ಬೆಂಗಳೂರು : ಉತ್ತರಹಳ್ಳಿ ಪಾಲಿಕೆಯ ಪಿಯು ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ಸೂಚನೆ ನೀಡಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರು ಉತ್ತರಹಳ್ಳಿಯಲ್ಲಿನ ಪಾಲಿಕೆ ಪದವಿ ಪೂರ್ವ ಕಾಲೇಜಿಗೆ ಇಂದು ಖುದ್ದಾಗಿ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಹಾಗೂ ಕಾಲೇಜಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.
*ಶೇ. 73 ರಷ್ಟು ಫಲಿತಾಂಶ: ಆಯುಕ್ತರಿಂದ ಶ್ಲಾಘನೆ*
ಉತ್ತರಹಳ್ಳಿ ಪದವಿ ಪೂರ್ವ ಪಿಯು ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 73.88 ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸಿರುವುದರ ಕುರಿತು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾದ ಶ್ರೀ ವೆಂಕಟ ಕೃಷ್ಣಪ್ಪ ಆಯುಕ್ತರಿಗೆ ತಿಳಿಸಿದರು. ಈ ಸಂಬಂಧ ವಿದ್ಯಾರ್ಥಿಗಳ ಸಾಧನೆ ಹಾಗೂ ಬೋಧಕ ವರ್ಗದ ಪ್ರಯತ್ನವನ್ನು ಆಯುಕ್ತರು ಶ್ಲಾಘಿಸಿದರು.
*ವಾಣಿಜ್ಯ ವಿಭಾಗಕ್ಕೆ ಅಗ್ರಸ್ಥಾನ -99 ವಿದ್ಯಾರ್ಥಿಗಳು ಉತ್ತೀರ್ಣ:*
ಕಳೆದ ಸಾಲಿನಲ್ಲಿ ಪರೀಕ್ಷೆ ಎದುರಿಸಿದ್ದ ಒಟ್ಟು 134 ವಿದ್ಯಾರ್ಥಿಗಳಲ್ಲಿ 99 ಮಂದಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ವಿಭಾಗವಾರು ಫಲಿತಾಂಶದಲ್ಲಿ ವಾಣಿಜ್ಯ ವಿಭಾಗವು ಶೇ. 87.14ರಷ್ಟು ಸಾಧನೆಯೊಂದಿಗೆ ಮುಂಚೂಣಿಯಲ್ಲಿದ್ದರೆ, ಕಲಾ ವಿಭಾಗವು ಶೇ. 63.41 ಹಾಗೂ ವಿಜ್ಞಾನ ವಿಭಾಗವು ಶೇ. 52.17ರಷ್ಟು ಫಲಿತಾಂಶ ದಾಖಲಿಸಿದೆ. ಉತ್ತೀರ್ಣರಾದವರಲ್ಲಿ 6 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ (ಡಿಸ್ಟಿಂಕ್ಷನ್) ಪಡೆದು ಕಾಲೇಜಿನ ಟಾಪರ್ಗಳಾಗಿದ್ದಾರೆ ಎಂದು ಪ್ರಾಂಶುಪಾಲರು ಆಯುಕ್ತರಿಗೆ ತಿಳಿಸಿದರು.
*ಹೊಸ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಗತಿ:*
ಪ್ರಸ್ತುತ 2026-27ನೇ ಸಾಲಿನ ಹೊಸ ಪ್ರವೇಶ ಪ್ರಕ್ರಿಯೆಯೂ ಭರದಿಂದ ಸಾಗುತ್ತಿದ್ದು, ಪ್ರಸ್ತುತ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಒಟ್ಟು 221 ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪಡೆದಿದ್ದಾರೆ. ಈ ಪೈಕಿ ಪ್ರಥಮ ಪಿಯುಸಿಯಲ್ಲಿ 126 ಹಾಗೂ ದ್ವಿತೀಯ ಪಿಯುಸಿಯಲ್ಲಿ 95 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಆಯುಕ್ತರಿಗೆ ವಿವರಣೆ ನೀಡಿದರು.
*ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಆಯುಕ್ತರ ಸೂಚನೆ*
ವಿದ್ಯಾರ್ಥಿಗಳಿಗೆ ವಾರಕೊಮ್ಮೆ ಚರ್ಚೆ ಸ್ಪರ್ಧೆ, ಭಾಷಣ ಸ್ಪರ್ಧೆ, ಕಲಿಕೆ ಹಾಗೂ ವಿವಿಧ ಕ್ಷೇತ್ರಗಲ್ಲಿ ತೊಡಗಿಸಿಕೊಳ್ಳುವ ಸಂಬಂಧ ವಿದ್ಯಾರ್ಥಿಗಳಿಗೆ ನೂರಿತ ಭೋಧಕರಿಂದ ಉತ್ತೇಜನ ತರಗತಿಗಳನ್ನು ಏರ್ಪಡಿಸುವವಂತೆ ಆಯುಕ್ತರು ಸೂಚನೆ ನೀಡಿದರು.
*ಕಾಲೇಜಿನ ಮೂಲಸೌಕರ್ಯಕ್ಕೆ ಒತ್ತು ನೀಡಲು ಸೂಚನೆ*
ಹೊಸ ಶೈಕ್ಷಣಿಕ ಸಾಲು ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಡೆಸ್ಕ್ ಹಾಗೂ ಇನ್ನಿತರ ಪಿಟೋಪಕಾರಣಗಳು, ನೆಲ ಹಾಸು (ಫ್ಲೋರಿಂಗ್) ಸರಿಪಡಿಸುವುದು, ಕಿಟಕಿ ಗಾಜುಗಳನ್ನು ಸರಿಪಡಿಸುವುದು, ತರಗತಿ ಹಾಗೂ ಶೌಚಾಲಯಗಳ ಸ್ವಚ್ಛತೆಗಾಗಿ ಹೌಸ್ ಕಿಪಿಂಗ್ ವ್ಯವಸ್ಥೆ ಕಲ್ಪಿಸಿವುದು, ಆಟದ ಮೈದಾನ ಸ್ವಚ್ಛತೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಕುರಿತು ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಶಿಕ್ಷಣ ಅಧಿಕಾರಿಯಾದ ಶ್ರೀ ವೆಂಕಟಕೃಷ್ಣಪ್ಪ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.