ಬೆಂಗಳೂರು: 'ಗೊಲ್ಲ (ಯಾದವ) ಸಮುದಾಯದವರು ಸಂಘಟಿತರಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡುವ ಅಗತ್ಯವಿದೆ' ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 'ಸರ್ಕಾರ ಶ್ರೀಕೃಷ್ಣ ಜಯಂತಿ ಘೋಷಣೆ ಮಾಡಿದೆ. ಆದರೆ, ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದವರು ಬಾರದೇ ಇರುವುದು ನೋವು ತಂದಿದೆ. ನಮ್ಮ ಕಷ್ಟಗಳನ್ನು ಯಾರ ಬಳಿ ಹೇಳಿಕೊಳ್ಳ ಬೇಕು? ಸಂಘಟಿತರಾಗಿ ಬುದ್ದಿ ಕಲಿಸುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ನಮಗೆ ಯಾರೂ ಮಣೆ ಹಾಕುವುದಿಲ್ಲ' ಎಂದು ಅಭಿಪ್ರಾಯಪಟ್ಟದರು.
'ತಾಲ್ಲೂಕು ಮಟ್ಟದಲ್ಲಿ ಕೂಡ ಶ್ರೀಕೃಷ್ಣ ಜಯಂತಿ ಆಚರಿಸದೆ ಅನುದಾನ ಸರ್ಕಾರಕ್ಕೆ ವಾಪಸ್ ಬಂದ ಉದಾಹರಣೆ ಗಳಿವೆ. ಇವತ್ತಿನ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಮತ್ತು ಕನ್ನಡ ಸಂಸ್ಕೃತಿ ಖಾತೆ ಸಚಿವರ ಹೆಸರಿದೆ. ಆದರೆ, ಸರ್ಕಾರದ ವತಿಯಿಂದ ಯಾರೂ ಕಾರ್ಯಕ್ರಮಕ್ಕೆ ಬಂದಿಲ್ಲ. 33 ಕ್ಷೇತ್ರಗಳಲ್ಲಿ ಸಮುದಾಯದವರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಸಮುದಾಯದ ಶಕ್ತಿಯನ್ನು ಒಗ್ಗಟ್ಟಿನಿಂದ ತೋರಿಸಬೇಕಾಗಿದೆ' ಎಂದರು.
'ನಾನು ರಾಜಕೀಯ ಪಕ್ಷಕ್ಕೆ ಸೇರಿರ ಬಹುದು. ಆದರೆ, ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡುವವರ ಪರ ವಾಗಿರಬೇಕು. ಸಾಂಘಿಕ ಶಕ್ತಿ ಪ್ರದರ್ಶನ ಮಾಡದೇ ಹೋದರೆ ರಾಜಕೀಯವಾಗಿ ಉಳಿಗಾಲವಿಲ್ಲ' ಎಂದರು.
'ತುಳಿತಕ್ಕೆ ಒಳಗಾದ ಸಮುದಾಯ ವನ್ನು ಮೇಲಕ್ಕೆತ್ತಲು ಶ್ರೀಕೃಷ್ಣ ಯಾವುದಾ ದರೂ ರೂಪದಲ್ಲಿ ಬರಬೇಕಿದೆ. ಸಮಾಜ ವನ್ನು ಕಾಪಾಡುವ ಕೆಲಸ ಆಗಬೇಕಿದೆ. ಕೃಷ್ಣನ ಆದರ್ಶಗಳನ್ನು ಪಾಲಿಸಿಕೊಂಡು ಜೀವನದಲ್ಲಿ ಮುಂದೆ ಸಾಗಬೇಕು' ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಬಾರದೆ ಇರುವುದರಿಂದ, ಸಮಾಜಕ್ಕೆ ಸಾಕಷ್ಟು ಮುಜುಗರವಾಗಿದೆ ಹೀಗಾಗಿ ಪಕ್ಷದಿಂದ ಒಂದು ವೇಳೆ ಜನರನ್ನು ಸಂಘಟಿಸ ಬೇಕು ಎಂದು ಹೇಳಿದಾಗ ನಾನು ಖಂಡಿತವಾಗಿಯೂ ಜನರನ್ನು ಸೇರಿಸುವುದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಹಾಗೂ ಕಾಂಗ್ರೆಸ್ ನಾಯಕರಿಗೆ ಕಡ್ಡಿ ತುಂಡಾಗುವಂತೆ ಹೇಳುತ್ತೇನೆ ಎಂದರು.
ಕವಯಿತ್ರಿ ಎಚ್.ಎಲ್.ಪುಷ್ಪ ಅವರು ಕೃಷ್ಣನ ಜೀವನ ಕುರಿತು ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಉಪ ಸಭಾಪತಿ ಉಮಾಶ್ರೀ ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಬಗ್ಗೆ ಬೆಳಕು ಚೆಲ್ಲಿದರು. ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್ ಹಾರೋಗೆರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಎಸ್. ಮಂಜುನಾಥ ಸ್ವಾಮಿ, ಜಂಟಿ ನಿರ್ದೇಶಕ ಕರಿಯಪ್ಪ ಹಾಜರಿದ್ದರು