ಬೆಂಗಳೂರು : ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ರವರು ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ *ರವಿ ಸುಬ್ರಹ್ಮಣ್ಯ* ರವರು ಇಂದು ಬಸವನಗುಡಿ ವಿಭಾಗದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ವೈಟ್ ಟಾಪಿಂಗ್ ಸೇರಿದಂತೆ ರಸ್ತೆ ಕಾಮಗಾರಿ ಪರಿವೀಕ್ಷಿಸಿದರಲ್ಲದೆ, ಉದ್ಯಾನ, ಕೆರೆ ಅಭಿವೃದ್ಧಿ ಕುರಿತಂತೆ ನಿರ್ದೇಶನಗಳನ್ನು ನೀಡಿದರು. ಹಕ್ಕುಪತ್ರ ಸಂಬಂಧಿತ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಿದರು.
*ಕೆಂಪಾಂಬುಧಿ ಕೆರೆ:*
ಐತಿಹಾಸಿಕ ಕೆಂಪಾಂಬುಧಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಗಬೇಕಾದ ಕೆಲಸಗಳ ಬಗ್ಗೆ ವಿಶೇಷ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಿ ಬೇಗ ಕೆಲಸ ಆರಂಭಿಸಲು ಸೂಚಿಸಿದರು.
*ಸಿಎಂಐಡಿಪಿ ರಸ್ತೆ:*
ಹನುಮಂತನಗರದಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ) ರಸ್ತೆ (50 ಫೀಟ್ ರೋಡ್) ಕಾಮಗಾರಿಗೆ ಚಾಲನೆ ನೀಡಿದರು. ಮಳೆಗಾಲ ಆರಂಭವಾಗಿದ್ದು, ಶೀಘ್ರವಾಗಿ ಕೆಲಸ ಆರಂಭಿಸಿ ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸುವಂತೆ ತಿಳಿಸಿದರು.
*ವೈಟ್ ಟಾಪಿಂಗ್:*
ಬ್ಯಾಂಕ್ ಕಾಲೊನಿ ಮುಖ್ಯ ರಸ್ತೆಯಲ್ಲಿ ವೈಟ್ ಟಾಪಿಂಗ್ ಕೆಲಸಗಳನ್ನು ಶೀಘ್ರವಾಗಿ ಆರಂಭಿಸಿ. ಪಾದಚಾರಿ ಮಾರ್ಗಗಳು ವ್ಯವಸ್ಥಿತವಾಗಿ ಇರುವಂತೆ, ಮಳೆನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
*ಹಕ್ಕುಪತ್ರ ಸಮಸ್ಯೆ:*
ಈ ಸಂದರ್ಭದಲ್ಲಿ ಕೆಲವು ನಾಗರಿಕರು ಹಕ್ಕುಪತ್ರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಹವಾಲು ಸಲ್ಲಿಸಿದಾಗ, ಕಾನೂನು ಪರಿಧಿಯೊಳಗೆ ಅಗತ್ಯ ಕ್ರಮ ಕೈಗೊಂಡು ಸಂತ್ರಸ್ತರಿಗೆ ನೆರವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರರು ಬಸವರಾಜ್ ಕಬಾಡೆ, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಕಂದಾಯ ಹಾಗೂ ಆರೋಗ್ಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.