ಬೆಂಗಳೂರು : ಕಲಿಯುಗ ಕಾಮಧೇನು’ ಶ್ರೀ ರಾಘವೇಂದ್ರ ಸ್ವಾಮಿಗಳವರ “404ನೇ ಪಟ್ಟಾಭಿಷೇಕೋತ್ಸವ”ದ ಅಂಗವಾಗಿ ಶ್ರೀ ಬಾಳಗಾರು ಮಠದ ಮೂಲ ಸಂಸ್ಥಾನದ ಕಿರಿಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಅಕ್ಷೋಭ್ಯ ರಾಮಪ್ರಿಯತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಶ್ರೀ ಗುರುರಾಯರ ಬೃಂದಾವನಕ್ಕೆ ಸಹಸ್ರ ಕಳಶ ಕ್ಷೀರಾಭಿಷೇಕವು ವಿಶೇಷವಾಗಿ ನೆರವೇರಿತು.
ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ತದನಂತರ ಸ್ವರ್ಣ ಸಿಂಹಾಸನದಲ್ಲಿ ಶ್ರೀ ಗುರುರಾಯರ ಸುವರ್ಣ ಲೇಪಿತ ಪಾದುಕೆಯನ್ನು ಇರಿಸಿ ‘ಪುಷ್ಪವೃಷ್ಟಿ”ಯೊಂದಿಗೆ “ಉದ್ಘಾಟನಾ” ಕಾರ್ಯಕ್ರಮವು ನೆರವೇರಿತು. ನಂತರದಲ್ಲಿ ವಿಶೇಷ ಉತ್ಸವ ಹೋಮಗಳೊಂದಿಗೆ ಪರಮಪೂಜ್ಯ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಸಂಸ್ಥಾನ ಪೂಜೆಯನ್ನು ನೆರವೇರಿಸಿ ಶ್ರೀ ಗುರುರಾಯರ ಬೃಂದಾವನಕ್ಕೆ ಮಹಾಮಂಗಳಾರತಿಯನ್ನು ಸಲ್ಲಿಸಿ, ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡಿದರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು.
ಈ ವಿಶೇಷವಾದ ಶ್ರೀ ರಾಘವೇಂದ್ರಸ್ವಾಮಿಗಳವರ “ಪಟ್ಟಾಭಿಷೇಕ ಉತ್ಸವ”ದಲ್ಲಿ ಭಾಗವಹಿಸಿದ ಸಹಸ್ರಾರು ಭಕ್ತರು ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಗುರುಗಳಿಂದ ಫಲ ಮಂತ್ರಾಕ್ಷತೆಯನ್ನು ಪಡೆದು ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ರಾಜಾ ಶ್ರೀ ಬಂಡಿಯಾಚಾರ್ಯ, ಆರ್ ಕೆ ವಾದಿಂದ್ರ ಆಚಾರ್ಯ, ಶ್ರೀ ಕೃಷ್ಣ ಗುಂಡಾಚಾರ್ಯ ಇನ್ನು ಹಲವಾರು ಗಣ್ಯರು ಭಕ್ತರು ಭಾಗವಹಿಸಿದ್ದರು.