LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಹಿಂದ ಹತ್ತಿಕ್ಕಲು ಸಿದ್ದರಾಮಯ್ಯ ಯತ್ನ; ಹೆಚ್.ಡಿ. ಕುಮಾರಸ್ವಾಮಿ ಆರೋಪ

ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‍.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ದಾವಣಗೆರೆಯಲ್ಲಿ ಭಾನುವಾರ ಬೆಳಗ್ಗೆ ಮಾಧ್ಯಮಗೋಸ್ತಿಯನ್ನು ಉದ್ದೇಶಿಸಿ ಕೇಂದ್ರ ಸಚಿವರು ಮಾತನಾಡಿದರು.ಮುಖ್ಯಮಂತ್ರಿಗಳ ಅವಕಾಶವಾದಿ ರಾಜಕಾರಣ ಯಾವ ರೀತಿ ಇರುತ್ತದೆ ಎಂಬುದು ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಗಜ್ಜಾಹೀರು ಆಗಿದೆ. ಅಹಿಂದ ವರ್ಗದಲ್ಲಿ ಪ್ರಮುಖ ಭಾಗವಾಗಿರುವ ಮುಸ್ಲಿಂ ಜನಾಂಗದ ಮತಗಳಿಂದಲೇ ರಾಜಕೀಯ ಶಕ್ತಿ ಬಳಸಿಕೊಂಡ ಸಿದ್ದರಾಮಯ್ಯನವರು, ಈಗ ನೋಡಿದರೆ ಕಣದಲ್ಲಿರುವ ಯಾವೊಬ್ಬ ಮುಸ್ಲಿಂ ಅಭ್ಯರ್ಥಿಗೂ ಮತ ಹಾಕಬೇಡಿ ಎಂದು ಬಹಿರಂಗವಾಗಿ ಕರೆ ನೀಡಿದ್ದಾರೆ. ಸಾಮಾಜಿಕ ನ್ಯಾಯ ಎಂದರೆ ಹೀಗೆನಾ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಅಹಿಂದ ವರ್ಗದ ನಾಯಕ ನಾನು, ಅಹಿಂದ ವರ್ಗಕ್ಕೆ ದೊಡ್ಡ ಕೊಡುಗೆ ನೀಡಿದ್ದೇನೆ ಎನ್ನುತ್ತಾರೆ. ಆದರೆ ವಾಲ್ಮೀಕಿ ನಿಗಮದ ಕಥೆ ಏನಾಯ್ತು? ಅಲ್ಲಿ ಲೂಟಿಯಾಗಿದೆ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಪ್ರತಿಪಕ್ಷಗಳು ಹೇಳಿದಷ್ಟು ಪ್ರಮಾಣದಲ್ಲಿ ದುಡ್ಡು ಹೊಡೆದಿಲ್ಲ, ಆದರೂ ಸ್ವಲ್ಪ ದುಡ್ಡು ಹೊಡೆದಿದ್ದೇವೆ ಎಂದು ಹೇಳುತ್ತಾರೆ. ದೇವರಾಜ್ ಅರಸು ನಿಗಮದ ಮೂಲಕ ಬಡವರಿಗೆ ನೀಡಲಾಗುವ ಗಂಗಾ ಕಲ್ಯಾಣ ಯೋಜನೆಯನ್ನು ಲೂಟಿ ಆಗಿದೆ. ಒಬ್ಬರು ಇಬ್ಬರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಅಂತಹ ಆಯೋಜನೆಯನ್ನು ಕೂಡ ಇವರು ಬಿಟ್ಟಿಲ್ಲ ಎಂದು ಅವರು ಕಿಡಿಕಾರಿದರು.

ಉಪ ಚುನಾವಣೆಯನ್ನು ಹೇಗಾದರೂ ಗೆಲ್ಲಲೇಬೇಕು ಎಂದು ಇಡೀ ಸರ್ಕಾರ ಆಡಳಿತವನ್ನು ಗಾಳಿಗೆ ಬಿಟ್ಟು ದಾವಣಗೆರೆಯಲ್ಲಿ ಮೊಕ್ಕಂ ಹೂಡಿದೆ. ವಿಧಾನಸೌಧ ಸಂಪೂರ್ಣ ಖಾಲಿ ಆಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಜೊತೆಗೆ ಎಐಸಿಸಿ ರಾಜ್ಯ ಉಸ್ತುವಾರಿ ಆಗಿರುವ ವ್ಯಕ್ತಿ ಕೂಡ ಇಲ್ಲಿಯೇ ತಳವೂರಿದ್ದಾರೆ ಅವರು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಪಕ್ಷ ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದಾರೆ. ಜನತೆಯ ಬಗ್ಗೆ ನಮಗೆ ಬದ್ಧತೆ ಇದೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಇವರಿಗೆ ಅದು ಯಾವ ರೀತಿಯ ಬದ್ಧತೆ ಇದೆಯೋ ನನಗೆ ಗೊತ್ತಿಲ್ಲ ಎಂದು ಟೀಕಿಸಿದರು ಕೇಂದ್ರ ಸಚಿವರು.

ಮುಖ್ಯಮಂತ್ರಿಗಳು ಉಪ ಚುನಾವಣೆ ಕಣದಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಜನತೆಗೆ ಹೇಳುವುದನ್ನು ಬಿಟ್ಟು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಪದ ಬಳಕೆಯನ್ನು ನಾನು ಗಮನಿಸಿದ್ದೇನೆ. ಇದು ಜವಾಬ್ದಾರಿಯುತ ಮುಖ್ಯಮಂತ್ರಿ ಪದವಿಯಲ್ಲಿ ಕೂತಿರುವ ವ್ಯಕ್ತಿಗೆ ಭೂಷಣವಲ್ಲ ಎಂದು ಕುಮಾರಸ್ವಾಮಿಯವರು ಕಟುವಾಗಿ ಟೀಕಿಸಿದರು.

*ಗ್ಯಾರೆಂಟಿ ಬಿಟ್ಟರೆ ಬೇರೆ ಬಂಡವಾಳ ಇವರಿಗಿಲ್ಲ:*

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇರುವ ಏಕೈಕ ಬಂಡವಾಳ ಎಂದರೆ ಐದು ಗ್ಯಾರಂಟಿಗಳು ಮಾತ್ರ. ಅವುಗಳನ್ನು ಕೂಡ ಮನಸ್ಸು ಇಚ್ಛೆ, ಬೇಕಾಬಿಟ್ಟಿಯಾಗಿ ನೀಡುತ್ತಿದ್ದಾರೆ. ಗೃಹಲಕ್ಷ್ಮಿ ಹಣ ಬಾಕಿ ಉಳಿಸಿಕೊಂಡು ಎಲೆಕ್ಷನ್ ಬಂದಾಗ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತಿದ್ದಾರೆ. ಉಳಿದಂತೆ ಸರ್ಕಾರದ ಸಾಧನೆ ಶೂನ್ಯ. ಕಳೆದ ಮೂರು ವರ್ಷಗಳಲ್ಲಿ ಇವರು ಮಾಡಿದ ಸಾಧನೆ ಏನೇನು ಇಲ್ಲ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ಇನ್ನು ಎರಡು ತಿಂಗಳಿಗೆ ಈ ಸರ್ಕಾರ ನಾಲ್ಕನೇ ವರ್ಷಕ್ಕೆ ಕಾಲಿಡುತ್ತದೆ ಎಂದು ಸಚಿವರು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಈ ಸರ್ಕಾರ ಏನಾದರೂ ಸಾಧನೆ ಮಾಡಿದೆಯಾ ಎಂದು ಮಾಧ್ಯಮಗಳಲ್ಲಿ ದುರ್ಬೀನು ಹಾಕಿ ಹುಡುಕಿದರು ಏನೇನು ಸಿಗುವುದಿಲ್ಲ. ಗ್ಯಾರೆಂಟಿಗಳನ್ನು ಬಿಟ್ಟು ಉಳಿದಂತೆ ಏನು ಸಾಧನೆ ಮಾಡಿರುವುದು ತಿಳಿಯುವುದಿಲ್ಲ. ವೃಷ್ಯ ಮಾಧ್ಯಮಗಳನ್ನು ನೋಡಿದರೆ, ಪತ್ರಿಕೆಗಳನ್ನು ಓದಿದರೆ ಮುಖ್ಯಮಂತ್ರಿಗಳು ಕುರ್ಚಿಗೆ ಪ್ರಾಮುಖ್ಯತೆ ಕೊಟ್ಟಿರುವ ವರದಿಗಳಷ್ಟೇ ಕಣ್ಣಿಗೆ ಕಾಣುತ್ತದೆ. ಅದು ಬಿಟ್ಟರೆ ಭ್ರಷ್ಟಾಚಾರದ ಹಗರಣಗಳು ಹೆಜ್ಜೆ ಹೆಜ್ಜೆಗೂ ಗೋಚರವಾಗುತ್ತಿವೆ ಎಂದು ಕುಮಾರಸ್ವಾಮಿಯವರು ಬೇಸರ ವ್ಯಕ್ತಪಡಿಸಿದರು.

*ಕಾಂತರಾಜು, ಜಯಪ್ರಕಾಶ ಹೆಗಡೆ ವರದಿಗಳನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಏಕೆ ಇಟ್ಟಿದ್ದೀರಿ:*

ಪದೇ ಪದೇ ಮುಖ್ಯಮಂತ್ರಿಗಳು ಒಂದು ಮಾತು ಹೇಳುವುದನ್ನು ಗಮನಿಸಿದ್ದೇನೆ. ಕುಮಾರಸ್ವಾಮಿ ಅವರನ್ನು ನಾವು ಮುಖ್ಯಮಂತ್ರಿ ಮಾಡಿದ್ದೆವು. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಮೀಕ್ಷೆ ನಡೆಸಲು ನೇಮಿಸಲಾಗಿದ್ದ ಕಾಂತರಾಜು ಆಯೋಗದ ವರದಿಯನ್ನು ಸ್ವೀಕರಿಸದೆ ಅದನ್ನು ಕುಮಾರಸ್ವಾಮಿ ತಡೆದು ಹಿಡಿದುಬಿಟ್ಟರು ಎಂದು ದೂರುತ್ತಿದ್ದಾರೆ. ಈ ವಿಷಯ ಇಟ್ಟುಕೊಂಡು ಅವರು ನನ್ನ ಮೇಲೆ ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿಗಳನ್ನು ಕೇಳುವುದು ಇಷ್ಟೇ, ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಆಮೇಲೆ ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಅದನ್ನು ಎಷ್ಟು ದಿನವೆಂದು ನಿಮ್ಮ ಬಳಿ ಇಟ್ಟುಕೊಳ್ಳುತ್ತೀರಿ? ಎರಡು ವರದಿಗಳನ್ನು ಇನ್ನೂ ಯಾಕೆ ಇನ್ನು ಸ್ಟೋರೇಜ್ ನಲ್ಲಿ ಇಟ್ಟುಕೊಂಡಿದ್ದೀರಿ? ಯಾಕೆ ವರದಿಗಳನ್ನು ಇನ್ನು ಬಿಡುಗಡೆ ಮಾಡಿಲ್ಲ? ಅಹಿಂದ ನಾಯಕ ಎನ್ನುವ ನೀವು ಅವುಗಳನ್ನು ಹೊರಕ್ಕೆ ತಂದು ಇನ್ನೂ ಅವಕಾಶ ವಂಚಿತ ಸಮುದಾಯಗಳಿಗೆ ಅನುಕೂಲ ಯಾಕೆ ಮಾಡಿಕೊಡುತ್ತಿಲ್ಲ ಎಂದು ಮುಖ್ಯಮಂತ್ರಿಗಳನ್ನು ಸಚಿವ ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಒಳ ಮೀಸಲಾತಿ ವಿಚಾರ ದೊಡ್ಡ ವಿಚಾರವಾಗಿ ಪರಿಣಮಿಸಿದೆ. ಬೀದಿ ಬೀದಿಯಲ್ಲಿ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿಗಳು ಯಾಕೆ ಮೌನ ವಹಿಸಿದ್ದಾರೆ?
ಎಲ್ಲವನ್ನು ಬಿಟ್ಟು ಗ್ಯಾರೆಂಟಿಗಳ ಬಗ್ಗೆ ಮಾತ್ರ ಜಾಗಟೆ ಹೊಡಿತಿದಿರಿ. ಇದುವರೆಗೂ ರಾಜ್ಯದಲ್ಲಿ ಆಗಿ ಹೋದ ಎಷ್ಟೋ ಸರ್ಕಾರಗಳು ಗ್ಯಾರಂಟಿಗಳಿಗಿಂತ ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟಿವೆ. ಆದರೆ ನೀವು ಗ್ಯಾರೆಂಟಿಗಳನ್ನು ಹೀಗೆ ಕೊಡುತ್ತಿದ್ದೀರಿ ಎಂಬುದು ಜನರಿಗೂ ಅರ್ಥವಾಗಿದೆ ಸಂದರ್ಭ ಬರಲಿ ಎಂದು ಕಾಯುತ್ತಿದ್ದಾರೆ. ಗ್ಯಾರೆಂಟಿಗಳಿಂದ ಕಾಂಗ್ರೆಸ್ಸು ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

*ತಲಾದಾಯ ಉತ್ತಮವಾಗಿದ್ದರೆ ಗ್ಯಾರಂಟಿ ಏಕೆ?:*

ರಾಜ್ಯವು ಸಮೃದ್ಧವಾಗಿದೆ, ಇಡೀ ದೇಶದಲ್ಲಿ ತಲಾದಾಯ ಮಾನದಂಡದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ನೀವು ಹೇಳುತ್ತಿದ್ದೀರಿ. ಸರ್ಕಾರದ ಲೆಕ್ಕಗಳು ಪ್ರಕಾರ ರಾಜ್ಯದ ಜನರಿಗೆ ಯಾವುದೇ ಆರ್ಥಿಕ ಸಂಕಷ್ಟ ಇಲ್ಲ. ತಲಾದಾಯ ಚೆನ್ನಾಗಿದ್ದರೆ ಈ ಈ ಅಲ್ಪ ಪರಿಹಾರದ ಗ್ಯಾರಂಟಿಗಳನ್ನು ಕೊಡುವ ಅಗತ್ಯ ಏಕೆ? ಜನ ನೆಮ್ಮದಿಯಾಗಿ ಇದ್ದರೆ ಉಚಿತ ಕೊಡುಗೆಗಳ ಅಗತ್ಯ ಏತಕ್ಕೆ? ಯಾಕೆ ಇಂತಹ ಆತ್ಮವಂಚಕ ಹೇಳಿಕೆಗಳನ್ನು ಕೊಡುತ್ತೀರಿ? ಎಷ್ಟು ವರ್ಷ ಇಂತಹ ಉಚಿತ ಕೊಡುಗೆಗಳನ್ನು ಕೊಡಲು ಸಾಧ್ಯ? ಬೇರೆ ರಾಜ್ಯಗಳಲ್ಲಿ ಕೊಟ್ಟಿದ್ದಾರೆ ಎಂದು ಹೇಳುತ್ತೀರಿ, ಇನ್ನೊಂದು ಕಡೆ ಕೊಟ್ಟರೆ ನೀವು ಕೊಡಬೇಕು ಅಂತ ಏನಾದರೂ ಇದೆಯೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಗ್ಯಾರೆಂಟಿಗಳನ್ನು ಕೊಟ್ಟು ಕುಟುಂಬಗಳನ್ನು ಪರಾವಲಂಬಿಗಳನ್ನಾಗಿ ಮಾಡುವುದಲ್ಲ. ಶಾಶ್ವತವಾಗಿ ಆರ್ಥಿಕ ಶಕ್ತಿಯನ್ನು ಕುಟುಂಬಗಳಿಗೆ ತುಂಬುವುದು ಅತ್ಯಗತ್ಯ. ಸದೃಢವಾದ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವು ಕೊಡಬೇಕಿದೆ. ಪರಿಶಿಷ್ಟರ ಹಣವನ್ನು ಕಿತ್ತು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದೀರಿ. ಕೊನೆ ಪಕ್ಷ ದಲಿತ ಅಲ್ಪಸಂಖ್ಯಾತ ಮಕ್ಕಳಿಗೆ ಸಕಾಲಕ್ಕೆ ವಿದ್ಯಾರ್ಥಿ ವೇತನ ಕೊಡುವುದಕ್ಕೂ ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ಮನೆ ಕಟ್ಟಿದ್ದೀರಿ ಎಂದು ಹೇಳಿಕೆಗಳನ್ನು ಕೊಡುತ್ತಿದ್ದೀರಿ, ಒಮ್ಮೆ ತೋರಿಸಿ ಎಷ್ಟು ಮನೆಗಳನ್ನು ಕಟ್ಟಿದ್ದೀರಿ ಎಂದು ನೋಡುತ್ತೇವೆ. ಚುನಾವಣೆ ನಡೆಯುತ್ತಿರುವ ದಾವಣಗೆರೆಯಲ್ಲಿ ಎಷ್ಟು ಮನೆಗಳನ್ನು ಕಟ್ಟಿದ್ದೀರಿ? ಲೆಕ್ಕ ಕೊಡಿ. ಹಕ್ಕುಪತ್ರಗಳನ್ನು ಕೊಡದೆ ಸತಾಯಿಸುತ್ತಿದ್ದೀರಿ ಎಂದು ಕುಮಾರಸ್ವಾಮಿ ಆರೋಪಿಸಿದರು.

ಮಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ಮಾಜಿ ಸಂಸದ ಜಿಎಂ ಸಿದ್ದೇಶ್ವರ್, ಶಾಸಕ ಬಿ.ಪಿ. ಹರೀಶ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ,, ದಾವಣಗೆರೆ ಉಪ ಚುನಾವಣೆಯ ಮೈತ್ರ ಕೂಟದ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಸೇರಿದಂತೆ ಅನೇಕ ನಾಯಕರು ಮುಖಂಡರು ಉಪಸ್ಥಿತರಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ