ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿ ಹೆಸರನ್ನು ಬದಲಾಯಿಸಲು ಸಿದ್ಧನಿದ್ದೇನೆ. ಆದರೆ ಕಲಾವಿದರೆಲ್ಲರೂ ಒಮ್ಮತದಿಂದ ಚರ್ಚಿಸಿ ಸೂಕ್ತ ಹೆಸರು ಸೂಚಿಸಬೇಕು. ನೀವು ನೀಡಿದ ಹೆಸರನ್ನು ಸಚಿವ ಸಂಪುಟದ ಮುಂದಿಟ್ಟು ಒಪ್ಪಿಗೆ ಕೊಡಿಸುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿ ಭರವಸೆ ನೀಡಿದರು.
ರವೀಂದ್ರಕಲಾ ಕ್ಷೇತ್ರದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಸಾಧಕ ಚಿತ್ರಕಲಾವಿದರಿಗೆ ‘ಗೌರವ ಪ್ರಶಸ್ತಿ’ ಮತ್ತು ‘ವರ್ಣಶ್ರೀ ಪ್ರಶಸ್ತಿ’ ಪ್ರದಾನ ಮಾಡಿ ಶುಕ್ರವಾರ ಮಾತನಾಡಿದರು.
‘ನಮ್ಮ ಸರ್ಕಾರ ನಾಡಿನ ಕಲೆ, ಸಂಸ್ಕೃತಿಯನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ 14 ಅಕಾಡೆಮಿಗಳಿಗೂ ತಲಾ ₹1 ಕೋಟಿ ಅನುದಾನ ಒದಗಿಸಲಾಗಿದೆ’ ಎಂದರು.
‘ಹಿಂದಿನ ಸರ್ಕಾರ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ನೇಮಿಸಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣದಲ್ಲೇ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷ, ನಿರ್ದೇಶಕರನ್ನು ನೇಮಿಸಿದ್ದೇವೆ. ಎಲ್ಲ ಅಕಾಡೆಮಿಗಳ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ’ ಎಂದು ತಿಳಿಸಿದರು.
ಈಗಾಗಲೇ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಭಾಷಣದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಹೆಸರನ್ನು ಬದಲಾಯಿ ಸುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ. ಚಿತ್ರಕಲಾ ಅಕಾಡೆಮಿ ಎಂದು ಹೆಸರಿಸಿ ಎಂದಿದ್ದಾರೆ. ಆದರೆ ವೇದಿಕೆ ಮುಂದಿದ್ದ ಕೆಲವು ಹಿರಿಯ ಕಲಾವಿದರು ದೃಶ್ಯ ಕಲಾ ಅಕಾಡೆಮಿ ಎಂದು ಹೆಸರಿಡಿ ಎಂದಿದ್ದಾರೆ. ಹೀಗಾಗಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂಥ ಒಂದು ಹೆಸರು ಸೂಚಿಸಿ ಎಂದರು.
‘ಅಕ್ಷರ ಲಿಪಿ ಹುಟ್ಟುವುದಕ್ಕೂ ಮುನ್ನವೇ ಚಿತ್ರಲಿಪಿ ಹುಟ್ಟಿತ್ತು. ಚಿತ್ರಕಲೆಗೆ ಇರುವ ಶಕ್ತಿ ಅಗಾಧವಾದುದು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.
‘ಬಣ್ಣಕ್ಕೆ ಅದರದ್ದೇ ಆದ ಭಾವ ಇರುತ್ತದೆ. ಸಾಹಿತ್ಯಕ್ಕೂ ಮತ್ತು ಚಿತ್ರಕಲೆಗೂ ಸಂಬಂಧವಿದೆ. ಚಿತ್ರಗಳ ಮೂಲಕವೇ ಕಥೆಯನ್ನು ಹೇಳಲಾಗುತ್ತದೆ. ಪಠ್ಯ ಪುಸ್ತಕದಲ್ಲಿ ಚಿತ್ರಕಲೆಯ ಮಹತ್ವ ಹೆಚ್ಚಿದೆ’ ಎಂದು ತಿಳಿಸಿದರು. ಹಲವು ವರ್ಷಗಳು ಲಲಿತ ಕಲಾ ಅಕಾಡೆಮಿಯಿಂದ ಕೊಡಮಾಡುವ ಪ್ರಶಸ್ತಿಗಳು ನಿಂತು ಹೋಗಿದ್ದವು, ಅದನ್ನು ಪ್ರಸ್ತುತ ಇರುವ ಸರ್ಕಾರ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಅಕಾಡೆಮಿ ಪರವಾಗಿ ಬರಗೂರು ರಾಮಚಂದ್ರಪ್ಪ ಅವರ ಬೇಡಿಕೆಗಳು
ಲಲಿತಾ ಕಲಾ ಅಕಾಡೆಮಿ ಬದಲಿಸಲು ಸರ್ಕಾರಕ್ಕೆ ಒತ್ತಾಯ, ಕಲಾವಿದರಿಗೆ ಚಿತ್ರಗಳನ್ನು ಪ್ರದರ್ಶಿಸಲು ಒಂದು ಗ್ಯಾಲರಿ ಇಲ್ಲ. ಗ್ಯಾಲರಿ ಮಾಡಿಕೊಡಬೇಕು, ಸರ್ಕಾರದ ಇಲಾಖೆಯಲ್ಲಿ ಅಕಾಡೆಮಿಯಿಂದ ಮೂಡಿಬಂದಿರುವ ಚಿತ್ರಗಳನ್ನು ಕಚೇರಿಯಲ್ಲಿ ತೆಗೆದುಕೊಳ್ಳುವ ಹಾಕುವ ಆದೇಶ ಹೊರಡಿಸಬೇಕು, ಚಿತ್ರಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಬೇಕು, ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರಶಸ್ತಿ ಕೊಡುವ ಕೆಲಸ ವಾಗಬೇಕು,
ವಿವಿಧ ವಿಭಾಗದಲ್ಲಿ ಪ್ರಶಸ್ತಿ ಪಡೆದವರು
ಗೌರವ ಪ್ರಶಸ್ತಿ: ಬಿ.ಪಿ.ಕಾರ್ತಿಕ್ ಕಮಲ್ ಅಹ್ಮದ್ ಎಂ. ಸಿ.ಎಸ್.ನಿರ್ಮಲಾ ಕುಮಾರಿ ಅವರಿಗೆ 2022-23ನೇ ಸಾಲಿನ ‘ಗೌರವ ಪ್ರಶಸ್ತಿ’ ಹಾಗೂ ನಿಜಲಿಂಗಪ್ಪ ಬ.ಹಾಲ್ವಿ ಡಾ.ವಿಠಲರಡ್ಡಿ ಫ.ಚುಳಕಿ ಹಾಗೂ ಎಚ್. ಬಾಬುರಾವ್ ಅವರಿಗೆ 2023-24ನೇ ಸಾಲಿನ ‘ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ವರ್ಣ ಪ್ರಶಸ್ತಿ: ವೀಣಾ ಶ್ರೀನಿವಾಸ್ ಪರಮೇಶ್ ಡಿ.ಜೋಳದ ಪಿ.ಎ.ಬಿ.ಈಶ್ವರ್ ಕೂಡಲಯ್ಯ ಹಿರೇಮಠ ಅಶೋಕ್ ಕಲಶೆಟ್ಟಿ ನಂದಬಸಪ್ಪ ವಾಡೆ ಕೆ.ಜಿ.ಲಿಂಗದೇವರು ಬಿ.ಎಲ್.ಮಹೇಶ್ ಶಕುಂತಲಾ ವರ್ಣೇಕರ್ ಮಂಜುನಾಥ ಗೋವಿಂದವಾಡ ಅವರಿಗೆ 2021-22ನೇ ಸಾಲಿನ ಪ್ರಶಸ್ತಿ ಹಾಗೂ ಪ್ರಕಾಶ್ ಜಿ.ನಾಯಕ್ ಬಸವರಾಜ ಸಿ.ಕುತ್ನಿ ಜಗದೀಶ್ ಎಂ.ಕಾಂಬಳೆ ಟಿ.ಎಸ್.ಜಯದೇವಣ್ಣ ಶ್ರೀಶೈಲ ಎಸ್.ಧೋತ್ರೆ ಎ.ಮಹದೇವಸ್ವಾಮಿ ಮೀನಾಕ್ಷಿ ಸದಲಗಿ ಕೆ.ಎಂ.ರವೀಶ್ ಎಫ್.ವಿ.ಚಿಕ್ಕಮಠ ಸೈಯದ್ ಆಸೀಫ್ ಅಲಿ ಅವರಿಗೆ 2022-23ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲಲಿತಾ ಕಲೆ ಅಕಾಡಮೆ ಹೆಸರು ಬದಲಿಗೆ ಮನವಿ
ಲಲಿತಕಲಾ ಅಕಾಡೆಮಿಯ ಹೆಸರನ್ನು ಬದಲಿಸುವಂತೆ ಅಕಾಡೆಮಿಯ ಅಧ್ಯಕ್ಷರು ಹಾಗೂ ಹಿರಿಯ ಕಲಾವಿದರು ವೇದಿಕೆಯಲ್ಲಿದ್ದ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಹೆಸರು ಬದಲಾಯಿಸಲು ನಮ್ಮ ವಿರೋಧ ಇಲ್ಲ. ಅಕಾಡೆಮಿ ಸದಸ್ಯರು ಹಾಗು ಕಲಾವಿದರು ಒಕ್ಕರಲಿನಿಂದ ಒಂದು ಹೆಸರನ್ನು ಶಿಫಾರಸ್ಸು ಮಾಡಿದರೆ ಮುಖ್ಯ ಮಂತ್ರಿಯವರ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು.
ಕಾರ್ಯಕ್ರಮದಲ್ಲಿ ಲಲಿತಾಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎಂ.ವಿ. ವೆಂಕಟೇಶ್, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ , ಅಕಾಡೆಮಿಯ ಕುಲಪತಿ ಇನ್ನಿತರರು ಉಪಸ್ಥಿತರಿದ್ದರು.