ಬೆಂಗಳೂರು : ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್* ಅವರು ಇಂದು ಪುಟ್ಟೇನಹಳ್ಳಿ ಕೆರೆ ಸಮೀಪದ ರಮಣಶ್ರೀ ಕ್ಯಾಲಿಫೋರ್ನಿಯಾ ಗಾರ್ಡನ್ಸ್ ಹಾಗೂ ಎಸ್ಟೀಮ್ ನಾರ್ತ್ ವುಡ್ ಅಪಾರ್ಟ್ಮೆಂಟ್ ಪ್ರದೇಶಗಳಲ್ಲಿ ಉಂಟಾಗುತ್ತಿರುವ ವಾಟರ್ ಲಾಗಿಂಗ್ ಸಮಸ್ಯೆಯನ್ನು ಸ್ಥಳ ಪರಿಶೀಲನೆ ನಡೆಸಿದರು.
ಹಿಂದೆ ಪುಟ್ಟೇನಹಳ್ಳಿ ಕೆರೆಗೆ ಸಂಪರ್ಕ ಹೊಂದಿದ್ದ ರಾಜಕಾಲುವೆಯಲ್ಲಿ ಕೊಳಚೆ ನೀರು ಬರುತಿದ್ದ ಕಾರಣ ಕಾಲುವೆ ಮುಚ್ಚಲಾಗಿತ್ತು.
2024ರ ಭಾರೀ ಮಳೆಯ ಸಂದರ್ಭದಲ್ಲಿ ಈ ಪ್ರದೇಶ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ ಹಿನ್ನೆಲೆ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವುದರಿಂದ ವಿಷಯವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ವರೆಗೆ ಹೋಗಿ ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಆದೇಶವೂ ಜಾರಿಯಾಗಿತ್ತು. ಬಳಿಕ ಒಳಚರಂಡಿ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, ಅನುಮತಿ ನೀಡಲಾಗಿದ್ದು, ಪ್ರಸ್ತುತ ಕೊಳಚೆ ನೀರು ತಿರುವು ಕಾಮಗಾರಿ ಪ್ರಗತಿಯಲ್ಲಿದೆ.
*ಕೊಳಚೆ ನೀರು ತಿರುವು ಕಾಮಗಾರಿಯ ಉಳಿದ ಕಾರ್ಯ 10 ದಿನಗಳಲ್ಲಿ ಪೂರ್ಣಗೊಳಿಸಿ*
ರಾಜಕಾಲುವೆಯಲ್ಲಿ ಹರಿಯುತ್ತಿದ್ದ ಕೊಳಚೆ ನೀರು ತಿರುವು ಕಾಮಗಾರಿಯ ಕಾರ್ಯ ಶೇಕಡ 90 ರಷ್ಟು ಪೂರ್ಣಗೊಂಡಿದ್ದು, ಉಳಿದ ಶೇ. 10 ರಷ್ಟು ಕೆಲಸವನ್ನು 10 ದಿನಗಳಲ್ಲಿ ಪೂರ್ಣಗೊಳಿಸಿ, ಮಳೆಗಾಲದಲ್ಲಿ ಶಾಶ್ವತವಾಗಿ ನೀರು ನಿಲ್ಲದಂತೆ ಕ್ರಮವಹಿಸಲು ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಜಕಾಲುವೆಯನ್ನು ಕೆರೆಗೆ ಸಂಪರ್ಕಿಸುವ ಕಾಮಗಾರಿ ಪ್ರಾರಂಭಿಸಬೇಕಾಗಿರುತ್ತದೆ. ಮಳೆಗಾಲದಲ್ಲಿ ಪುಟ್ಟೇನಹಳ್ಳಿ ಕೆರೆ ಸಮೀಪ ನೀರು ನಿಲ್ಲದಂತೆ ತಡೆಯುವ ಉದ್ದೇಶದಿಂದ ನೀರನ್ನು ಡೈವರ್ಟ್ ಮಾಡುವ ಕಾಮಗಾರಿಗಳಿಗೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿದೆ.
ಸ್ಥಳ ಪರಿಶೀಲನೆ ವೇಳೆ ಆಯುಕ್ತರು ಕಾಮಗಾರಿಗಳ ಪ್ರಗತಿ ಪರಿಶೀಲಿಸಿ, ಮಳೆಗಾಲಕ್ಕೂ ಮುನ್ನ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಅರಣ್ಯ ಇಲಾಖೆ, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ನಗರ ಪಾಲಿಕೆಯ ಅಭಿಯಂತರರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.