ಬೆಂಗಳೂರು : ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಹೆಚ್ಚಿನ ಮಹಿಳಾ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರೂ ಆಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಬೆಂಗಳೂರು ಮಹಿಳಾ ವಿಭಾಗದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳೆಯರನ್ನು ನಿರ್ಲಕ್ಷಿಸಿ, ಪಕ್ಷ ಕಟ್ಟಲು ಸಾಧ್ಯವಿಲ್ಲ. ಹಾಗೆಯೇ ಮಹಿಳೆಯರನ್ನು ಅಲಕ್ಷಿಸಿ ಚುನಾವಣೆಯನ್ನು ಮಾಡಲಾಗದು. ಮಹಿಳೆಯರಿಗೆ ಸಮಪಾಲು ನೀಡಲೇಬೇಕು. ಅದರಂತೆಯೇ ಜಿಬಿಎ ಒಟ್ಟು ಸ್ಥಾನಗಳ ಪೈಕಿ 180ಕ್ಕೂ ಹೆಚ್ಚು ವಾರ್ಡುಗಳನ್ನು ಮಹಿಳೆಯರಿಗೆ ಮೀಸಲು ಇಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಮಹಿಳೆಯರಿಗೆ ಹೆಚ್ಚು ಅವಕಾಶ ದೊರೆಯಲಿದೆ ಎಂದು ಸಚಿವರು ಹೇಳಿದರು.
ದೇವೇಗೌಡರು ಮಹಿಳಾ ಮೀಸಲಾತಿಯ ಕನಸು ಕೊಂಡರು. ಈಗಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಅದನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದರು. ಇವರಿಬ್ಬರೂ ನಾಯಕರ ದೂರದೃಷ್ಟಿಯ ಫಲವಾಗಿ 33% ಮಹಿಳೆಯರು ಜನಪ್ರತಿನಿಧಿ ಸಭೆಗಳಲ್ಲಿ ಅವಕಾಶ ಪಡೆಯಲಿದ್ದಾರೆ. ಇದು ಭಾರತೀಯ ರಾಜಕಾರಣದಲ್ಲಿ ದೊಡ್ಡ ಪರಿವರ್ತನೆ ಎಂದು ಸಚಿವರು ಬಣ್ಣಿಸಿದರು.
ವಯಕ್ತಿಕ ವರ್ಚಸ್ಸು ಮಾತ್ರವಲ್ಲ ಪಕ್ಷದ ಸಂಘಟನೆ ಮಾಡುವ ಶಕ್ತಿ ಇದ್ದವರನ್ನು ಅಭ್ಯರ್ಥಿಗಳನ್ನಾಗಿ ಮಾಡಲು ಪರಿಗಣಿಸಲಾಗುವುದು. ಪಕ್ಷನಿಷ್ಠೆ ಜೊತೆಗೆ ಜನಪರ ಹೋರಾಟಗಳಲ್ಲಿ ಹೆಚ್ಚು ತೊಡಗಿಸಿಕೊಂಡವರಿಗೆ ಅವಕಾಶ ನೀಡಲಾಗುವುದು. ಈ ಕ್ಷಣದಿಂದಲೇ ಎಲ್ಲರೂ ವಾರ್ಡುವಾರು ಸಂಘಟನೆ ಮಾಡುವುದನ್ನು ಆರಂಭ ಮಾಡಬೇಕು. ಮನೆಮನೆಗೂ ತಲುಪಿ ದೇವೇಗೌಡ್ರು ಮತ್ತು ನಾನು ಬೆಂಗಳೂರಿನ ನಗರಕ್ಕೆ ನೀಡಿರುವ ಮನವರಿಕೆ ಮಾಡಿಕೊಡಬೇಕು ಎಂದು ಕೇಂದ್ರ ಸಚಿವರು ಸೂಚಿಸಿದರು.
ಜನರ ನಡುವೆ ಇದ್ದು ಕೆಲಸ ಮಾಡಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿ. ಸಾಮಾಜಿಕ ಜಾಲತಾಣ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ನಿಮಗೇಕೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಪಕ್ಷಕ್ಕೆ ವಿಶ್ವಾಸ ಮೂಡಿಸಬೇಕು ಎಂದು ಮಹಿಳಾ ಮುಖಂಡರಿಗೆ ಸಚಿವರು ಹೇಳಿದರು.
ಚುನಾವಣೆ ಎಂದರೆ ಸುಮ್ಮನೆ ಅಲ್ಲ. ನಿಮ್ಮ ತಯಾರಿ ಉತ್ತಮವಾಗಿರಬೇಕು. ಮುಖಂಡರನ್ನು, ಕಾರ್ಯಕರ್ತರನ್ನು ಒಟ್ಟಾಗಿ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಅದರಲ್ಲಿಯೂ ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಪಕ್ಷದ ಕೇಂದ್ರ ಘಟಕವು ಗಮನ ಕೊಡಬೇಕು. ಸಮರ್ಥರಿಗೆ ಪಕ್ಷವು ತಪ್ಪದೇ ಅವಕಾಶ ನೀಡುತ್ತದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಮಹಿಳಾ ವಿಭಾಗದ ಸಭೆಯಲ್ಲಿ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಮಾತನಾಡಿದರು. ಜತೆಗೆ, ಕೆಲ ಟಿಕೆಟ್ ಆಕಾಂಕ್ಷಿಗಳು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
*ಜೆಡಿಎಸ್ ಸೇರಿದ ಹೆಬ್ಬಾಳ ಮತ್ತು ಬನಶಂಕರಿ ವಾರ್ಡುಗಳ ಮುಖಂಡರು:*
ಕೇಂದ್ರ ಸಚಿವರ ಸಮ್ಮುಖದಲ್ಲಿ ಹೆಬ್ಬಾಳ ಮತ್ತು ಬನಶಂಕರಿ ವಾರ್ಡುಗಳ ನೂರಾರು ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಹೆಬ್ಬಾಳದ ದಯಾನಂದ್ ಲಕ್ಷ್ಮಿಕಾಂತ್ ಹಾಗೂ ಬನಶಂಕರಿಯ ಅಫ್ಸರ್ ಖಾನ್ ನೇತೃತ್ವದಲ್ಲಿ ಪಕ್ಷ ಸೇರಿದ ಮುಖಂಡರನ್ನು ಕೇಂದ್ರ ಸಚಿವರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.
ಧನಂಜಯ ಲಕ್ಷ್ಮಿಕಾಂತ್ ಜೊತೆಗೆ ಚಂದ್ರಶೇಖರ್ ಸ್ಥಾವರ ಮಠ, ರವಿಕುಮಾರ್, ದೀಪಕ್ ನಾರಜಿ, ವೆಂಕಟೇಶ್, ಡಾ. ಜೋಗಿಲಾ ಸಿದ್ದರಾಜು, ಶಶಿ ಮೋಹನ್, ಅಭಿಷೇಕ್ ಗೌಡ, ದಾಮೋದರ್ ರಾಮಸ್ವಾಮಿ, ಪ್ರಶಾಂತ್, ಪ್ರಭಾಕರ್, ಜುಬೇರ್, ಆನಂದ್, ಮುನಿರಾಜು, ಪರಮೇಶ್ವರ್, ಸಮರ್ಥ್, ಯಶವಂತ, ಪುನೀತ್ ಗೌಡ, ಸಂತೋಷ್, ರಘು, ಶಿವಣ್ಣ, ಸಿದ್ದಪ್ಪಾಜಿ, ಗೋವಿಂದರಾಜು, ಅಮೂಲ್ಯ ವಿ ಶೆಟ್ಟಿ ಮುಂತಾದವರು ಪಕ್ಷಕ್ಕೆ ಸೇರಿದರು.