ಬೆಂಗಳೂರು: ಮಹದೇವಪುರ ವಲಯದ ಎ.ಇ.ಸಿ.ಎಸ್ ಲೇಔಟ್ ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡ ವ್ಯತ್ತಿರಿಕ್ತ ಭಾಗಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಮಹದೇವಪುರ ವಲಯ ಆಯುಕ್ತರಾದ ರಮೇಶ್ ರವರು ತಿಳಿಸಿದರು.
ಮಹದೇವಪುರ ವಲಯ ಎ.ಇ.ಸಿ.ಎಸ್ ಲೇಔಟ್, ಸಿ-ಬ್ಲಾಕ್ 1ನೇ ಮುಖ್ಯ ರಸ್ತೆಯಲ್ಲಿ ಬರುವ ಸೈಟ್ ಸಂ. 735 ರ ಸ್ವತ್ತಿನ ಮಾಲೀಕರಾದ ಭಾಸ್ಕರ್ ಎಂಬುವವರು 38 X 59 ಚ.ಅ (11.80 X 18.10ಮೀ) ಸೈಟ್ ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನೆಲಮಾಳಿಗೆ + ನೆಲ ಸೇರಿದಂತೆ 6 ಅಂತಸ್ತು ಕಟ್ಟಡ ನಿರ್ಮಾಣ ಮಾಡಿರುತ್ತಾರೆ.
ಮುಂದುವರಿದು, ಸ್ವತ್ತಿನ ಮಾಲೀಕರಿಗೆ ಕಟ್ಟಡದ ಮಾಲೀಕರಿಗೆ ಈಗಾಗಲೇ ಬಿಬಿಎಂಪಿ 2020 ಕಾಯ್ದೆಯಡಿ ತಾತ್ಕಾಲಿಕ ಆದೇಶ ಹಾಗೂ ಸ್ಥಿರಿಕರಣ ಆದೇಶದ ನೋಟೀಸ್ಗಳನ್ನು ಜಾರಿ ಮಾಡಲಾಗಿರುತ್ತದೆ. ಆದರೂ ಸಹಾ ಕಟ್ಟಡ ನಿರ್ಮಾಣ ಕಾರ್ಯ ನಿಲ್ಲಿಸದ ಪರಿಣಾಮ, ಇಂದು ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಲಾಗಿರುತ್ತದೆ.
ಹೆಚ್ಚುವರಿಯಾಗಿ ನಿರ್ಮಿಸಿರುವ 2 ಮಹಡಿಗಳನ್ನು ಮೂರು ಕೊರೆಯುವ ಯಂತ್ರಗಳು ಹಾಗೂ 10 ಸಿಬ್ಬಂದಿಗಳ ಮೂಲಕ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ತೆರವುಗೊಳಿಸಲು ತಗುಲಿದ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುವುದು.
ಈ ವೇಳೆ ಕಾರ್ಯಪಾಲಕ ಅಭಿಯಂತರರಾದ ರವಿಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ, ಪೊಲೀಸ್ ಸಿಬ್ಬಂದಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.