ಬೆಂಗಳೂರು : ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮುದಾಯ (ಬೀದಿ) ನಾಯಿಗಳ ದತ್ತು ಪಡೆಯಲು ಸಾರ್ವಜನಿಕರಲ್ಲಿ ಮನವಿ:ಡಿ.ಎಸ್ ರಮೇಶ್ ಮನವಿ ಮಾಡಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮತ್ತು ವ್ಯಾಪ್ತಿಯಲ್ಲಿನ ಸಂಸ್ಥೆಗಳ (ಶಿಕ್ಷಣ, ಆಸ್ಪತ್ರೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮೈದಾನ ಸೇರಿದಂತೆ ಇನ್ನಿತರೆ) ಸಮುದಾಯ (ಬೀದಿ) ನಾಯಿಗಳ ಕಲ್ಯಾಣ, ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯ ಉದ್ದೇಶದೊಂದಿಗೆ, ಸಾರ್ವಜನಿಕರು, ಸಂಘ–ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWAs) ಹಾಗೂ ಸ್ವಯಂಸೇವಾ ಸಂಸ್ಥೆಗಳು(ಎನ್.ಜಿ.ಒ) ಬೀದಿ ನಾಯಿಗಳನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಮಾರ್ಗಸೂಚಿಗಳನ್ವಯ ದತ್ತು (Adoption) ಪಡೆಯಲು ಮುಂದಾಗುವಂತೆ *ಆಯುಕ್ತರಾದ ಡಿ.ಎಸ್ ರಮೇಶ್* ರವರು ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 59,820 ಬೀದಿನಾಯಿಗಳು ಇರುವುದು 2023ರ ಬೀದಿನಾಯಿ ಸಮೀಕ್ಷೆಯಿಂದ ಕಂಡುಬಂದಿರುತ್ತದೆ. ಮುಂದುವರೆದು ಪೂರ್ವ ನಗರ ಪಾಲಿಕೆಯ ವಿವಿಧ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 369 ಬೀದಿನಾಯಿಗಳು ಇರುವುದು ದೃಢಪಟ್ಟಿರುತ್ತದೆ. ಬೀದಿನಾಯಿಗಳ ನಿಯಂತ್ರಣ ಮತ್ತು ಕಲ್ಯಾಣಕ್ಕಾಗಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ, ಲಸಿಕಾ ಅಭಿಯಾನ, ಪಶು ವೈದ್ಯಕೀಯ ಸೇವೆಗಳನ್ನು ನಿರಂತರವಾಗಿ ಕೈಗೊಳ್ಳಲಾಗಿರುತ್ತದೆ. ಬೀದಿನಾಯಿಗಳ ದತ್ತು ಕಾರ್ಯಕ್ರಮವು ಕೇವಲ ಒಂದು ಪ್ರಾಣಿ ಕಲ್ಯಾಣ ಕ್ರಮವಲ್ಲ; ಇದು ನಗರದ ಸಾಮಾಜಿಕ ಹೊಣೆಗಾರಿಕೆಯ ಪ್ರತೀಕವಾಗಿದ್ದು, ನಾಗರಿಕರು ಮತ್ತು ಸ್ಥಳೀಯ ಆಡಳಿತದ ನಡುವೆ ಸಹಭಾಗಿತ್ವವನ್ನು ಬಲಪಡಿಸುತ್ತದೆ.
*ಬೀದಿನಾಯಿಗಳ ದತ್ತು ಯೋಜನೆಯ ಮುಖ್ಯ ಉದ್ದೇಶಗಳು ಹೀಗಿವೆ*
* ಬೀದಿನಾಯಿಗಳಿಗೆ ಸುರಕ್ಷಿತ ಹಾಗೂ ಉತ್ತಮ ಜೀವನ ಪರಿಸರ ವ್ಯವಸ್ಥೆಯನ್ನು ಒದಗಿಸುವುದು.
* ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣದ ಮೂಲಕ ನಗರದಲ್ಲಿ ಪ್ರಾಣಿ-ಮನುಷ್ಯರ ನಡುವೆ ಸಹಬಾಳ್ವೆ ವಾತಾವರಣ ನಿರ್ಮಾಣ ಮಾಡುವುದು.
* ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ಕಾಯ್ದುಕೊಳ್ಳುವುದು.
* ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಮತ್ತು ಪ್ರಾಣಿ ಕಲ್ಯಾಣವನ್ನು ಉತ್ತೇಜಿಸುವುದು.
*ದತ್ತು ನೀಡಲಾಗುವ ನಾಯಿಗಳ ಆರೋಗ್ಯ ಮತ್ತು ಸುರಕ್ಷತೆ*
ನಗರ ಪಾಲಿಕೆಯ ವತಿಯಿಂದ ದತ್ತು ನೀಡಲಾಗುವ ಎಲ್ಲಾ ಬೀದಿ ನಾಯಿಗಳಿಗೆ:
* ಸಂಪೂರ್ಣ ಆರೋಗ್ಯ ತಪಾಸಣೆ
* ಅಗತ್ಯ ಲಸಿಕೆ ನೀಡುವಿಕೆ (Anti-Rabies & Combined Vaccine)
* ಸಂತಾನಹರಣ ಶಸ್ತ್ರಚಿಕಿತ್ಸೆ (ABC Programme)
ನಿರ್ವಹಿಸಲಾಗುವುದರಿಂದ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ಎರಡೂ ದೃಢವಾಗುತ್ತದೆ.
*ಪ್ರಾಣಿ ಪ್ರಿಯರಲ್ಲಿ ಮನವಿ*
ಬೀದಿ ನಾಯಿಗಳ ದತ್ತು ಮೂಲಕ ಪ್ರಾಣಿ ಕಲ್ಯಾಣ, ಸಾರ್ವಜನಿಕ ಆರೋಗ್ಯ ಮತ್ತು ಸಹಬಾಳ್ವೆ ನಗರ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು, ಬೀದಿ ನಾಯಿಗಳನ್ನು ದತ್ತು ಪಡೆಯಲು ಆಸಕ್ತಿ ಇರುವ ವ್ಯಕ್ತಿಗಳು, ಸಂಘ–ಸಂಸ್ಥೆಗಳು, ಅಪಾರ್ಟ್ಮೆಂಟ್ ಸಂಘಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ನಗರ ಪಾಲಿಕೆಯೊಂದಿಗೆ ಕೈಜೋಡಿಸಿ ಈ ಮಾನವೀಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಈ ಮೂಲಕ ಮನವಿ ಮಾಡಲಾಗಿದೆ. ಇಂತಹ ಮಾನವೀಯ ಕ್ರಮಗಳು ಬೆಂಗಳೂರನ್ನು ಇನ್ನಷ್ಟು ಜವಾಬ್ದಾರಿಯುತ ಮತ್ತು ಸಂವೇದನಾಶೀಲ ನಗರವನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ಆಯುಕ್ತರು ತಿಳಿಸಿದರು.