ಬೆಂಗಳೂರು: ಜನರೊಂದಿಗೆ ಜನತಾದಳ ಎಂಬ ಹೆಸರಿನಲ್ಲಿ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಗೆ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಾಳೆಯಿಂದ ಎರಡು ದಿನಗಳ ಕಾಲ ರಾಮನಗರ ಜಿಲ್ಲೆಯಲ್ಲಿ ನಡೆಯಲಿದೆ.
ಪಕ್ಷ ಸಂಘಟನೆಗಾಗಿ ಹಮ್ಮಿಕೊಳ್ಳಲಾಗಿರುವ ರಾಜ್ಯ ಪ್ರವಾಸ ಹಾಗೂ ʼಮಿಸ್ ಕಾಲ್ʼ ಸದಸ್ಯತ್ವ ಈಗಾಗಲೇ ತುಮಕೂರು ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ನಾಲ್ಕು ದಿನಗಳ ಪ್ರವಾಸವನ್ನು ಯಶಸ್ವಿಯಾಗಿ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭೆ ಕ್ಷೇತ್ರದಿಂದ ಆರಂಭವಾದ ರಾಜ್ಯ ಪ್ರವಾಸ ಹಾಗೂ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು ನನ್ನ ರಾಜ್ಯ ಪ್ರವಾಸಕ್ಕೆ ಮತ್ತಷ್ಟು ಹುರುಪು ಬಂದಿದೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕನಿಷ್ಠ ಐವತ್ತು ಲಕ್ಷ ಜನ ಸದಸ್ಯತ್ವದ ಗುರಿ ಇಟ್ಟುಕೊಂಡು ರಾಜ್ಯ ಪ್ರವಾಸ ಆರಂಭಿಸಿರುವ ಅವರು ನಾಳೆಯಿಂದ ಬಹುತೇಕ ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡಲಿದ್ದಾರೆ, 58 ದಿನಗಳ ಕಾಲ ನಿಮ್ಮ ಜೊತೆ ನಿರಂತರವಾಗಿ ಹೆಜ್ಜೆ ಹಾಕಲಿದ್ದಾರೆ.ಎಲ್ಲಾ ಜಿಲ್ಲೆಯ ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷಕ್ಕೆ ಬಲ ತುಂಬುವಂತ ಕೆಲಸ ಮಾಡಲಿದ್ದಾರೆ.
ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ನಿಮ್ಮೆಲ್ಲರ ದುಡಿಮೆಗೆ ತಕ್ಕಂತೆ ಅಧಿಕಾರ ಕೊಡಿಸಿದಾಗ ಮಾತ್ರ ನಿಮ್ಮೆಲ್ಲರ ಋಣ ತೀರಿಸಿದಂತಾಗುತ್ತದೆ. ಇದು ನನ್ನ ನಂಬಿಕೆ ಮತ್ತು ವಿಶ್ವಾಸಕ್ಕೆ ನಾನು 58 ದಿನಗಳ ಪ್ರವಾಸ ಆರಂಭಿಸಿದ್ದೇನೆ ಹೀಗೆ ನಿಮ್ಮಸಹಕಾರ ನಿರಂತರವಾಗಿರಲಿ ಎಂದು ಮನವಿ ಮಾಡಿದರು.
ನಾನು ಆಗಮಿಸಿದಾಗ ನೀವು ನನಗೆ ತೋರಿದ ಅಭಿಮಾನಕ್ಕೆ ಚಿರಋಣಿ ಹಾಗೂ ಕಾರ್ಯಕರ್ತರು ಮನೆಗೆ ಕರೆದು ಸತ್ಕರಿಸಿದ ಸಂದರ್ಭದಲ್ಲಿ ತಾಯಂದಿರು, ಅಣ್ಣತಮ್ಮಂದಿರು ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಧನ್ಯನಾಗಿದ್ದೇನೆ. ನೀವೆಲ್ಲರೂ ಕಳೆದ 26 ವರ್ಷಗಳಿಂದ ಈ ಪಕ್ಷದ ಮೇಲಿಟ್ಟಿರುವ ಅಭಿಮಾನ, ಬದ್ಧತೆಯಿಂದ ಜೆಡಿಎಸ್ ಸುಭದ್ರವಾಗಿದೆ.
ದೇವೇಗೌಡರು ಮತ್ತು ಕುಮಾರಣ್ಣನವರಿಗೆ ನೀವು ತೋರಿಸಿದಷ್ಟು ಪ್ರೀತಿಯನ್ನೇ ನನಗೂ ತೋರಿಸಿದ್ದೀರಿ. ನನ್ನ ಕೊನೆಯ ಉಸಿರು ಇರುವವರೆಗೂ ಪಕ್ಷವನ್ನು ಕಟ್ಟಲು ನನ್ನ ಹೋರಾಟ ನಿರಂತರವಾಗಿರುತ್ತದೆ. ನಾವೆಲ್ಲರೂ ಜೊತೆಯಾಗಿ ಹೆಜ್ಜೆ ಹಾಕೋಣ. ಬಲಿಷ್ಠವಾಗಿ ಪಕ್ಷ ಕಟ್ಟೋಣ, ಮತ್ತೆ ಕುಮಾರಣ್ಣನವರನ್ನು ಮುಖ್ಯಮಂತ್ರಿ ಮಾಡೋಣ ಎಂದರು.
ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ, ಕಾರ್ಯಕರ್ತರ ಶ್ರಮದಿಂದ ಕಟ್ಟಿರುವ ಪಕ್ಷ ನಮ್ಮದು, ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ಹಿರಿಯರು ನನಗೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. 50 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಮಾಡುವ ಉದ್ದೇಶದಿಂದ ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಗಿದೆ.
ನನ್ನ ರಾಜ್ಯ ಪ್ರವಾಸ ಮೂಲಕ ಕಾರ್ಯಕರ್ತರೊಂದಿಗೆ ಸಂಬಂಧ, ಬಾಂಧವ್ಯ, ವಿಶ್ವಾಸ ಬೆಳೆಸಿಕೊಳ್ಳಬೇಕು. ಇಂತಹ ಪ್ರವಾಸ ಮಾಡುತ್ತಿರುವುದು ನನ್ನ ಭಾಗ್ಯ, ಅವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು. ಅವರ ವಿಶ್ವಾಸ ಗಳಿಸಬೇಕು. ಅವರಲ್ಲಿ ಉತ್ಸಾಹ ತುಂಬಬೇಕು ಹೀಗಾಗಿ ನಾನು ಈ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ.