ಬೆಂಗಳೂರು: ಬಿಬಿಎಂಪಿ ಮಹದೇವಪುರ ವಲಯ ಹೊರಮಾವು ವಾರ್ಡಿನ ಸಾಯಿ ಲೇಔಟ್ ನಲ್ಲಿ ಮಳೆಯಿಂದಾಗಿ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಪಾಲಿಕೆ ವತಿಯಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನಗರದಲ್ಲಿ 18ನೇ ಮೇ 2025 ರಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಸಾಯಿ ಲೇಔಟ್ ಪ್ರದೇಶವು ಜಲಾವೃತವಾಗಿ ಜನಜೀವನ ಅಸ್ತವ್ಯಸ್ಥವಾಗಿತ್ತು. ಈ ಸಂಬಂಧ ಪಾಲಿಕೆಯ ಅಧಿಕಾರಿ/ಸಿಬ್ಬಂದಿಗಳ ತಂಡವು ಖುದ್ದು ಸ್ಥಳದಲ್ಲಿದ್ದು, ಇರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ.
*ಮಹದೇವಪುರ ವಲಯ ಆಯುಕ್ತರಾದ ಕೆ.ಎನ್ ರಮೇಶ್* ರವರ ನೇತೃತ್ವದಲ್ಲಿ ಸಾಯಿ ಲೇಔಟ್ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಪಾಲಿಕೆಯ ಆರೋಗ್ಯ ವಿಭಾಗವು ತಕ್ಷಣವೇ ಸ್ಪಂದಿಸಿದೆ. ಘಟನಾ ಸ್ಥಳಕ್ಕೆ ವಲಯ ಆರೋಗ್ಯ ಅಧಿಕಾರಿಯಾದ ಡಾ: ಲೋಕೇಶ್, ಆರೋಗ್ಯ ವೈದ್ಯಾಧಿಕಾರಿಯಾದ ಡಾ: ವಿಶ್ವೇಶ್ವರಯ್ಯ ರವರು ಆರೋಗ್ಯ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಆರೋಗ್ಯ ಕ್ಷೇಮದ ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ.
*ರ್ಯಾಪಿಡ್ ರೆಸ್ಪಾನ್ಸ್ ತಂಡ ನಿಯೋಜನೆ:*
ವೈದ್ಯಾಧಿಕಾರಿ ಹಾಗೂ ಅರೆವೈದ್ಯಕೀಯ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ಅಗತ್ಯ ಔಷಧಗಳ ಜೊತೆಗೆ, ರಕ್ತದೊತ್ತಡ ಪರೀಕ್ಷಿಸುವ ಸಾಧನ, 1 ಆಂಬುಲೆನ್ಸ್ ವ್ಯವಸ್ಥೆ ಕೂಡಾ ಮಾಡಲಾಗಿದೆ.
*ನಾಗರಿಕರಲ್ಲಿ ಜಾಗೃತಿ:*
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಮುಂದಾಳತ್ವದಲ್ಲಿ ಆಶಾ ಕಾರ್ಯಕರ್ತೆಯರುಗಳನ್ನು ಒಳಗೊಂಡ ತಂಡವು ಮನೆ-ಮನೆ ಭೇಟಿ ನೀಡಿ, ಸಾಂಕ್ರಾಮಿಕ ರೋಗಗಳು, ನೀರಿನಿಂದ ಹರಡಬಹುದಾದ ಖಾಯಿಲೆಗಳು, ಡೆಂಗೀ ನಿಯಂತ್ರಣ, ಶುದ್ಧ ಕುಡಿಯುವ ನೀರನ್ನು ಬಳಸುವ ಸಲುವಾಗಿ ಜಾಗೃತಿ ಮೂಡಿಸಲಾಯಿತು. ಸ್ಥಳೀಯ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಸಮೀಕ್ಷಾ ಕಾರ್ಯದ ಜೊತೆಗೆ ಆರೋಗ್ಯ ಶಿಬಿರದಲ್ಲಿ ಶುಶ್ರೂಷಕ ಸಹಾಯಕ್ಕೆ ಬಳಸಲಾಗುತ್ತಿದೆ.
*115 ಮಂದಿಗೆ ಚಿಕಿತ್ಸೆ:*
ಕೆ. ನಾರಾಯಣಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಮ್ಮ ಕ್ಲಿನಿಕ್ ವತಿಯಿಂದ ಆರೋಗ್ಯ ಶಿಬಿರ ಏರ್ಪಡಿಸಿ, ಸ್ಥಳೀಯ ನಿವಾಸಿಗಳಿಗೆ ರಕ್ತದ ಒತ್ತಡ, ಮುಧುಮೇಹ, ಚರ್ಮ ರೋಗಗಳು ಸೇರಿದಂತೆ ಇತರೆ ರೋಗಗಳಿಗೆ ಸುಮಾರು 115 ಮಂದಿಗೆ ಚಿಕಿತ್ಸೆ ನೀಡಲಾಗಿರುತ್ತದೆ. ಜೊತೆಗೆ ಕ್ಯಾಲಮಿನ್, ಬಿಟಮೇತಸೋನ್, ಕೀಟೋ ಕೋನಸೋಲ್, ಕ್ಯಾಲ ಡ್ರಿಲ್ ಆಯಿಂಟ್ ಮೆಂಟ್ ಗಳನ್ನು ವಿತರಿಸಲಾಗಿದೆ.
*ಫಾಗಿಂಗ್, ಸ್ಪ್ರೇ ಸಿಂಪಡಣೆ:*
ಸಾಯಿ ಲೇಔಟ್ ಪ್ರದೇಶದಲ್ಲಿ ಡೆಂಗೀ ಸೇರಿದಂತೆ ಇನ್ನಿತರೆ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟುವ ಸಲುವಾಗಿ ಸೋಂಕು ನಿವಾರಕ ಸ್ಪ್ರೇ ಸಿಂಪಡಣೆ ಮಾಡಲಾಗುತ್ತಿದೆ. ಜೊತೆಗೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡಲಾಗುತ್ತಿದೆ.
*ಸಹಾಯವಾಣಿಗೆ ಕರೆ ಮಾಡಿ:*
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಮಹದೇವಪುವರ ವಲಯದ ನಿಯಂತ್ರಣ ಕೊಠಡಿಯ ಸಹಾಯವಾಣಿಯಾದ 080-28512300 ಗೆ ಕರೆ ಮಾಡಿ ಮಾಹಿತಿ ನೀಡಿ ಅಥವಾ ವಾಟ್ಸಪ್ ಸಂಖ್ಯೆಯಾದ 9480685706 ಗೆ ಮಾಹಿತಿ ನೀಡಲು ಕೋರಿದೆ.