ಬೆಂಗಳೂರು : ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವತಿಯಿಂದ , ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್ ನಲ್ಲಿ 10 ಕಿ.ಮೀ. ಪಾದಚಾರಿ ಮಾರ್ಗ ಅಭಿವೃದ್ಧಿ, ವ್ಯವಸ್ಥಿತ ತ್ಯಾಜ್ಯ ನಿರ್ವಹಣೆ ಹಾಗೂ ಸುರಕ್ಷ 75 ಉಪಕ್ರಮ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕಾರ್ಯಗಾರ ಆಯೋಜಿಸುವದರ ಜೊತೆಗೆ ಸಭೆ ನಡೆಸಿದರು.
ಸಭೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರಾದ *ಮಹೇಶ್ವರ ರಾವ್* ರವರು ಭೇಟಿ ನೀಡಿ, ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಸುರಕ್ಷ 75 ಜಂಕ್ಷನ್, ವಾರ್ಡ್ ರಸ್ತೆ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿ ಕುರಿತು ನಿರ್ದೇಶನಗಳನ್ನು ನೀಡಿದರು.
ಪ್ರತಿ ವಾರ್ಡ್ 10 ಕಿ.ಮೀ. ಪಾದಚಾರಿ ಮಾರ್ಗ ಅಭಿವೃದ್ಧಿ ಸಂಬಂಧಿಸಿದಂತೆ, ಪಾಲಿಕೆಯ ಪ್ರತಿ ವಾರ್ಡ್ನಲ್ಲಿ ವಾರಕ್ಕೆ 2.5 ಕಿ.ಮೀ.ನಂತೆ ಕಾಮಗಾರಿ ಪೂರೈಸಿ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1,100 ಕಿ. ಮೀ ಗುರಿ ಹೊಂದಲು,ಮುಖ್ಯ ಅಭಿಯಂತರರು ಹಾಗೂ ಅಧೀಕ್ಷಕ ಅಭಿಯಂತರರು, ತಮ್ಮ ಅಧೀನ ಅಧಿಕಾರಿಗಳಿಗೆ ರಸ್ತೆಗಳನ್ನು ನಿಯೋಜಿಸಿ, ಕಾಮಗಾರಿಗಳನ್ನು ಪರಿಶೀಲಿಸಬೇಕು. ರಸ್ತೆ ಕರ್ಬ್ಗಳು, ಪಾದಚಾರಿ ಮಾರ್ಗಗಳ ದುರಸ್ತಿ ಇತ್ಯಾದಿ ಎಲ್ಲ ಕೆಲಸಗಳು ಸಮರ್ಪಕವಾಗಿ ಆಗಬೇಕು. ಸಿಲ್ಟ್ ಆಂಡ್ ಟ್ರ್ಯಾಕ್ಟರ್ ಬಳಸಿ ರಸ್ತೆ ಬದಿಯ ಹೂಳು ತೆರವು ಕಾರ್ಯಾಚರಣೆ ಪೂರೈಸಬೇಕು. ಅಂಡರ್ ಪಾಸ್ ಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ, ಸುಂದರೀಕರಣ ಆಗಬೇಕು ಎಂದು ಜಿಬಿಎ ಮುಖ್ಯ ಆಯುಕ್ತರು ಸೂಚಿಸಿದರು.
ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾದ ಡಾ: ರಾಜೇಂದ್ರ ಕೆ. ವಿ. ರವರು ಮಾತನಾಡಿ, ಸಮರ್ಪಕ ಡ್ರೈನೇಜ್ ವ್ಯವಸ್ಥೆ, ಶೋಲ್ಡರ್ ಡ್ರೇನ್ ಸಹಿತವಾದ ಉತ್ತಮ ರಸ್ತೆಗಳು ಇರುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ನಗರ ಪಾಲಿಕೆಯಲ್ಲಿ ಇಂಜಿನಿಯರಿಂಗ್ ವಿಭಾಗ ಮಾತೃ ವಿಭಾಗವಿದ್ದಂತೆ. ಅಭಿಯಂತರರು ತಂಡಗಳನ್ನು ಮುನ್ನಡೆಸಬೇಕು. ಪಾದಚಾರಿಗಳ ಹಕ್ಕುಗಳನ್ನು ಗೌರವಿಸುವುದು ಅತ್ಯಗತ್ಯ. ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಸಲಹೆ ನೀಡಿದರು.
ನಗರ ಮರುವಿನ್ಯಾಸ ಮತ್ತು ರಸ್ತೆ ಸುರಕ್ಷೆ ಕುರಿತಂತೆ ಜಿಬಿಎದ ಪ್ರಮುಖ ಉಪಕ್ರಮವಾದ ʼಸುರಕ್ಷ 75’ ಕುರಿತಂತೆ ಚರ್ಚೆ ನಡೆಯಿತು.
*ಆಯುಕ್ತರ ನೀಡಿದ ಸೂಚನೆಗಳು:*
* ಸಹಾಯಕ ಕಾರ್ಯಪಾಲಕ ಅಭಿಯಂತರರು (ಎಇಇ) ಒಂದೊಂದು ಮಾದರಿ ವಾರ್ಡ್ ರೂಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.
* 200 ಬ್ಕ್ಯಾಕ್ ಸ್ಪಾಟ್ ಗಳನ್ನು ಸ್ವಚ್ಛಗೊಳಿಸಿ ಸುಂದರಗೊಳಿಸಬೇಕು.
* ಒಣತ್ಯಾಜ್ಯ ಸಂಗ್ರಹ ಸ್ಥಳಕ್ಕೆ ವ್ಯವಸ್ಥೆ ಮಾಡಬೇಕು.
* ಕಸ ಸಂಗ್ರಹಕ್ಕೆ ʼಕಸ ಕಿಯೋಸ್ಕ್ʼ ಸ್ಥಾಪಿಸುವ ಬಗ್ಗೆ ಆಲೋಚಿಸಬಹುದು.
* ಮೂಲದಲ್ಲಿಯೇ ಒಣತ್ಯಾಜ್ಯ ಹಸಿತ್ಯಾಜ್ಯ ವಿಂಗಡಣೆ ಕುರಿತು ಜಾಗೃತಿ ಮೂಡಿಸಿ.
* ಬಲ್ಕ್ ಜನರೇಟರ್ಸ್ ವಿರುದ್ಧ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
* ಆರೋಗ್ಯ ಅಧಿಕಾರಿಗಳು ವ್ಯಾಪಾರ ಪರವಾನಗಿ (ಟ್ರೇಡ್ ಲೈಸನ್ಸ್) ಸಂಗತಿಗಳ ಬಗ್ಗೆ ಕಟ್ಟುನಿಟ್ಟಾಗಿರಬೇಕು.
* ಇನ್ನು ಒಂದು ತಿಂಗಳ ಅವಧಿಯಲ್ಲಿ 10 ಕಿ.ಮೀ. ರಸ್ತೆಯುದ್ದಕ್ಕೆ ಟ್ರೇಡ್ ಲೈಸನ್ಸ್ ಕುರಿತಂತೆ ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
* ಎಇಇ, ಜೆಇ ಗಳನ್ನು ಒಂದೊಂದು ರಸ್ತೆಗೆ ಜವಾಬ್ದಾರರನ್ನಾಗಿಸಬೇಕು.
* ಹೊರಗುತ್ತಿಗೆ ಅಭಿಯಂತರರು ಕೂಡ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಕೆಲಸ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
* ಸ್ಕೈವಾಕ್, ಬಸ್ ನಿಲ್ದಾಣ, ಅಂಡರ್ ಪಾಸ್, ಫ್ಲೈ ಓವರ್, ಪಾದಚಾರಿಗಳ ಸಬ್ ವೇ ಇತ್ಯಾದಿ ಸ್ಥಳಗಳನ್ನು ಪರಿಶೀಲಿಸಿ ನ್ಯೂನತೆಗಳನ್ನು ಸರಿಪಡಿಸಿ.
* ಮಳೆನೀರುಗಾಲುವೆ (ಸ್ಟಾರ್ಮ್ ವಾಟರ್ ಡ್ರೇನ್) ನಿರ್ವಹಣೆ, ಹೂಳೆತ್ತುವಿಕೆ, ರಸ್ತೆಗುಂಡಿ ಮುಚ್ಚುವಿಕೆ ಇತ್ಯಾದಿ ಕೆಲಸಗಳು ಸಮರ್ಪಕವಾಗಿ ಆಗಬೇಕು. 
*ಕಾರ್ಯಾಗಾರ:*
ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿ ಸುಮಾರು 1,100 ಕಿ. ಮೀ ವಾರ್ಡ್ ರಸ್ತೆ, ಪಾದಚಾರಿ ಮಾರ್ಗ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ ಬಗ್ಗೆ ವಾಕಲೂರು ಎನ್.ಜಿ.ಓ ಸಂಸ್ಥಾಪಕ ಅರುಣ್ ಪೈ ತಾಂತ್ರಿಕ ಕಾರ್ಯಾಗಾರ ನಡೆಸಿದರು.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಕವಿತಾ ರಾಜಾರಾಂ, ಮುಖ್ಯ ಅಭಿಯಂತರರು ಬಸವರಾಜ ಕಬಾಡೆ, ಸ್ವಯಂಪ್ರಭಾ, ಅಧಿಕ್ಷಕ ಅಭಿಯಂತರರು, ಪಾಲಿಕೆಯ ಎಲ್ಲಾ ಕಾರ್ಯಪಾಲಕ ಅಭಿಯಂತರರು, ಉಪ ಪ್ರಧಾನ ವ್ಯವಸ್ಥಾಪಕರುಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳು, ಸಹಾಯಕ/ ಕಿರಿಯ/ ಹೊರಗುತ್ತಿಗೆ ಅಭಿಯಂತರರು, ವಲಯ ಮಾರ್ಷಲ್ ಗಳು, ವಿಭಾಗಗಳ ಮಾರ್ಷಲ್ಗಳು ಹಾಜರಿದ್ದರು.