ಬೆಂಗಳೂರು: ಮತಗಳ್ಳತನ ಎಂದು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪವು ಪರಮಸುಳ್ಳು ಎಂದಿರುವ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ; ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.
ಅಲ್ಲದೆ, ದಾಖಲೆಗಳ ಸಮೇತ ರಾಹುಲ್ ಗಾಂಧಿ ಆರೋಪ ಸುಳ್ಳು ಎಂದು ನಿರೂಪಿಸಿರುವ ಅವರು; ಕಾಂಗ್ರೆಸ್ ಪಕ್ಷವೇ ಮತಗಳ್ಳತನದಲ್ಲಿ ನಿರತವಾಗಿದೆ ಎಂದು ದೂರಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ರಾಹುಲ್ ಗಾಂಧಿ ಅವರು ಆಯೋಗಕ್ಕೆ ಐದು ಪ್ರಶ್ನೆ ಕೇಳಿದ್ದಾರೆ. ಜೆಡಿಎಸ್ ಕೂಡ ಅವರಿಗೆ ಐದು ಪ್ರಶ್ನೆ ಕೇಳುತ್ತದೆ. ನೈತಿಕತೆ ಇದ್ದರೆ ಅವರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.
*ಐದು ಪ್ರಶ್ನೆಗಳು ಇವೇ:*
*ನೀವು ಚುನಾವಣಾ ಆಯೋಗಕ್ಕೆ ಉತ್ತರ ಕೊಡುವುದಕ್ಕೆ ಹೆದರುತ್ತಿರುವುದು ಯಾಕೆ?
*ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕುಣಿಗಲ್ ಸೇರಿ ಅನೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಗಿಫ್ಟ್ ಕೂಪನ್ ಹಂಚಿ ಗೆದ್ದಿದ್ದೀರಿ. ಇದು ಮತಗಳ್ಳತನ ಅಲ್ಲವೇ?
*ಗೃಹಲಕ್ಷ್ಮೀ ಗ್ಯಾರಂಟಿಯನ್ನು ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತೀರಿ. ಚುನಾವಣೆ ಬಂದ ಕೂಡಲೇ ನಾಲ್ಕುಐದು ತಿಂಗಳ ಗೃಹಲಕ್ಷ್ಮೀ ಹಣ ಜಮೆ ಮಾಡುತ್ತೀರಿ. ನಿಯಮಿತವಾಗಿ ಪ್ರತೀ ತಿಂಗಳು ಜಮೆ ಮಾಡುತ್ತಿಲ್ಲ, ಯಾಕೆ? ಇದು ಚುನಾವಣಾ ಅಕ್ರಮ ಅಲ್ಲವೇ?
*ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 9 ಲೋಕಸಭೆ ಕ್ಷೇತ್ರಗಳಲ್ಲಿ ಮತಗಳ್ಳತನ ಆಗಿಲ್ಲವೇ? ಆಗಿಲ್ಲದಿದ್ದರೆಮತಗಳ್ಳರಿಗೆ ನಿಮ್ಮ ಮೇಲೆ ವಿಶೇಷ ಪ್ರೀತಿ ಯಾಕೆ?
*ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಅತೀ ಕಡಿಮೆ ಅಂತರದಿಂದ ನಿಮ್ಮ ಶಾಸಕರು ಗೆದ್ದಿದ್ದಾರೆ. ಹಾಗಿದ್ದರೆ ಅವರೂ ಮತಗಳ್ಳತನ ಮಾಡಿಯೇ ಗೆಲುವು ಸಾಧಿಸಿದ್ದಾರೆಯೇ?
ನೀವು ಚುನಾವಣಾ ಆಯೋಗಕ್ಕೆ ಐದು ಪ್ರಶ್ನೆ ಕೇಳಿದ್ದೀರಿ. ನಾನೂ ನಿಮ್ಮನ್ನು ಐದು ಪ್ರಶ್ನೆ ಕೇಳುತ್ತೇನೆ. ಉತ್ತರಿಸಿ. ಎಲೆಕ್ಷನ್ ಕಮಿಷನ್ ಉತ್ತರ ಕೊಡಿ ಎಂದರೆ ನಾನು ನಿಮ್ಮಂತೆಯೇ ಜಾರಿಕೊಳ್ಳುವುದಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ರಮೇಶ್ ಗೌಡರು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದರು.
ಕಾಂಗ್ರೆಸ್ 136 ಕ್ಷೇತ್ರ ಗೆದ್ದಿದೆ, ಹಾಗಾದರೆ ಮತಗಳ್ಳತನ ಮಾಡಿ ಗೆದ್ದಿದೆಯಾ ಎಂದು ಪ್ರಶ್ನೆ*
ರಾಹುಲ್ ಗಾಂಧಿ ಅವರು ಲೋಕಸಭೆಯ ಪ್ರತಿಪಕ್ಷ ನಾಯಕ ಎಂಬುದನ್ನು ಮರೆತಿದ್ದಾರೆ. ಅವರು ಲೋಕಸಭೆಯಲ್ಲಿ ಈ ವಿಷಯವನ್ನು ಮಾತನಾಡಬೇಕೆ ಹೊರತು ಹಾದಿ ಬೀದಿಯಲ್ಲಿ ರಂಪ ಮಾಡಬಾರದು. ಬೆಂಗಳೂರಿಗೆ ಬಂದು ಅವರದೇ ಪಕ್ಷದ ಸರ್ಕಾರ ಇರುವ ರಾಜ್ಯದಲ್ಲಿ ಆಡಳಿತ ತಂತ್ರವನ್ನು ದುರುಪಯೋಗ ಮಾಡಿಕೊಂಡು ಪ್ರತಿಭಟನೆ ಪ್ರಹಸನ ನಡೆಸಿ ಹೋಗಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.
ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಿದೆವು. ಆದರೆ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲು ಆಗಲಿಲ್ಲ. ಆದರೂ ನಾವು ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣೆ ಆಯೋಗವನ್ನು ದೂರುವ ಕೆಲಸ ಮಾಡಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರು 136 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದರು. ಇಷ್ಟು ಕರಾರುವಕ್ಕಾಗಿ ಸಂಖ್ಯೆ ಹೇಳಬೇಕು ಎಂದರೆ ಅವರೇನು ಬ್ರಹ್ಮನೇ. ಅವರು ಹೇಳಿದ ಪ್ರಕಾರವೇ 136 ಸ್ಥಾನ ಗೆದ್ದಿದ್ದಾರೆ. ಹಾಗಾದರೆ ಇವರೂ ರಿಗ್ಗಿಂಗ್ ಮಾಡಿ, ಮತಗಳ್ಳತನ ಮಾಡಿ ಗೆದ್ದಿದ್ದಾರಾ? ಇಂದು ರಮೇಶ್ ಗೌಡ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಯವರು ಅಧಿವೇಶನದಲ್ಲಿ ಇದೆಲ್ಲಾ ಮಾತಾಡಬಹುದಲ್ವಾ? ಅಲ್ಲಿ ಸಮಯ ಹಾಳು ಮಾಡಿ, ಹಾದಿಬೀದಿಯಲ್ಲಿ ಮಾತಾಡೋದು ಯಾಕೆ? ಅವರಿಗೆ ಕೇವಲ ಬಿಹಾರ ಚುನಾವಣೆಯಲ್ಲಿ ಜನರ ಗಮನ ಬೇರೆಡೆಗೆ ಸೆಳೆದು ಮತ ಗಳಿಕೆ ಮಾಡುವ ಏಕೈಕ ದುರುದ್ದೇಶದಿಂದ ಆಯೋಗದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಹಾರದಲ್ಲಿ ಸೋಲುವ ಹತಾಶೆ ಅವರನ್ನು ಕಾಡುತ್ತಿದೆ ಎಂದು ಅವರು ಹೇಳಿದರು.
*ರಾಹುಲ್ ಗಾಂಧಿ ಲೆಕ್ಕ ಸುಳ್ಳು:*
ರಾಹುಲ್ ಗಾಂಧಿ ಅಸತ್ಯದ ಮಾಹಿತಿ ಇಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರು ತಮ್ಮ ಪಕ್ಷ ಮತಗಳ್ಳತನದಲ್ಲಿ ತೊಡಗಿತ್ತು ಎಂಬುದನ್ನು ಮರೆಮಾಚುವ ದುರುದ್ದೇಶದಿಂದ ಜನರ ಗಮನ ಬೇರೆಡೆಗೆ ಸೆಳೆಯುವ ನಾಟಕ ಆಡುತ್ತಿದ್ದಾರೆ. ಶಿವಾಜಿನಗರ, ಸರ್ವಜ್ಞನಗರ ಸೇರಿದಂತೆ ನಗರದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತಗಳ್ಳತನ ಮಾಡಿದೆ. ಅದಕ್ಕೆ ದಾಖಲೆಗಳು ಇವೆ ಎಂದ ರಮೇಶ್ ಗೌಡ ಅವರು, ಮಾಧ್ಯಮಗೋಷ್ಟಿಯಲ್ಲಿ ಕೆಲ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಗೆದ್ದಿರುವ ಬಹುತೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ. ತಾವು ಅಂತಹ ತಪ್ಪು ಮಾಡಿ ಆಯೋಗದ ಮೇಲೆ ರೂಪ ಕಾಡುತ್ತಿದೆ ಕಾಂಗ್ರೆಸ್. ಈ ದಾಖಲೆಗಳ ಬಗ್ಗೆ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ನಾಯಕರು ಮಾತನಾಡಬೇಕು. ನಾನು ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಚರ್ಚೆಗೆ ಬರಲಿ, ನಾನು ತಯಾರಿದ್ದೇನೆ ಎಂದು ರಮೇಶ್ ಗೌಡರು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡರು, ಬೆಂಗಳೂರು ನಗರ ಕಾರ್ಯಾಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ಮಹಾಪ್ರಧಾನ ಕಾರ್ಯದರ್ಶಿ ಎಸ್. ರಮೇಶ, ಪಕ್ಷದ ವಕ್ತಾರರಾದ ಹೆಚ್.ಎನ್. ದೇವರಾಜ್, ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಅಧ್ಯಕ್ಷ ನಾಗೇಶ್ವರ ರಾವ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಪ್ರವೀಣ್ ಕುಮಾರ್, ಹಾಗೂ ಬೆಂಗಳೂರು ನಗರದ ವಿವಿಧ ವಿಭಾಗಗಳ ಅಧ್ಯಕ್ಷರುಗಳಾದ ಫಣಿರಾಜ್ ಹಿರಿಯಣ್ಣ ಗೌಡ, ಎಂ.ಗೋಪಾಲ, ವೇಣುಗೋಪಾಲ್, ಆರ್. ಎಲ್.ಎನ್ . ಮೂರ್ತಿ, ಆರ್. ಕುಮಾರ್, ಓಬಳೇಶ್ ಮುಂತಾದವರು ಭಾಗವಹಿಸಿದ್ದರು.