಿಯೋಗವು ಬಂಡವಾಳ ಹೂಡಿಕೆ ಉತ್ತೇಜನೆಗೆ ಸಾಂಸ್ಥಿಕ ಪಾಲುದಾರಿಕೆ ಸಾಧ್ಯತೆಗಳನ್ನು ಚರ್ಚಿಸಿತು.
ವಾಣಿಜ್ಯ ಬಾಂಧವ್ಯ ವೃದ್ಧಿಸಲು ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲು ಸಚಿವ ಪಾಟೀಲ ಅವರು ʼಐಡಿಸಿಸಿʼಗೆ ಆಹ್ವಾನ ನೀಡಿದರು. ರೋಡ್ಷೋನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃ̧̧ಷ್ಣ, ಕೆಐಎಡಿಬಿ ಮುಖ್ಯ ಎಂಜಿನಿಯರ್ ವೀರಭದ್ರಯ್ಯ ಅವರು ಭಾಗವಹಿಸಿದ್ದರು.