ಬೆಂಗಳೂರು : ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಉದ್ದೇಶದಿಂದ ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು, ಪ್ರಸ್ತುತ ಶಿಕ್ಷಣದಿಂದ ದೂರ ಉಳಿಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ದೂರ ಶಿಕ್ಷಣ ಬಹಳ ಪ್ರಯೋಜನಕಾರಿ ಯಾಗಿದೆ ಅದನ್ನು ವಿದ್ಯಾರ್ಥಿಗಳು ಸದುದ್ದೇಶದಿಂದ ಬಳಸಿಕೊಳ್ಳಬೇಕು ಎಂದು ಕರಾಮುವಿಯ ಕುಲಪತಿಗಳಾದ ಪ್ರೊ.ಎ.ಪಿ.ಜ್ಞಾನಪ್ರಕಾಶ್ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2026-27 ನೇ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಪ್ರಾರಂಭವಾಗಿರುವ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಈಗಾಗಲ್ಲೇ 2026-27ನೇ ಸಾಲಿನ ಜುಲೈ ಆವೃತ್ತಿ ಪ್ರವೇಶಾತಿ ಆರಂಭವಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣವು ಪ್ರತಿಯೊಬ್ಬರ ಬದುಕಿನ ಪ್ರಮುಖ ಆಧಾರವಾಗಿದೆ. ಆದರೆ ಆರ್ಥಿಕ ಪರಿಸ್ಥಿತಿ, ಉದ್ಯೋಗ, ಕುಟುಂಬದ ಜವಾಬ್ದಾರಿ ಅಥವಾ ಇತರ ಕಾರಣಗಳಿಂದ ಅನೇಕರು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕರಾಮುವಿ) ಮೂರು ದಶಕಗಳಿಂದ ದೂರ ಮತ್ತು ಮುಕ್ತ ಶಿಕ್ಷಣದ ಮೂಲಕ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತ ಬಂದಿದೆ ಎಂದರು.
ಕರ್ನಾಟಕದಲ್ಲಿಯೇ ಕರಾಮುವಿ ಏಕೈಕ ವಿವಿ:
ಕರ್ನಾಟಕದಲ್ಲಿ ದೂರ ಮತ್ತು ಮುಕ್ತ ಶಿಕ್ಷಣವನ್ನು ನೀಡುವ ರಾಜ್ಯದ ಏಕೈಕ ವಿಶ್ವವಿದ್ಯಾನಿಲಯವಾಗಿ ಕರಾಮುವಿ ಕಾರ್ಯನಿರ್ವಹಿಸುತ್ತಿದ್ದು, ಯುಜಿಸಿ-ಡಿಇಬಿ ಮಾನ್ಯತೆ, ನ್ಯಾಕ್ A+ ಶ್ರೇಣಿ ಹಾಗೂ ರಾಷ್ಟ್ರೀಯ NIRF ಮುಕ್ತ ವಿಶ್ವವಿದ್ಯಾನಿಲಯಗಳ ವಿಭಾಗದಲ್ಲಿ 2ನೇ ಸ್ಥಾನ ಪಡೆದಿರುವುದು ವಿಶೇಷವಾಗಿದೆ ಎಂದರು.
2026-27 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್.ಸಿ., ಎಂ.ಎ., ಎಂ.ಕಾಂ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಸಿ. ಸೇರಿದಂತೆ 65ಕ್ಕೂ ಹೆಚ್ಚು ಯುಜಿಸಿ ಅನುಮೋದಿತ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಮತ್ತು ಪ್ರಮಾಣಪತ್ರ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೆಲವು ಕೋರ್ಸ್ಗಳನ್ನು ಸಂಪೂರ್ಣ ಆನ್ಲೈನ್ ಮೂಲಕವೂ ಕಲಿಯುವ ಅವಕಾಶವಿದ್ದು, ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.
ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಅನುಕೂಲಗಳ ಮಹಾಪೂರ:
ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗಾಗಿ ಹಲವಾರು ವಿಶೇಷ ಸೌಲಭ್ಯಗಳನ್ನು ಒದಗಿಸಿದೆ. ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ಎಸ್ಎಸ್ಪಿ ವಿದ್ಯಾರ್ಥಿವೇತನ, ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ, ತೃತೀಯ ಲಿಂಗದ ವಿದ್ಯಾರ್ಥಿಗಳು, ದೃಷ್ಟಿಹೀನ ವಿದ್ಯಾರ್ಥಿಗಳು ಹಾಗೂ ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ. ಬಿಪಿಎಲ್ ಮಹಿಳೆಯರು, ಮಾಜಿ ಸೈನಿಕರು, ಆಟೋ ಮತ್ತು ಕ್ಯಾಬ್ ಚಾಲಕರು ಹಾಗೂ ಅವರ ಕುಟುಂಬದವರಿಗೆ ಶುಲ್ಕದಲ್ಲಿ ರಿಯಾಯಿತಿಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕರಾಮುವಿಯಿಂದ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚು ಹೊತ್ತು;
.
ಡಿಜಿಟಲ್ ಶಿಕ್ಷಣಕ್ಕೂ ಕರಾಮುವಿ ಹೆಚ್ಚಿನ ಆದ್ಯತೆ ನೀಡಿದ್ದು ಮೊಬೈಲ್ ಆಪ್, ಇ-ಲರ್ನಿಂಗ್ ವೇದಿಕೆ, ಆನ್ಲೈನ್ ತರಗತಿಗಳು, ದಾಖಲಿತ ವಿಡಿಯೊ ಪಾಠಗಳು, ಅಸೈನ್ಮೆಂಟ್ ಅಪ್ಲೋಡ್, ಹಳೆಯ ಪ್ರಶ್ನೆಪತ್ರಿಕೆಗಳು ಮತ್ತು "ಕರಾಮುವಿ ದೃಶ್ಯವಾಹಿನಿ" ಯೂಟ್ಯೂಬ್ ಚಾನೆಲ್ ಮೂಲಕ ವಿದ್ಯಾರ್ಥಿಗಳು ಎಲ್ಲಿಂದ ಬೇಕಾದರೂ ಅಧ್ಯಯನ ಮಾಡಬಹುದು. ಇದರಿಂದ ಶಿಕ್ಷಣ ಇನ್ನಷ್ಟು ಸುಲಭವಾಗಿ ಲಭ್ಯವಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.
ಕರಾಮುವಿಯ ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿ ಮಾಡಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ವಿವಿಧ ಕೊರ್ಸುಗಳಿಗಾಗಿ ಕರಾಮುವಿಯ ಅಧಿಕೃತ ವೆಬ್ ಸೈಟ್ www.ksoumysuru.ac.in ನಲ್ಲಿ KSOU Admission Portal ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ನಂತರ ಆನ್ ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಸಿದ್ದಪಾಠಗಳನ್ನು ಪಡೆಯಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರಾಮುವಿಯ ಪ್ರಾದೇಶಿಕ ನಿರ್ದೇಶಕರಾದ ರೋಹಿತ್, ಸೇರಿದಂತೆ ಪ್ರಾದೇಶಿಕ ವಲಯದ ಅಧಿಕಾರಿ ವರ್ಗದವರು ಸಿಬ್ಬಂದಿಗಳು ಬೋಧಕರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.