ಬೆಂಗಳೂರು: ನಗರದ ಎಚ್.ಎಸ್.ಆರ್. ಲೇಔಟ್ನಲ್ಲಿ ಕೈಗೊಂಡಿರುವ ತ್ಯಾಜ್ಯ ನಿರ್ವಹಣಾ ಮಾದರಿಯಲ್ಲಿ ಎಲ್ಲೆಡೆ ಅನುಸರಿಸುವುದು ಉತ್ತಮ ಇಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ ಎನ್ ರಮೇಶ್ ಅಭಿಪ್ರಾಯ ಪಟ್ಟರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ಅವರು ಎಚ್.ಎಸ್.ಆರ್. ಲೇಔಟ್ನಲ್ಲಿನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ವೇಳೆ ಸಾರ್ವಜನಿಕರು ಮತ್ತು ಎಚ್.ಎಸ್.ಆರ್ ಸಿಟಿಜನ್ ಫೋರಂ ನ ಸ್ವಯಂಸೇವಕರು ಸ್ವಚ್ಛತೆಗಾಗಿ ಕೈಗೊಂಡಿರುವ ಕಾರ್ಯಗಳನ್ನು ಅವರು ವಿಶೇಷವಾಗಿ ಶ್ಲಾಘಿಸಿದರು.
*ಪ್ರತ್ಯೇಕ ಒಣ ತ್ಯಾಜ್ಯ ಘಟಕ (DWCC):*
ಎಚ್.ಎಸ್.ಆರ್. ಲೇಔಟ್ನಲ್ಲಿನ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಭೇಟಿ ನೀಡಿದ ಆಯುಕ್ತರು, ಅಲ್ಲಿ ಪ್ರತಿದಿನ ಸುಮಾರು 5 ಟನ್ ಒಣ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿರುವುದನ್ನು ವೀಕ್ಷಿಸಿದರು.
ಇದರಲ್ಲಿ 4 ಟನ್ ತ್ಯಾಜ್ಯವನ್ನು ಮರುಬಳಕೆ ಮಾಡಲಾಗುತ್ತಿದ್ದು, ಉಳಿದ 1 ಟನ್ ಕಡಿಮೆ ಮೌಲ್ಯದ ಪ್ಲಾಸ್ಟಿಕ್ (LVP) ಅನ್ನು ಬಿಡದಿಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
*ಸಾರ್ವಜನಿಕರ ಮೇಲ್ವಿಚಾರಣೆಗೆ ಆಯುಕ್ತರಿಂದ ಶ್ಲಾಘನೆ*
ತ್ಯಾಜ್ಯ ಸಂಗ್ರಹಣಾ ವಾಹನಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಸ್ಥಳೀಯ ನಿವಾಸಿಗಳು ಸ್ವಯಂಸೇವಕರನ್ನು ನೇಮಿಸಿಕೊಂಡಿರುವುದು ಮತ್ತು ಒಣ ತ್ಯಾಜ್ಯಕ್ಕಾಗಿ ಪ್ರತ್ಯೇಕ ವಾಹನವನ್ನು ನಿರ್ವಹಿಸುತ್ತಿರುವುದು ಮಾದರಿಯಾಗಿದೆ ಎಂದು ಆಯುಕ್ತರು ಸಾರ್ವಜನಿಕರ ಶ್ಲಾಘನೆ ವ್ಯಕ್ತಪಡಿಸಿದರು.
*ಸ್ಥಳೀಯವಾಗಿ ಹಸಿ ಕಸದ ವಿಲೇವಾರಿ*
ಎಚ್.ಎಸ್.ಆರ್. ಲೇಔಟ್ 7ನೇ ಸೆಕ್ಟರ್, 8ನೇ ಮುಖ್ಯರಸ್ತೆ ಮತ್ತು 22ನೇ ಅಡ್ಡರಸ್ತೆಯಲ್ಲಿ ಸುಮಾರು 600 ಮನೆಗಳಿಂದ ಉತ್ಪತ್ತಿಯಾಗುವ 500 ಕೆ.ಜಿ. ಹಸಿ ಕಸವನ್ನು ಸ್ಥಳೀಯವಾಗಿಯೇ ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಈ ಗೊಬ್ಬರವನ್ನು ಸ್ಥಳೀಯ ನಿವಾಸಿಗಳೇ ತಮ್ಮ ಉದ್ಯಾನವನಗಳಿಗೆ ಬಳಸಿಕೊಳ್ಳುತ್ತಿರುವುದು ಉತ್ತಮ ಸ್ಪಂದನೆ ಆಗಿರುತ್ತದೆ.
*ಎಲೆಗಳ ಗೊಬ್ಬರ ತಯಾರಿಕೆ*
ದಾರಾಬೆಂದ್ರೆ ಪಾರ್ಕ್ನಲ್ಲಿ ಎಲೆಗಳಿಂದ ಗೊಬ್ಬರ ತಯಾರಿಸುವ ಪ್ರಕ್ರಿಯೆಯನ್ನು ಆಯುಕ್ತರು ವೀಕ್ಷಿಸಿದರು. ಎನ್ಜಿಒಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯವು ಪರಿಸರ ಸ್ನೇಹಿಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು, "ಸಾರ್ವಜನಿಕರು ಮತ್ತು ಪಾಲಿಕೆಯ ಅಧಿಕಾರಿಗಳ ನಡುವಿನ ಉತ್ತಮ ಸಮನ್ವಯದಿಂದ ಮಾತ್ರ ನಗರವನ್ನು ಸ್ವಚ್ಛವಾಗಿಡಲು ಸಾಧ್ಯ. ಎಚ್.ಎಸ್.ಆರ್. ಲೇಔಟ್ ಸಿಟಿಜನ್ ಫೋರಂ ತೋರಿಸಿರುವ ಈ ಜವಾಬ್ದಾರಿ ಮತ್ತು ಮುತುವರ್ಜಿ ಇತರ ಬಡಾವಣೆಗಳಿಗೂ ಮಾದರಿಯಾಗಲಿ. ನಗರದ ಎಲ್ಲಾ ನಾಗರಿಕರು ಪಾಲಿಕೆಯೊಂದಿಗೆ ಸ್ವಚ್ಛತೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು" ಎಂದು ಕರೆ ನೀಡಿದರು.