ಬೆಂಗಳೂರು : ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಸಚಿವರಾದ ಡಿ. ಸುಧಾಕರ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
"ಪ್ರತಿ ಕ್ಷಣವೂ ಕ್ಷೇತ್ರದ ಅಭಿವೃದ್ಧಿ ಕುರಿತು ಆಲೋಚನೆ, ಜನಸೇವೆ ಸೇರಿದಂತೆ ಅತ್ಯಂತ ಕ್ರಿಯಾಶೀಲ ಸಹೋದ್ಯೋಗಿಯಾಗಿದ್ದ ಸಚಿವ ಡಿ. ಸುಧಾಕರ್ ಅವರ ನಿಧನ ಅತ್ಯಂತ ನೋವಿನ ಸಂಗತಿ. ಅವರು ತಮ್ಮನ್ನು ಭೇಟಿ ಮಾಡಲು ಬಂದಾಗಲೆಲ್ಲ ಕ್ಷೇತ್ರದ ಒಂದಿಲ್ಲೊಂದು ಅಭಿವೃದ್ಧಿ ಕೆಲಸದ ಮನವಿ ಜತೆಗೆ ಬರುತ್ತಿದ್ದರು. ತಮಗೆ ಆಪ್ತರೂ ಆಗಿದ್ದ ಸುಧಾಕರ್ ಅಗಲಿಕೆ ಬಹಳ ನೋವು ತಂದಿದೆ ಎಂದು ಡಿಸಿಎಂ ಅವರು ಹೇಳಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವ ಮೂಲಕ ಸಹಕಾರಿ ಸಂಸ್ಥೆಯಿಂದ ರಾಜಕೀಯ ಆರಂಭಿಸಿದ ಸುಧಾಕರ್ ಅವರು ಸರ್ವ ಸಮುದಾಯಗಳೂ ಮೆಚ್ಚುವ ನಾಯಕರಾಗಿದ್ದರು. ಸಮುದಾಯದ ಸಂಖ್ಯಾಬಲ ಇಲ್ಲದಿದ್ದರೂ ನಾಲ್ಕು ಬಾರಿ ಶಾಸಕರಾಗಿದ್ದು ಕ್ಷೇತ್ರದ ಜನ ಇವರ ಮೇಲೆ ಇರಿಸಿದ್ದ ಪ್ರೀತಿ, ವಿಶ್ವಾಸ, ನಂಬಿಕೆಗೆ ಸಾಕ್ಷಿ. ಇದೇ ಸುಧಾಕರ್ ಅವರ ಹೆಗ್ಗಳಿಕೆ ಆಗಿತ್ತು.
ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ತಮ್ಮ ಕ್ಷೇತ್ರದ ನೀರಾವರಿ ಯೋಜನೆಗಳ ಕುರಿತು ನನ್ನ ಬಳಿ ಸದಾ ಚರ್ಚೆ ನಡೆಸುತ್ತಿದ್ದರು. ಕೊಡುಗೈ ದಾನಿಯಾಗಿ "ಬಡವರ ಬಂಧು" ಎಂದೇ ಜನರ ನಡುವೆ ಪ್ರಸಿದ್ದಿ ಪಡೆದಿದ್ದರು. ಕಾಲನ ಕರೆಗೆ ಓಗೊಟ್ಟು ನಮ್ಮನ್ನು, ಅಪಾರ ಅಭಿಮಾನಿಗಳನ್ನು ಅಗಲಿ ಹೋಗಿರುವ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಅವರ ಕುಟುಂಬವರ್ಗ ಹಾಗೂ ಲಕ್ಷಾಂತರ ಕಾರ್ಯಕರ್ತರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.