ಬೆಂಗಳೂರು ; ಕಳೆದ 1936 ರಿಂದ 2000 ಸಾಲಿನವರೆಗೆ ತಿಪ್ಪಗೊಂಡಹಳ್ಳಿ ಮೂಲಕ ರಾಜಧಾನಿ ಬೆಂಗಳೂರಿಗೆ ಪ್ರಮುಖ ಜಲಮೂಲವಾಗಿದ್ದ ಅರ್ಕಾವತಿ ನದಿಯನ್ನು ಪುನಶ್ಚೇತನಗೊಳಿಸಲು ಸಮರೋಪಾದಿಯಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರ ನಿರ್ದೇಶನದಂತೆ, ಈ ಸಂಬಂಧ ತಜ್ಞರ ಸಮಿತಿ ರಚಿಸಲು ಮತ್ತು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಡಿ ನದಿಯನ್ನು ಪುನರುಜ್ಜೀವನಗೊಳಿಸುವ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.
ಬೆಂಗಳೂರು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆಯಲ್ಲಿ ನದಿ ಪುನಶ್ಚೇತನ ಪಾಲುದಾರರ ಜೊತೆ ಸಭೆ ನಡೆಸಲಾಯಿತು. ನಂದಿ ಬೆಟ್ಟದಿಂದ ಟಿ.ಜಿ. ಹಳ್ಳಿವರೆಗೆ 53 ಕಿಲೋಮೀಟರ್ ಉದ್ದ, 1400 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಅರ್ಕಾವತಿ ನದಿಯ ಪಾತ್ರವಿದೆ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಸರ್ಕಾರದ ಹಲವಾರು ಸಂಸ್ಥೆಗಳು, ಎನ್..ಜಿ.ಒಗಳು ಮತ್ತಿತರೆ ಪಾಲುದಾರರ ಜೊತೆಗೂಡಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ.
ಸಭೆಯಲ್ಲಿ ಮಾತನಾಡಿದ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್, ಎತ್ತಿನ ಹೊಳೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಬಂದಿದ್ದರೆ ಎರಡೂ ನದಿಗಳ ನೀರನ್ನು ಮಿಶ್ರಣ ಮಾಡಿ ಪೂರೈಸುವ ಉದ್ದೇಶವಿತ್ತು. ಕುಡಿಯಲು ಯೋಗ್ಯವಾದ ರೀತಿಯಲ್ಲಿ ನೀರು ಒದಗಿಸಬೇಕಿತ್ತು.
ಬೆಂಗಳೂರು ನಗರದಲ್ಲಿ ಉಂಟಾದ ಕೈಗಾರಿಕಾ ಬೆಳವಣಿಗೆ, ಕೈಗಾರಿಕಾ ತ್ಯಾಜ್ಯ, ಪರಿಸರ ಮಾಲೀನ್ಯ, ಒಳಚರಂಡಿಯಂತಹ ಗಂಭೀರ ಸಮಸ್ಯೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಮಲಿನಗೊಂಡಿದ್ದು, ಕುಡಿಯಲು ಯೋಗ್ಯವಲ್ಲ. ಹೀಗಾಗಿ ಪುನಶ್ಚೇತನ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವ ಅಗತ್ಯವಿದೆ. ಅರ್ಕಾವತಿ ನದಿಯನ್ನು ಪುನಃಶ್ಚೇತನಗೊಳಿಸುವ ಮೂಲಕ ಬೆಂಗಳೂರು ನಗರಕ್ಕೆ ಸುಸ್ಥಿರ ನೀರಿನ ಮೂಲದ ಲಭ್ಯತೆಯನ್ನು ಸಾಕಾರಗೊಳಿಸುವಂತಹ ದೂರದೃಷ್ಟಿಯನ್ನು ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಅಧ್ಯಯನ ಹಾಗೂ ರೂಪುರೇಷೆಗಳನ್ನು ಸಿದ್ದಪಡಿಸುವಂತೆ ಡಿಸಿಎಂ ನಿರ್ದೇಶನ ನೀಡಿದ್ದರು.
ಈ ಹಿನ್ನಲೆಯಲ್ಲಿ ಐಡೆಕ್ ಸಂಸ್ಥೆ ಹೆಸರಘಟ್ಟ, ಮಾದನಾಯಕನ ಹಳ್ಳಿ, ಬಿಬಿಎಂಪಿ ಪ್ರದೇಶ ಮತ್ತಿತರೆ ನದಿತಟದ ಭಾಗದಲ್ಲಿ ಸಮಗ್ರವಾಗಿ ಅಧ್ಯಯನ ನಡೆಸಿದ್ದು, ಪುನಶ್ಚೇತನಕ್ಕಾಗಿ ವರದಿ ಸಿದ್ಧಪಡಿಸುತ್ತಿದೆ. ಪಿಪಿಪಿ ಮಾದರಿಯಲ್ಲಿ ಅರ್ಕಾವತಿ ನದಿಯನ್ನು ಪುನರುಜ್ಜೀವಿನಗೊಳಿಸುವ ಯೋಜನೆ ರೂಪಿಸಲಾಗುತ್ತಿದೆ. ನದಿ ಪಾತ್ರದಲ್ಲಿ ಜಲಮಂಡಳಿಯ ವ್ಯಾಪ್ತಿ ಪ್ರದೇಶ ಶೇ 15 ರಂದು ಮಾತ್ರ ಇದೆ. ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಸಹ ಅಧ್ಯಯನ ಮಾಡಿದ್ದು, ಎಲ್ಲರನ್ನೊಳಗೊಂಡ ತಜ್ಞರ ಸಮಿತಿ ರಚಿಸಿ ಪುನಶ್ಚೇತನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಸಭೆಯಲ್ಲಿ ಜಲಮಂಡಳಿಯ ಮುಖ್ಯ ಇಂಜಿನಿಯರ್, ಮೂಲಸೌಕರ್ಯ ಅಭಿವೃದ್ದಿ ನಿಗಮದ ಸಲಹೆಗಾರರು, ಬಿಬಿಎಂಪಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಉನ್ನತಾಧಿಕಾರಿಗಳು, ಡಿಎಂಎ, ಕೆ.ಐ.ಎ.ಡಿ.ಬಿ, ಕೆ.ಎಸ್.ಪಿ.ಸಿ.ಬಿ, ಬಿಡಿಎ, ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ, ಜಲ ಸಂಪನ್ಮೂಲ, ದೊಡ್ಡಬಳ್ಳಾಪುರ, ಮಾದನಾಯಕನಹಳ್ಳಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಆರ್.ಡಿ.ಡಬ್ಲ್ಯುಎಸ್ಡಿ, ಕೆ.ಯು.ಡಬ್ಲ್ಯು.ಎಸ್ ಅಂಡ್ ಡಿಬಿ, ಪನಲ್ ಅರ್ಥ್, ಆರ್ಟ್ ಆಫ್ ಲೀವಿಂಗ್, ಬೈಯೋಮಿ ಟ್ರಸ್ಟ್, ಭಾರತೀಯ ವಿಜ್ಞಾನ ಮಂದಿರ ವಿಜ್ಞಾನಿ ತಂಡದ ಸದಸ್ಯರು ಉಪಸ್ಥಿತರಿದ್ದರು.