ಬೆಂಗಳೂರು : ನಾರಾಯಣ ಗುರುಗಳು ಇಡೀ ಸಮಾಜದ ಆಸ್ತಿಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿಂತನೆ, ಹೋರಾಟಗಳ ಉದ್ದೇಶವನ್ನು ಜನರು ಅರ್ಥೈಸಿಕೊಳ್ಳಬೇಕಿದೆ. ನಾರಾಯಣಗುರುಗಳು ಯಾವುದೇ ಒಂದು ಸಮುದಾಯ, ಜಾತಿಗೆ ಮೀಸಲಾಗದೇ, ಇಡೀ ಸಮಾಜದ ಆಸ್ತಿಯಾಗಿದ್ದಾರೆ. ಸಮಾಜದಲ್ಲಿರುವ ಜಾತಿವ್ಯವಸ್ಥೆ, ಮೂಢನಂಬಿಕೆ, ಅಂಧಶ್ರದ್ದೆಯಿದೆ. ಇತಿಹಾಸದಲ್ಲಿ ನಮ್ಮ ಸಮಾಜದಲ್ಲಿ ಅನಕ್ಷರತೆಯಿದ್ದು, ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ. ನಾರಾಯಣ ಗುರುಗಳು’ ವಿದ್ಯೆಯಿಂದ ಸ್ವತಂತ್ರರಾಗಿರಿ’ ಎಂಬ ಮಾತನ್ನು ಪ್ರತಿಪಾದಿಸಿರುವುದಾಗಿ ಸಿಎಂ ತಿಳಿಸಿದರು.
*ಬಡವರಿಗೆ ಶಕ್ತಿ ತುಂಬಿದಾಗ ಸಮಾಜಕ್ಕೆ ಚಲನೆ ದೊರೆಯುತ್ತದೆ*
ಜಾತಿವ್ಯವಸ್ಥೆಯಿಂದ ಮೇಲುಕೀಳು, ಅಸಮಾನತೆ ಹೆಚ್ಚಿದ್ದು, ಇದರಿಂದಾಗಿ ಸಾಮಾಜಿಕವಾಗಿ , ಆರ್ಥಿಕವಾಗಿ ಜನರು ಹಿಂದುಳಿಯುವಂತಾಗಿದೆ. ನಮ್ಮ ಜಾತಿವ್ಯವಸ್ಥೆಯಲ್ಲಿ ಚಲನೆಯಿಲ್ಲದಿರುವ ಕಾರಣ, ಸಮಾಜದಲ್ಲಿ ಜಡತ್ವ ಮನೆಮಾಡಿದೆ. ಸಮಾಜದಲ್ಲಿನ ಜಡತ್ವವನ್ನು ಕೊನೆಗಾಣಿಸಲು, ಅಶಕ್ತರಿಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಶಕ್ತಿಯನ್ನು ತುಂಬಬೇಕು. ಎಲ್ಲ ಬಡವರಿಗೆ ಶಕ್ತಿ ತುಂಬಿದಾಗ ಮಾತ್ರ ಸಮಾಜಕ್ಕೆ ಚಲನೆ ದೊರೆಯುತ್ತದೆ. ದೇವಸ್ಥಾನಕ್ಕೆ ಪ್ರವೇಶ ದೊರೆಯದಿದ್ದರೆ, ದೇವಸ್ಥಾನವೇ ನಿಮ್ಮ ಬಳಿ ಕರೆತರಲು ಪ್ರಯತ್ನಿಸಿ ಎಂದು ನಾರಾಯಣಗುರುಗಳು ತಿಳಿಸಿದ್ದರು. ನಾರಾಯಣಗುರುಗಳ ಕಾಲಮಾನದಲ್ಲಿ ಕೇರಳದಲ್ಲಿ ಶೂದ್ರವರ್ಗದವರನ್ನು ತುಚ್ಛವಾಗಿ ಕಾಣುವ ಪರಿಸ್ಥಿತಿಯಿತ್ತು ಎಂದು ಮುಖ್ಯಮಂತ್ರಿಯವರು ವಿವರಿಸಿದರು.
*ಪರ್ಯಾಯ ವ್ಯವಸ್ಥೆ ಹುಡುಕಿದ ನಾರಾಯಣ ಗುರುಗಳು*
ಪರ್ಯಾಯ ವ್ಯವಸ್ಥೆಯನ್ನು
ನಾರಾಯಣ ಗುರುಗಳು ಹುಡುಕಿದರು. ಅವರು ಮೊದಲನೇ ದೇವಸ್ಥಾನ ಕಟ್ಟಿದ್ದು 1885ರಲ್ಲಿ. ಅಲ್ಲಿಂದೀಚೆಗೆ 150ಕ್ಕೂ ಹೆಚ್ಚು ದೇವಸ್ಥಾನಗಳನ್ನು ಕಟ್ಟಿದರು. ಮೇಲ್ಜಾತಿಯವರೇ ಪೂಜಾರಿಗಳಾಗಬೇಕೆಂದು ದೇವರು ಹೇಳಿಲ್ಲ. ಪೂಜಾರಿಗಳಾದವರಿಗೆ ತರಬೇತಿ ಕೊಡುವ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ. ಒಂದು ಜಾತಿ, ಒಂದು ಮತ, ಒಂದು ದೇವರು ಎಂಬ ಮಾತುಗಳನ್ನು ಅವರು ಹೇಳಿದವರು. ಮನುಷ್ಯರೆಂದರೆ ಒಂದೇ ಜಾತಿ. ಮೇಲ್ಜಾತಿ ಕೆಳ ಜಾತಿ ಎಂಬುದನ್ನು ನಾವು ನಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡಿರುವ ವ್ಯವಸ್ಥೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ಸ್ವಾತಂತ್ರ್ಯ ಯಶಸ್ವಿಯಾಗಲು ಬಡವರನ್ನು ಸಶಕ್ತರಾಗಿಸಬೇಕು*
ಕಳೆದ ಬಾರಿ ಮುಖ್ಯಮಂತ್ರಿಯಾದಾಗ ಹಾಗೂ ಈಗಲೂ ನಮ್ಮ ಸರ್ಕಾರ ಎಲ್ಲಾ ಜಾತಿ ಧರ್ಮದವರಿಗೂ ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಿದೆ. ಪಂಚ ಗ್ಯಾರಂಟಿಗಳು ಎಲ್ಲಾ ಪಕ್ಷ, ಎಲ್ಲಾ ಧರ್ಮ, ಎಲ್ಲಾ ಜಾತಿಗಳ ಜನರೂ ಪಡೆಯುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದಾಗಿನಿಂದ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಬಡವರಿಗಾಗಿ ವೆಚ್ಚ ಮಾಡಲಾಗಿದೆ. ಗ್ಯಾರಂಟಿಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ನೀಡುವ ಯೋಜನೆಗಳು ಎಂದರು.
ನಮಗೆ ದೊರೆತಿರುವ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಶಕ್ತಿ ಇಲ್ಲದವರನ್ನು ಶಕ್ತಿಯುತರಾಗಿಸಬೇಕು. ಆಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರೆಯುತ್ತದೆ. ಬಸವಣ್ಣನ ಕಾಲದಿಂದಲೂ ಜಾತಿ, ವರ್ಗ ಹೋಗಬೇಕೆಂದು ಹೇಳುತಾ ಬಂದಿದ್ದರೂ ಜಾತಿ ವರ್ಗ ಹೋಗಿಲ್ಲ. ಸಂವಿಧಾನದಲ್ಲಿ ಬಹಳ ಸ್ಪಷ್ಟವಾಗಿ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂದಿದ್ದರೂ ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕಿಲ್ಲ. ಸಂವಿಧಾನ ಪ್ರತಿಯೊಬ್ಬರಿಗೂ ಅರ್ಥವಾಗಬೇಕೆಂಬ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓಡಿಸಲಾಗುತ್ತಿದೆ. ಇಡೀ ಸರ್ಕಾರ ಮಾಡಬೇಕಾದ ಕರ್ತವ್ಯ ಎಂದು ಭಾವಿಸಿ ಮಾಡುತ್ತಿದೆ ಎಂದರು.
*ಎಲ್ಲರೂ ಶಿಕ್ಷಣ ಪಡೆಯಲೇಬೇಕು*
ಬಸವಣ್ಣವ ವಚನವನ್ನು ಹೇಳುತ್ತಲೇ ಯಾವ ಜಾತಿ ಎಂದು ಕೇಳುತ್ತೇವೆ. ಇದನ್ನು ಹೋಗಲಾಡಿಸಬೇಕಾದರೆ ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು. ಅದಕ್ಕಾಗಿ ಕಸುಬು ಯಾವುದೇ ಇದ್ದರೂ ವಿದ್ಯೆ ಕಲಿಯಲೇಬೇಕು. ವೈದ್ಯರು, ಇಂಜಿನಿಯರ್, ಪ್ರೊಫೆಸರ್, ವಿಜ್ಞಾನಿಗಳಾಗಬೇಕು. ವೈದ್ಯರು, ಇಂಜಿನಿಯರ್ ಅಥವಾ ವಿಜ್ಞಾನಿಗಳಾಗುವುದು ಯಾರೊಬ್ಬರ ಸ್ವತ್ತಲ್ಲ. ಎಲ್ಲರಿಗೂ ಸಾಮರ್ಥ್ಯವಿದೆ. ನಾನು ಕುರುಬ ಜಾತಿಯಲ್ಲಿ ಹುಟ್ಟಿದ್ದರೂ ಮುಖ್ಯಮಂತ್ರಿಯಾಗಿಲ್ಲವೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಹುಟ್ಟಿನಿಂದ ಎಲ್ಲವೂ ನಿರ್ಧಾರವಾಗುವುದಿಲ್ಲ. ಅವಕಾಶಗಳು ದೊರೆಯುವುದು ಹಾಗೂ ಅದನ್ನು ಬಳಕೆ ಮಾಡುವುದರ ಮೇಲೆ ನಿರ್ಧಾರವಾಗುತ್ತದೆ. ಜಾಲಪ್ಪ ಅವರು ವೈದ್ಯಕೀಯ ಕಾಲೇಜು ಸ್ಥಾಪಿಸಿದರು. ಆ ಯೋಚನೆ ಮಾಡದೇ ಹೋಗಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದರು.
*ಎಲ್ಲಾ ಸಾಧನೆಗಳಿಗೂ ಶಿಕ್ಷಣವೇ ಅಡಿಪಾಯ*
ಸರ್ಕಾರ ಎಲ್ಲರಿಗೂ ಉಚಿತ ಶಿಕ್ಷಣ ನೀಡುತ್ತಿದೆ. ಕಡ್ಡಾಯ ಶಿಕ್ಷಣ ನೀಡಲು ಬದ್ಧವಾಗಿದೆ.
ಪೋಷಕರು ತಾವು ಯಾವುದೇ ವೃತ್ತಿಯನ್ನು ಮಾಡುತ್ತಿರಲಿ, ಮಕ್ಕಳಿಗೆ ಮಾತ್ರ ಒಳ್ಳೆಯ ಶಿಕ್ಷಣ ಕೊಡಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡುವುದು ತಂದೆ ತಾಯಿಗಳ ಕರ್ತವ್ಯ.
ವಿದ್ಯೆ ಇಲ್ಲದೆ ಹೋಗಿದ್ದರೆ ದೇವರಾಜ ಅರಸು ಅವರನ್ನು ಮೊದಲ್ಗೊಂಡು,ನಾನಾಗಲಿ, ಬಂಗಾರಪ್ಪನವರಾಗಲಿ, ವೀರಪ್ಪ ಮೊಯ್ಲಿ ಅವರಾಗಲಿ, ಎಸ. ಎಂ ಕೃಷ್ಣ ಅವರಾಗಲಿ, ದೇವೇಗೌಡ ಅವರಾಗಲಿ ಮುಖ್ಯಮಂತ್ರಿಗಳಾಗಲು ಸಾಧ್ಯವಿತ್ತೆ? ಎಲ್ಲಾ ಸಾಧನೆಗಳಿಗೂ ಶಿಕ್ಷಣವೇ ಅಡಿಪಾಯ ಎಂದು ಶಿಕ್ಷಣದ ಮಹತ್ವವನ್ನು ನಾರಾಯಣ ಗುರುಗಳು ಪದೇ ಪದೇ ಹೇಳುತ್ತಿದ್ದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ಸಾಧಕರು ಒಂದು ಜಾತಿಗೆ ಸೀಮಿತರಲ್ಲ*
ವಿದ್ಯೆಯಿಂದ ಮಾತ್ರ ಸ್ವಾಭಿಮಾನ, ಸ್ವಾವಲಂಬನೆ ಬರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಮಾಜದಲ್ಲಿ ಮನುಷ್ಯರಾಗಿ ಬದುಕಲು ವಿದ್ಯೆ ಬೇಕೇ ಬೇಕು. ಸಾಧಕರು, ಸಮಾಜ ಸುಧಾರಕರ
ಜಯಂತ್ಯುತ್ಸವಗಳನ್ನು ಸರ್ಕಾರ ಮಾಡುತ್ತಿರುವ ಉದ್ದೇಶ ಅವರು ಯಾವುದೇ ಒಂದು ಜಾತಿಗೆ ಅಥವಾ ವರ್ಗಕ್ಕೆ ಸೀಮಿತರಾದವರಲ್ಲ. ಅವರ ಸಾಧನೆಗಳು, ಬೋಧನೆಗಳು ಇಡೀ ಸಮಾಜಕ್ಕೆ ಆದರ್ಶಪ್ರಾಯವಾಗಿರುತ್ತವೆ ಎಂಬುದನ್ನು ಮರೆಯಬಾರದು.
ಅದಕ್ಕೋಸ್ಕರವೇ ನಮ್ಮ ಸರ್ಕಾರ ಎಲ್ಲಾ ಮಹನೀಯರ ಜಯಂತಿಗಳನ್ನು ಆಚರಣೆಗೆ ತಂದಿದ್ದು ಎಂದರು.
*ನಾರಾಯಣ ಗುರುಗಳ ಜಯಂತಿ ಪ್ರಾರಂಭಿಸಿದ್ದು ನಮ್ಮ ಸರ್ಕಾರ*
ಸರ್ಕಾರದ ವತಿಯಿಂದ ಸುಮಾರು 31 ಜಯಂತಿಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಸುಮಾರು 15 ಜಯಂತಿಗಳ ಆಚರಣೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ ಎಂದ ಮುಖ್ಯಮಂತ್ರಿಗಳು,
2016ರಲ್ಲಿ ನಾರಾಯಣ ಗುರುಗಳ ಜಯಂತಿ ಆಚರಣೆ ಪ್ರಾರಂಭಿಸಿದ್ದು ನಮ್ಮದೇ ಸರ್ಕಾರದ ಅವಧಿಯಲ್ಲಿ ಎಂದರು.
*ಸಮುದಾಯ ಭವನದ ನಿರ್ಮಾಣದ ಭರವಸೆ*
ಇದೇ ಸಂದರ್ಭದಲ್ಲಿ ಸಮುದಾಯ ಭವನದ ನಿರ್ಮಾಣದ ಆಶ್ವಾಸನೆಯನ್ನು ನೀಡಿದ ಅವರು ಹಾಸ್ಟೆಲ್ ನಿರ್ಮಾಣಕ್ಕೆ ಸ್ಥಳ ಒದಗಿಸಿದವುದೂ ಸೇರಿದಂತೆ ಸರ್ಕಾರ ಅನುದಾನವನ್ನು ನೀಡುತ್ತದೆ ಎಂದು ಭರವಸೆ ನೀಡಿದರು.
ಈಡಿಗರು, ಬಿಲ್ಲವರ ಅಭಿವೃದ್ಧಿ ನಿಗಮ ಈಗಾಗಲೇ ಘೋಷಣೆಯಾಗಿದೆ. ಕಾನೂನುನಾತ್ಮಕ ಅವುಗಳನ್ನು ನೋಂದಣಿ ಮಾಡುವ ಕಾರ್ಯ ಆಗಬೇಕಾಗಿದೆ. ದೇವರಾಜ ಅರಸು ನಿಗಮದಲ್ಲಿ 10 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.
ಅದರ ಬದಲಿಗೆ ನಿಗಮಗಳಲ್ಲಿಯೇ ಸ್ವತಂತ್ರವಾಗಿ ಇಡಲು ಕ್ರಮ ಕೈಗೊಳ್ಳಲಾಗುವುದು. ಕಂಪನಿ ಕಾಯ್ದೆ ಪ್ರಕಾರ ನೋಂದಣಿ ಗೊಳಿಸಲಾಗುವುದು ಎಂದರು.
ನಿಮ್ಮ ಸಮುದಾಯಗಳ ಎಲ್ಲಾ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ನೀವು ನಾರಾಯಣಗುರುಗಳಿಗೆ ಸಲ್ಲಿಸುವಂತಹ ಗೌರವ ಎಂದರು.
ಅವರ ಚಿಂತನೆಗಳನ್ನು ರೂಢಿಸಿಕೊಂಡು ಸಾಗಬೇಕಿದೆ.
ನಾನು ಸದಾ ಅವಕಾಶ ವಂಚಿತರ ಪರ, ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ. ನಮ್ಮ ಸರ್ಕಾರವು ಅದಕ್ಕೆ ಬದ್ಧವಾಗಿರುತ್ತದೆ.ನನ್ನ ರಾಜಕೀಯ ಜೀವನವನ್ನೇ ಸಾಮಾಜಿಕ ಪರ ನ್ಯಾಯಕ್ಕಾಗಿ ಮುಡಿಪಾಗಿಟ್ಟಿದ್ದೇನೆ ಎಂದರು.