ಬೆಂಗಳೂರು : ದಕ್ಷಿಣ ನಗರ ಪಾಲಿಕೆಯ ವತಿಯಿಂದ ಇಂದು ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡುವ ಉದ್ದೇಶದಿಂದ ಫೋನ್-ಇನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.
ದಕ್ಷಿಣ ನಗರ ಪಾಲಿಕೆಯ ಅಪರ ಆಯುಕ್ತರಾದ ಎಂ.ರಾಚಪ್ಪ ರವರು ಇಂದು ಸಂಜೆ 4ರಿಂದ 5 ಗಂಟೆಯ ಅವಧಿಯವರೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ 10 ಕ್ಕೊ ಹೆಚ್ಚು ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
*ಎಸ್ ಐ ಆರ್ ಕುರಿತಂತೆ ಸಾರ್ವಜನಿಕರಿಗೆ ಅಪರ ಆಯುಕ್ತರಿಂದ ಸಮಗ್ರ ಮಾಹಿತಿ*
ಬಾಪೂಜಿನಗರ, ಮೂಡಲಪಾಳ್ಯ ಸೇರಿದಂತೆ ವಿವಿಧ ಪ್ರದೇಶಗಳ ಅನೇಕ ನಾಗರಿಕರು ದೂರವಾಣಿ ಕರೆಗಳ ಮೂಲಕ ಮತದಾರರ ಪಟ್ಟಿಯ ಗೊಂದಲಗಳ ಕುರಿತು ಅಪರ ಆಯುಕ್ತರನ್ನು ಪ್ರಶ್ನಿಸಿದರು.
ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಡಾ. ರಾಚಪ್ಪ ರವರು, ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಓ) ಕಡ್ಡಾಯವಾಗಿ ಪ್ರತಿಯೊಬ್ಬರ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
*ಅನರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸೂಚನೆ*
ಈ ಸಂದರ್ಭದಲ್ಲಿ ಅರ್ಹ ಹೊಸ ಮತದಾರರನ್ನು ಪಟ್ಟಿಗೆ ಸೇರಿಸುವುದು, ದ್ವಿಪ್ರತಿ, ವರ್ಗಾವಣೆಗೊಂಡಿರುವ, ಮರಣ ಹೊಂದಿರುವ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.
*ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ವೇಳಾಪಟ್ಟಿ**
ಸಾರ್ವಜನಿಕರಿಗೆ ಪ್ರತಿಕ್ರಿಯೆ ನೀಡಿದ ಅಪರ ಆಯುಕ್ತರು, ಜೂನ್ 30 ರಿಂದ ಜುಲೈ 29 ರವರೆಗೆ ಬಿ.ಎಲ್.ಓ ಗಳು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ ಎಂದು ವಿವರಿಸಿದರು. ಈ ವೇಳೆ ಬಿ.ಎಲ್.ಓ ಗಳಿಗೆ ಮತದಾರರ ನೋಂದಣಿ ಅರ್ಜಿ ಭರ್ತಿ ಮಾಡಿ ನೀಡುವಂತೆ ಹಾಗೂ ಅಗತ್ಯ ದಾಖಲೆಗಳನ್ನು ನೀಡುವಂತೆ ತಿಳಿಸಿದರು. ತದನಂತರ ಆಗಸ್ಟ್ 05 ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸಾರ್ವಜನಿಕರಿಗೆ ತಿಳಿಸಿದರು.
*ಅಕ್ಟೋಬರ್ 07 ರಂದು ಅಧಿಕೃತ ಅಂತಿಮ ಮತದಾರರ ಪಟ್ಟಿ ಪ್ರಕಟಣೆ*
ಆಗಸ್ಟ್ 05 ರಿಂದ ಸೆಪ್ಟೆಂಬರ್ 04 ರವರೆಗೆ ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಮುಕ್ತ ಕಾಲಾವಕಾಶ ನೀಡಲಾಗಿದ್ದು, ಅಕ್ಟೋಬರ್ 03 ರೊಳಗೆ ಈ ಎಲ್ಲಾ ಆಕ್ಷೇಪಣೆಗಳನ್ನು ಇತ್ಯರ್ಥಗೊಳಿಸಲಾಗುವುದು. ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಅಂತಿಮವಾಗಿ ಅಕ್ಟೋಬರ್ 07 ರಂದು ಅಧಿಕೃತ ಅಂತಿಮ ಮತದಾರರ ಪಟ್ಟಿಯನ್ನು ಘೋಷಿಸಲಾಗುವುದು ಎಂದು ಅಪರ ಆಯುಕ್ತರು ಮಾಹಿತಿ ನೀಡಿದರು.
ಈ ವೇಳೆ ಸಹಾಯಕ ಆಯುಕ್ತರಾದ ಶ್ರೀ ಶ್ರೀನಿವಾಸ್ ಮೂರ್ತಿ ಚುನಾವಣಾ ವಿಭಾಗದ ತಹಶೀಲ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.