
ಮುಂಬರುವ ಮುಂಗಾರು ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಶ್ರೀ ನವೀನ್ ಕುಮಾರ್ ರಾಜು ಅವರು ಕಾಮಗಾರಿ, ಅರಣ್ಯ, ತೋಟಗಾರಿಕೆ ಮತ್ತು ವಿಪತ್ತು ನಿರ್ವಹಣಾ ಸಮಾಲೋಚಕರೊಂದಿಗೆ ಮಹತ್ವದ ಸಭೆ ನಡೆಸಿದರು.
ನಗರದ ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಳೆಯಿಂದಾಗುವ ಅನಾಹುತಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿದರು.
*ಸಭೆಯ ಪ್ರಮುಖ ನಿರ್ಧಾರಗಳು ಮತ್ತು ನಿರ್ದೇಶನಗಳು*
ಮರಗಳ ನಿರ್ವಹಣೆ: ಅಪಾಯಕಾರಿ ಸ್ಥಿತಿಯಲ್ಲಿರುವ ಒಣಗಿದ ಮರಗಳು ಮತ್ತು ಕೊಂಬೆಗಳನ್ನು ತಕ್ಷಣವೇ ಗುರುತಿಸಿ ತೆರವುಗೊಳಿಸಲು ಸೂಚಿಸಲಾಗಿದೆ. ವಾರ್ಡ್ವಾರು ಪ್ರಗತಿ ವರದಿಯನ್ನು ಸಲ್ಲಿಸಲು ಮತ್ತು ಮರ ಕತ್ತರಿಸುವ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ನಿರ್ದೇಶನ ನೀಡಿದರು.
*ನೀರು ನಿಲ್ಲದಂತೆ ಕ್ರಮ:* ಉದ್ಯಾನವನಗಳಲ್ಲಿನ ಚರಂಡಿಗಳ ಹೂಳೆತ್ತುವುದು ಮತ್ತು ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳುವುದು. ನೀರು ನಿಲ್ಲುವ ಸಂಭವನೀಯ ಸ್ಥಳಗಳನ್ನು ಗುರುತಿಸಿ ತುರ್ತು ಕ್ರಮ ಕೈಗೊಳ್ಳುವುದು.

*ವಿದ್ಯುತ್ ಸುರಕ್ಷತೆ:* ಪಾರ್ಕ್ಗಳಲ್ಲಿನ ವಿದ್ಯುತ್ ಕಂಬಗಳು, ಕೇಬಲ್ಗಳು ಮತ್ತು ಜಂಕ್ಷನ್ ಬಾಕ್ಸ್ಗಳನ್ನು ತಪಾಸಣೆ ನಡೆಸಿ, ಎಲ್ಲೂ ವೈಯರ್ಗಳು ತೆರೆದಿಲ್ಲವೆಂದು ಖಚಿತಪಡಿಸಿಕೊಳ್ಳಲು ಸೂಚಿಸಿದರು.
*ಆಟದ ಉಪಕರಣಗಳ ದುರಸ್ತಿ:* ಮಕ್ಕಳ ಆಟದ ಮೈದಾನಗಳಲ್ಲಿನ ಸ್ವಿಂಗ್ಗಳು, ಸ್ಲೈಡ್ಗಳು ಮತ್ತು ಜಿಮ್ ಉಪಕರಣಗಳ ಸುರಕ್ಷತಾ ಆಡಿಟ್ ನಡೆಸಿ, ಹಾನಿಗೊಳಗಾದ ವಸ್ತುಗಳನ್ನು ತಕ್ಷಣವೇ ದುರಸ್ತಿ ಮಾಡುವುದು.
*ತೋಟಗಾರಿಕೆ ಸಿದ್ಧತೆ:* ಮುಂಗಾರು ಆರಂಭಕ್ಕೂ ಮುನ್ನ ಮರಗಳ ಸವರುವಿಕೆ (Pruning) ಪೂರ್ಣಗೊಳಿಸುವುದು ಹಾಗೂ ಹೊಸದಾಗಿ ನೆಟ್ಟ ಸಸಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವುದು.
ತುರ್ತು ಸ್ಪಂದನಾ ತಂಡ (Rapid Response Team): ಮಳೆ ಅನಾಹುತಗಳ ಸಮಯದಲ್ಲಿ ತಕ್ಷಣ ಸ್ಪಂದಿಸಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಾರ್ವಜನಿಕ ದೂರುಗಳಿಗಾಗಿ ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗುವುದು.
ಮುಂದುವರೆದು ಸಾರ್ವಜನಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಮುಂಗಾರು ಮಳೆಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ. ನಿಗದಿಪಡಿಸಿದ ಕಾಲಮಿತಿಯೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಅರಣ್ಯ ಇಲಾಖೆ, ತೋಟಗಾರಿಕೆ ವಿಭಾಗ ಮತ್ತು ವಿಪತ್ತು ನಿರ್ವಹಣಾ ತಂಡದ ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹೆಗಾರರು ಉಪಸ್ಥಿತರಿದ್ದರು.
*ಪಾಲಿಕೆಯಿಂದ ಘನತ್ಯಾಜ್ಯ ನಿರ್ವಹಣೆ ಮಾಡದ ಹೋಟೆಲ್ ಗಳ ಮೇಲೆ ಮುಂದುವರೆದ ದಂಡ ಪ್ರಯೋಗ, ಸಿ ಕ್ಲಬ್ ಶವಾಯಿ ಹೋಟೆಲ್ಗೆ 75,000 ರೂ. ದಂಡ*
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹೊಸ ಗುರಪ್ಪನ ಪಾಳ್ಯದಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ಇಂದು ಸಹ ಮುಂದುವರೆಸಿದ್ದು, ಅಧಿಕಾರಿಗಳಿಂದ ನಿಯಮ ಉಲ್ಲಂಘಿಸುವ ವಾಣಿಜ್ಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಇಂದು ಹೊಸ ಗುರುಪ್ಪನಪಾಳ್ಯದಲ್ಲಿರುವ ಸಿ ಕ್ಲಬ್ ಶವಾಯಿ ಹೋಟೆಲ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಹೋಟೆಲ್ ಆವರಣದಲ್ಲಿ ಕಂಡುಬಂದ ತೀವ್ರ ಅಶುಚಿತ್ವ ಮತ್ತು ನಿಯಮಗಳ ಉಲ್ಲಂಘನೆಗಾಗಿ ಒಟ್ಟು 75,000 ರೂ. ದಂಡ ವಿಧಿಸಿದ್ದಾರೆ.
*ಉಲ್ಲಂಘನೆಗಳ ವಿವರ*
ಅಶುಚಿತ್ವ: ಹೋಟೆಲ್ ಆವರಣ ಮತ್ತು ಅಡುಗೆ ಕೋಣೆಯಲ್ಲಿ ಸರಿಯಾದ ನೈರ್ಮಲ್ಯ ಕಾಪಾಡದಿರುವುದು.
ತ್ಯಾಜ್ಯ ವಿಂಗಡಣೆ ಲೋಪ: ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸದೆ ನಿಯಮ ಉಲ್ಲಂಘಿಸಿರುವುದು.
ನಿಷೇಧಿತ ಪ್ಲಾಸ್ಟಿಕ್ ಬಳಕೆ: ಸರ್ಕಾರದಿಂದ ನಿಷೇಧಿಸಲ್ಪಟ್ಟ ಏಕಬಳಕೆಯ ಪ್ಲಾಸ್ಟಿಕ್ (Single-use plastic) ವಸ್ತುಗಳನ್ನು ಬಳಸಿರುವುದು.
ನಗರದ ಎಲ್ಲಾ ಹೋಟೆಲ್ ಮತ್ತು ವಾಣಿಜ್ಯ ಸಂಸ್ಥೆಗಳು ಕಡ್ಡಾಯವಾಗಿ ತ್ಯಾಜ್ಯ ವಿಂಗಡಣೆ ಮಾಡಬೇಕು ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸಬೇಕು. ನಿಯಮಗಳನ್ನು ಗಾಳಿಗೆ ತೂರುವವರ ವಿರುದ್ಧ ದಾಳಿಗಳನ್ನು ಮುಂದುವರೆಸುವುದಲ್ಲದೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.