ಬೆಂಗಳೂರು: ರಾಜ್ಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯಲೋಪ ಮತ್ತು ಗಂಭೀರ ದುರ್ನಡತೆ, ಅಧಿಕಾರ ದುರ್ಬಳಕೆ ಸೇರಿದಂತೆ ಪೊಲೀಸ್ ದೌರ್ಜನ್ಯ ವಿರುದ್ದ ಸಲ್ಲಿಸುವ ದೂರುಗಳ ಆದೇಶಗಳನ್ನು ಕನ್ನಡದಲ್ಲೇ ಹೊರಡಿಸುವಂತೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷರಾದ ಜಸ್ಟೀಸ್ ಎನ್.ಕೆ.ಸುಧೀಂದ್ರ ರಾವ್ ರವರಿಗೆ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ!.
ರಾಜ್ಯದಿಂದ ದೂರುಸಲ್ಲಿಸುವ ದೂರುದಾರರು ಬಹುತೇಕ ಕೆಳ ಮತ್ತು ಮಧ್ಯಮ ವರ್ಗದವರಾಗಿದ್ದು ಬಹುತೇಕ ಜನರು ಪೂರಕ ಶಿಕ್ಷಣ ಪಡೆದವರಾಗಿದ್ದು ಗ್ರಾಮೀಣ ಭಾಗದವರಾಗಿರುತ್ತಾರೆ, ಕೆಲವರು ದೂರು ಬರೆಯಲು ಶಕ್ತರಾದರೆ ಇನ್ನು ಕೆಲವರು ಶಿಕ್ಷಣವಂತರ ಹಾಗೂ ವಕೀಲರ ಸಹಾಯದಿಂದ ದೂರು ಬರೆಯಿಸಿ ಪ್ರಾಧಿಕಾರದಲ್ಲಿ ಸಲ್ಲಿಸುತ್ತಿದ್ದು, ವಿಚಾರಣೆ ಕೈಗೊಂಡ ಸಂದರ್ಭದಲ್ಲಿ ಆಂಗ್ಲ ಭಾಷೆಯಲ್ಲಿ ಆದೇಶ ಘೋಷಣೆ ಮತ್ತು ದೂರಿನ ಅಂತಿಮ ಆದೇಶ/ನಡಾವಳಿಗಳನ್ನು ಆಂಗ್ಲಭಾಷೆಯಲ್ಲಿ ಹೊರಡಿಸುತ್ತಿರುವುದರಿಂದ ದೂರುದಾರರಿಗೆ ಅರ್ಥವಾಗದೇ ನಡಾವಳಿಯಲ್ಲಿನ ವಿಷಯ ತಿಳಿಯಲು ಕಷ್ಟಕರವಾಗಿರುತ್ತದಲ್ಲದೆ ಮತ್ತೊಬ್ಬರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇರುತ್ತದೆ.
ಸಾರ್ವಜನಿಕ ಹಿತಾದೃಷ್ಟಿಯಿಂದ ಪ್ರಾಧಿಕಾರದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದಂತೆ ಪ್ರಸ್ತುತ ಬಾಕಿ ಇರುವ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಆದೇಶ/ತೀರ್ಪುಗಳನ್ನು ಕನ್ನಡದಲ್ಲೇ ಹೊರಡಿಸುಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಒತ್ತಾಯಿಸಿದ್ದಾರೆ.