
ಯೋಜಿತ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ಒದಗಿಸುವ ಮೂಲಕ ಈ ಯೋಜನೆಯು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯಲು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸುಸ್ಥಿರ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಯೋಜನೆಯು ನೇರವಾಗಿ ಭಾರತದ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ದೀರ್ಘಕಾಲದವರೆಗೆ ದೇಶದ ವೈದ್ಯರು ಮತ್ತು ಜನಸಂಖ್ಯೆಯ ಅನುಪಾತವನ್ನು ಸುಧಾರಿಸಲು ಕೊಡುಗೆ ನೀಡುತ್ತದೆ.
ವೈದ್ಯಕೀಯ ಕ್ಷೇತ್ರದಲ್ಲಿ ಭಾರಿ ಪ್ರಗತಿಯಾಗಿದ್ದರೂ, ಭಾರತದ ವೈದ್ಯರು ಮತ್ತು ಜನಸಂಖ್ಯೆಯ ಅನುಪಾತವು (ಅಧಿಕೃತವಾಗಿ ಸುಮಾರು 1:811 ಎಂದು ಅಂದಾಜಿಸಲಾಗಿದೆ) ದೇಶಾದ್ಯಂತ ತರಬೇತಿ ಪಡೆದ ವೈದ್ಯಕೀಯ ವೃತ್ತಿಪರರ ಲಭ್ಯತೆಯಲ್ಲಿ ಅಸಮತೋಲನ ಇರುವುದನ್ನು ಸಾರುತ್ತಿದೆ. ಈ ಸವಾಲು ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ತೀವ್ರವಾಗಿದ್ದು, ಕೆಲವು ರಾಜ್ಯಗಳಲ್ಲಿ ಈ ಅನುಪಾತವು 1:2,700ಕ್ಕೆ ಇಳಿದಿದೆ. ಡಾ. ದೇವಿ ಶೆಟ್ಟಿ ಅವರ ದೂರದೃಷ್ಟಿಯ ಯೋಜನೆಯಾದ ಉಡಾನ್ ಈ ಅಂತರವನ್ನು ಬೇರುಮಟ್ಟದಿಂದ ಪರಿಹರಿಸಲು ಪ್ರಯತ್ನಿಸುತ್ತಿದೆ. ಹಿಂದುಳಿದ ಹಿನ್ನೆಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಔಪಚಾರಿಕ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಬೆಂಬಲಿಸುವ ಮೂಲಕ, ಅಗತ್ಯವಿರುವ ಕಡೆಗಳಲ್ಲಿ ವೈದ್ಯಕೀಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುತ್ತಿದೆ.
ಈ ಸಂದರ್ಭದಲ್ಲಿ ಹಾಜರಿದ್ದ ನಾರಾಯಣ ಹೆಲ್ತ್ ನ ಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ದೇವಿ ಶೆಟ್ಟಿ ಮಾತನಾಡಿ, “ಭಾರತದ ವೈದ್ಯಕೀಯ ಕ್ಷೇತ್ರದ ಭವಿಷ್ಯವು ವೈದ್ಯರ ಸಂಖ್ಯೆ ಮತ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳ ನಡುವಿನ ಅಂತರವನ್ನು ನಾವು ಎಷ್ಟು ಕಡಿಮೆ ಮಾಡುತ್ತೇವೆ ಎಂಬುದರ ಮೇಲೆ ನಿಂತಿದೆ. 'ಉಡಾನ್' ಯೋಜನೆ ಮೂಲಕ ನಾವು ವೈದ್ಯಕೀಯ ಮತ್ತು ನರ್ಸಿಂಗ್ ಶಿಕ್ಷಣವನ್ನು ಪಡೆಯಲು ಅವಕಾಶವಿಲ್ಲದ ಪ್ರತಿಭಾವಂತ ಯುವಕರಿಗೆ ಬೆಂಬಲ ನೀಡುತ್ತಿದ್ದೇವೆ. ಈ ವಿದ್ಯಾರ್ಥಿಗಳು ವೈದ್ಯರ ಲಭ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಮುಂದಾದಾಗ, ಅದರ ಪರಿಣಾಮವು ಕೇವಲ ವೈಯಕ್ತಿಕ ಯಶಸ್ಸಿಗೆ ಮಾತ್ರ ಸೀಮಿತವಾಗುವುದಿಲ್ಲ, ಬದಲಿಗೆ ಇಡೀ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ದೇಶಾದ್ಯಂತ ಇರುವ ಜನರಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುವಂತೆ ಮಾಡುತ್ತದೆ” ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ, ಡಾ. ದೇವಿ ಶೆಟ್ಟಿ ಅವರು ಪ್ರಸ್ತುತ ಯೋಜನೆಯಡಿ ಬೆಂಬಲ ಪಡೆಯುತ್ತಿರುವ ಎಂಬಿಬಿಎಸ್ ಸ್ಕಾಲರ್ ಶಿಪ್ ಫಲಾನುಭವಿಗಳು ಮತ್ತು ನೀಟ್ ಆಕಾಂಕ್ಷಿಗಳೊಂದಿಗೆ ಸಂವಾದ ನಡೆಸಿದರು. ಅವರಲ್ಲಿ ಹೆಚ್ಚಿನವರು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಾಗಿದ್ದು, ತಮ್ಮ ಕುಟುಂಬದ ಮೊದಲ ತಲೆಮಾರಿನ ವೈದ್ಯರು ಅಥವಾ ನರ್ಸ್ ಆಗಲಿದ್ದಾರೆ. ಅವರು ತಮ್ಮ ಶೈಕ್ಷಣಿಕ ಪ್ರಯಾಣ, ಲಭಿಸಿದ ಮಾರ್ಗದರ್ಶನ ಮತ್ತು ವೈದ್ಯಕೀಯ ಸೇವೆಗಳ ಕೊರತೆಯಿರುವ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಈ ಯೋಜನೆಯು ತಮ್ಮ ವೃತ್ತಿಜೀವನವನ್ನು ರೂಪಿಸಿದ ರೀತಿಗೆ ಸಂಬಂಧಿಸಿದ ಅನುಭವಗಳನ್ನು ಹಂಚಿಕೊಂಡರು.