ಬೆಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಆಡುಗೋಡಿಯ ಪೊಲೀಸ್ ಕ್ವಾಟ್ರಸ್ ನಲ್ಲಿ ಯೋಗ ದಿನಾಚರಣೆಯನ್ನು ಶಾಲಾ ಮಕ್ಕಳೊಂದಿಗೆ ವಿಶೇಷವಾಗಿ ಆಚರಣೆ ಮಾಡಲಾಯಿತು.
ಆಡುಗೋಡಿಯ ಪೊಲೀಸ್ ಕ್ವಾಟ್ರಸ್ ನಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಆಡುಗೋಡಿ ಮೋಹನ್ ನೇತೃತ್ವದಲ್ಲಿ ನೂರಾರು ಮಕ್ಕಳು ಯೋಗದಲ್ಲಿ ತೊಡಗಿರುವುದನ್ನು ನೋಡಬಹುದು.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಾಗಿ ಯೋಗವನ್ನು ಮಕ್ಕಳಿಗೆ ಕಲಿಸಿಕೊಡುವ ಹಾಗೂ ಯೋಗದ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಹಾಗೂ ಬಿಬಿಎಂಪಿಯ ಮಾಜಿ ಸದಸ್ಯರಾದ ಆಡುಗೋಡಿ ಮೋಹನ್ ಅವರ ನೇತೃತ್ವದಲ್ಲಿ ವಿಶೇಷವಾಗಿ ಯೋಗ ದಿನಾಚರಣೆಯನ್ನು ಮಾಡಲಾಯಿತು.
ನಂತರ ಮಾತನಾಡಿದ ಮೋಹನ್, ಯೋಗ ಪ್ರತಿಯೊಬ್ಬರ ಜೀವನದಲ್ಲೂ ಅಂಗವಾಗಿ ಇರಬೇಕು, ವರನಟ ಡಾ. ರಾಜ್ ಕುಮಾರ್ ಅವರು 1985 ರಲ್ಲಿ ತೆರೆಕಂಡ ಕಾಮನ ಬಿಲ್ಲು ಚಿತ್ರದಲ್ಲಿ ಸಂಪೂರ್ಣವಾಗಿ ಯೋಗದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅಂತಹ ಚಿತ್ರಗಳನ್ನು ಇಂದಿನ ಪೀಳಿಗೆಯ ಮಕ್ಕಳಿಗೆ ತೋರಿಸಬೇಕಾಗಿದೆ, ಈ ಮೂಲಕ ಮಕ್ಕಳು ಯೋಗ ಕಲಿಯುವ ಬಗ್ಗೆ ಪ್ರೇರೇಪಿತರಾಗುತ್ತಾರೆ ಎಂದರು.
ರಾಜಕುಮಾರ್ ಅವರು ಜೀವನದ ಉದ್ದಕ್ಕೂ ಸಹ ಯೋಗ ಮಾಡಿಕೊಂಡು ಆರೋಗ್ಯವಾಗಿ ಜೀವನವನ್ನು ನಡೆಸಿದ್ದರು. ಯೋಗ ಮಾಡುವುದರಿಂದ ಒಳ್ಳೆಯ ಬುದ್ಧಿಶಕ್ತಿ, ಮನಸ್ಸು ಸಿಗುತ್ತದೆ. ಡಾ. ರಾಜ್ ಕುಮಾರ್ ಅವರು 40 ವರ್ಷಗಳ ಕಾಲ ಯೋಗದಲ್ಲಿ ತೊಡಕೊಂಡು ಯೋಗದ ಶಕ್ತಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಎಂದರು.
ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳು ಯೋಗದಲ್ಲಿ ತೊಡಗಿಕೊಂಡು ಕೆಲವೊಂದು ಆಸನಗಳನ್ನು ಮಾಡಿದರು. ಈ ವೇಳೆ ಯೋಗ ಶಿಕ್ಷಕಿಯರು, ಶಾಲೆಯ ಶಿಕ್ಷಕರು ಹಾಗೂ ಪೊಲೀಸ್ ಅಧಿಕಾರಿಗಳು ಇದೆ ವೇಳೆ ಉಪಸ್ಥಿತರಿದ್ದರು.