ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರ ನಿಧನದಿಂದ ಮಾತೃಶಕ್ತಿಯ ಆಧಾರ ಸ್ತಂಭವೊಂದು ಕಳಚಿ ಬಿದ್ದಂತಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕಂಬನಿ ಮಿಡಿದಿದ್ದಾರೆ.
ತುಂಬುಬಾಳ್ವೆ ನಡೆಸಿದ ಚೆನ್ನಮ್ಮನವರು ದೇವೇಗೌಡರ ರಾಜಕೀಯದ ಏಳುಬೀಳುಗಳಲ್ಲಿ ಅವರಿಗೆ ಹೆಗಲು ಕೊಟ್ಟಿದ್ದರು. ಜೊತೆಗೆ ತುಂಬುಕುಟುಂಬದ ಸಾಂಸಾರಿಕ ನಿರ್ವಹಣೆಯನ್ನು ತಾವೇ ಹೊತ್ತುಕೊಂಡು, ಇತರರಿಗೆ ಆದರ್ಶವಾಗಿದ್ದರು. ತೀರಾ ಸಾಮಾನ್ಯ ಹಿನ್ನೆಲೆಯಿಂದ ಬಂದಿದ್ದ ಅವರ ಬದುಕು ತ್ಯಾಗ, ಜವಾಬ್ದಾರಿ ಮತ್ತು ಸಹನೆಗಳಿಗೆ ಒಂದು ಸಂಕೇತವಾಗಿತ್ತು ಎಂದು ಅವರು ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.
ತಮ್ಮ ಪತಿ ದೇವೇಗೌಡರು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಅವರು ಸಂತೋಷವನ್ನು ಕಂಡಿದ್ದರು. ತಮ್ಮ ಮುಗ್ಧತೆ ಮತ್ತು ಸರಳತೆಯನ್ನು ಜೀವನದ ಉದ್ದಕ್ಕೂ ಬಿಟ್ಟುಕೊಡದ ಚೆನ್ನಮ್ಮನವರ ವ್ಯಕ್ತಿತ್ವವು ಮಹಿಳಾಶಕ್ತಿಯನ್ನು ಪ್ರತಿಫಲಿಸುತ್ತಿತ್ತು. ಅವರ ಜೀವನವು ಇಡೀ ಸ್ತ್ರೀ ಸಂಕುಲಕ್ಕೆ ಆದರ್ಶದ ಪರಂಪರೆಯನ್ನು ಬಿಟ್ಟು ಹೋಗಿದೆ ಎಂದು ಅವರು ದುಃಖಿಸಿದ್ದಾರೆ.
ಚೆನ್ನಮ್ಮನವರ ನಿಧನದಿಂದ ಉಂಟಾಗಿರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ದೇವೇಗೌಡರಿಗೂ ಅವರ ಮಕ್ಕಳಿಗೂ ಅಭಿಮಾನಿಗಳಿಗೂ ಕೊಡಲಿ ಮತ್ತು ಚೆನ್ನಮ್ಮನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾಟೀಲ ಪ್ರಾರ್ಥಿಸಿದ್ದಾರೆ.