ಬೆಂಗಳೂರು : ಪದ್ಮನಾಭನಗರ ಕ್ಷೇತ್ರದಲ್ಲಿ ಕಸದ ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು.
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್. ಅಶೋಕ್ ರವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಪಾಲಿಕೆಯ ಆಯುಕ್ತರಾದ ಕೆ ಎನ್ ರಮೇಶ್, BSWML ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಕಸ ಸಂಗ್ರಹಣ ಆಟೋಗಳ ಚಾಲಕರು ಹಾಗೂ ಸಾರ್ವಜನಿಕರೊಂದಿಗೆ ಪದ್ಮನಾಭನಗರ ಆಟದ ಮೈದಾನದಲ್ಲಿ ಇಂದು ಮಹತ್ವದ ಸಭೆಯನ್ನು ಹಮ್ಮಿಕೊಂಡಿದ್ದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಗೊಳಪಡುವ ಪದ್ಮನಾಭನಗರ ಕ್ಷೇತ್ರದ ವಾರ್ಡ್ಗಳಾದ ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಬನಶಂಕರಿ ವಾರ್ಡ್ ಸೇರಿದಂತೆ, ಪಶ್ಚಿಮ ನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ಗಳಲ್ಲಿನ ಸಾರ್ವಜನಿಕರು ತಮ್ಮ ಮನೆಗಳಿಂದ ಅಸಮರ್ಪಕವಾಗಿ ಕಸ ಸಂಗ್ರಹಿಸುತ್ತಿದ್ದು ಇದರಿಂದ ವಾರ್ಡ್ ಗಳಲ್ಲಿ ಬ್ಲಾಕ್ ಸ್ಪಾಟ್ ಹೆಚ್ಚಾಗಿರುತ್ತವೆ. ಆಟೋ ಕಸ ಸಂಗ್ರಹಣೆ ಸರಿಯಾದ ವೇಳೆ ಇರುವುದಿಲ್ಲ ಹಾಗೂ ನಿಗದಿ ಪಡಿಸಿರುವ ಆಟೋಗಳಿಗಿಂತ ಕಡಿಮೆ ಆಟೋಗಳು ಕಾರ್ಯನಿರ್ವಹಿಸುತ್ತಿರುವ ಅಹವಾಲುಗಳನ್ನು ಶಾಸಕರು ಹಾಗೂ ಆಯುಕ್ತರಿಗೆ ನೀಡಿದರು.
ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಶಾಸಕರು ಹಾಗೂ ಪಾಲಿಕೆ ಆಯುಕ್ತರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
*ಪ್ರತಿ ವಾರ್ಡ್ಗೂ ಕಡ್ಡಾಯವಾಗಿ ಆಟೋ ನೇಮಕ; ಮನೆ ಮುಂದೆ ಹಾಜರಾತಿ ಕಡ್ಡಾಯ:*
ಪ್ರತಿ ವಾರ್ಡ್ಗೂ ಕಡ್ಡಾಯವಾಗಿ ಕಸದ ಆಟೋಗಳನ್ನು ನೇಮಿಸಬೇಕು. ಪ್ರತಿ ದಿನ ಬೆಳಗ್ಗೆ 6 ರಿಂದ 9 ಗಂಟೆ ಒಳಗೆ ಕಸ ತೆಗೆಯಬೇಕು. ಆಟೋಗಳು ಪ್ರತಿದಿನ ಸಾರ್ವಜನಿಕರ ಮನೆ ಮನೆ ಮುಂದೆ ಹೋಗಿ ಕಸ ಸಂಗ್ರಹಿಸಬೇಕು ಮತ್ತು ಮನೆಗಳ ಮುಂದೆ ಹಾಜರಾತಿ ಹಾಕಬೇಕು. ಒಂದು ವೇಳೆ ಆಟೋ ಬರದಿದ್ದರೆ ಸಾರ್ವಜನಿಕರು ನೇರವಾಗಿ ಕಂಟ್ರಾಕ್ಟರ್ಗೆ ಫೋನ್ ಮಾಡಬಹುದು. ಇದಕ್ಕಾಗಿ ಆಟೋಗಳ ಮೇಲೆ ಕಡ್ಡಾಯವಾಗಿ ಆಟೋ ಟೆಲಿಫೋನ್ ನಂಬರ್ ಹಾಗೂ ಕಂಟ್ರಾಕ್ಟರ್ ನಂಬರ್ ಹಾಕಬೇಕು ಎಂದು ಶಾಸಕರು ತಿಳಿಸಿದರು.
*ವ್ಯಾಲೆಂಟಯರ್ ಗಳ ನಿಯೋಜನೆ*
ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕರು ಆಟೋಗಳ ಸಂಚಾರದ ಮೇಲೆ ನಿಗಾ ಇಡಲು ಸಾರ್ವಜನಿಕರುಗಳ ಕಡೆಯಿಂದ ವಾಲೆಂಟಿಯರ್ಗಳನ್ನು ನಿಯೋಜನೆ ಮಾಡಲಾಗುತ್ತಿದ್ದು, ಆಟೋಗಳ ಹಾಜರಾತಿಯನ್ನು ಪ್ರತಿನಿತ್ಯ ಶಾಸಕರ ಕಚೇರಿಗೆ ಪಡೆದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
*ನಿಗದಿಗಿಂತ ಕಡಿಮೆ ಆಟೋ ನಿಯೋಜಿಸುವ ಗುತ್ತಿಗೆದಾರರ ಬಿಲ್ ಕಡಿತಗೊಳಿಸಿ*
ಘನತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರು ಗುತ್ತಿಗೆ ಪಡೆದಿರುವಂತಹ ವಾರ್ಡ್ಗಳಲ್ಲಿ ನಿಗದಿಪಡಿಸಿರುವ ಆಟೋಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ವಾರ್ಡ್ಗಳಲ್ಲಿ ನಿಯೋಜಿಸಬೇಕು. ನಿಗದಿಗಿಂತ ಕಡಿಮೆ ಆಟೋಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಲ್ಲಿ ಅವರುಗಳ ಬಿಲ್ ಕಟಾವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
*ಕಸ ಸಂಗ್ರಹಿಸದ ಗುತ್ತಿಗೆದಾರರು ಬ್ಲ್ಯಾಕ್ಲಿಸ್ಟ್ಗೆ*
ಘನತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರಿಗೆ ಒಂದು ವಾರದ ಗಡುವು ನೀಡುತ್ತಿದ್ದು, ಈ ಅವಧಿಯಲ್ಲಿ ವಾರ್ಡ್ಗಳಲ್ಲಿನ ಕಸದ ಸಮಸ್ಯೆ ಸಂಪೂರ್ಣವಾಗಿ ಪರಿಹಾರ ಆಗತಕ್ಕದ್ದು. ಒಂದು ವಾರದ ನಂತರವೂ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಲ್ಲಿ ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುವುದು ಎಂದು ಆಯುಕ್ತರು ಸಾರ್ವಜನಿಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಡಿಜಿಎಂ ತನುಜಾ, ಸ್ಥಳೀಯ ಮುಖಂಡರುಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.