ರಾಮನಗರ /ಬೆಂಗಳೂರು: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರೀ ಲೋಪ ನಡೆದಿದೆ ಎಂದು ಆರೋಪಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ*ಅವರು ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು 'X' ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ರಾಮನಗರದಲ್ಲಿ SIR ಪ್ರಕ್ರಿಯೆಗೆ ಕಪ್ಪುಚುಕ್ಕೆ! ಮನೆ-ಮನೆಗೆ ಹೋಗಿ ಗಣತಿ ನಮೂನೆ ವಿತರಿಸಬೇಕಾದ BLO ಅಧಿಕಾರಿಗಳು, ರಾಮನಗರ ಟೌನ್ ನಗರಸಭೆಯ ವಾರ್ಡ್ ನಂ-23, ಟಿಪ್ಪುನಗರದ ಕಲ್ಯಾಣ ಮಂಟಪದಲ್ಲಿ 'SIR ಜಾತ್ರೆ' ಮಾಡುತ್ತಿದ್ದಾರೆ. ಇದು ನಿಯಮಗಳನ್ನು ಗಾಳಿಗೆ ತೂರಿ, ಪ್ರಜಾಪ್ರಭುತ್ವಕ್ಕೆ ಮಾಡಿದ ಅಣಕ ಎಂದು ಕಿಡಿಕಾರಿದ್ದಾರೆ.
ರಾಮನಗರ ಕ್ಷೇತ್ರದ ಪ್ರಸ್ತುತ SIR ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ಖುದ್ದು ನೇರ ಮೇಲ್ವಿಚಾರಣೆ ವಹಿಸಿಕೊಳ್ಳಬೇಕು. ನಿಯಮ ಉಲ್ಲಂಘಿಸಿ ತಮ್ಮಿಷ್ಟದಂತೆ ವರ್ತಿಸುತ್ತಿರುವ ಭ್ರಷ್ಟ BLO ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ, ಕಠಿಣ ಕಾನೂನು ಕೈಗೊಳ್ಳಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಅಗ್ರಹಿಸಿದ್ದಾರೆ.
ಪಾರದರ್ಶಕತೆಗೆ ಹೆಸರಾದ ಚುನಾವಣಾ ಆಯೋಗ, ರಾಮನಗರದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಈ ಅಕ್ರಮಗಳ ವಿರುದ್ಧ ಕಣ್ಣುಮುಚ್ಚಿ ಕುಳಿತುಕೊಳ್ಳಬಾರದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಅವರು ಒತ್ತಾಯಿಸಿದ್ದಾರೆ.