ಬೆಂಗಳೂರು : ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೋಮ್ಮಲ ಸುನೀಲ್ ಕುಮಾರ್* ಅವರ ಅಧ್ಯಕ್ಷತೆಯಲ್ಲಿ ಘನ ತ್ಯಾಜ್ಯ ನಿರ್ವಹಣೆ, ಬ್ಲ್ಯಾಕ್ ಸ್ಪಾಟ್ ತೆರವು, ಸಿಬ್ಬಂದಿ ಹಾಜರಾತಿ, ಪೌರಕಾರ್ಮಿಕರ ಕಾರ್ಯನಿರ್ವಹಣೆ ಹಾಗೂ ವಿವಿಧ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಕಸದ ಸಂಗ್ರಹಣಾ ಕಾರ್ಯಗಳ ಪ್ರಗತಿ ಕುರಿತು ಪರಿಶೀಲನೆ ನಡೆಸಲಾಯಿತು. ಕಸದ ಸಂಗ್ರಹಣಾ ವಾಹನಗಳ ಚಾಲಕರು ಹಾಗೂ ಸಹಾಯಕ ಸಿಬ್ಬಂದಿ ನಿಗದಿತ ಸಮಯವಾದ ಬೆಳಗ್ಗೆ 5.30 ಗಂಟೆಗೆ ಕರ್ತವ್ಯಕ್ಕೆ ಹಾಜರಾಗದೇ ಇರುವ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ, ಸಂಬಂಧಿತ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಪದೇ ಪದೇ ನಿರ್ಲಕ್ಷ್ಯ ತೋರುವ ಗುತ್ತಿಗೆ ಸಿಬ್ಬಂದಿಯ ವಿರುದ್ಧ ಸೇವೆಯಿಂದ ವಜಾಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಘನ ತ್ಯಾಜ್ಯ ನಿರ್ವಹಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು DGM ಹಾಗೂ AGM ಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿದ ಆಯುಕ್ತರು, ಎಲ್ಲಾ ಆಟೋ ಮಸ್ಟರಿಂಗ್ ಸೆಂಟರ್ಗಳು, ಪೌರಕಾರ್ಮಿಕ ಮಸ್ಟರಿಂಗ್ ಸೆಂಟರ್ಗಳು ಹಾಗೂ ಇತರೆ ಸಂಬಂಧಿತ ಕೇಂದ್ರಗಳ ಜಿಪಿಎಸ್ ಲೊಕೇಶನ್ ಮತ್ತು ಛಾಯಾಚಿತ್ರಗಳನ್ನು ಕಡ್ಡಾಯವಾಗಿ ವಾಟ್ಸಾಪ್ ಮೂಲಕ ಸಲ್ಲಿಸುವಂತೆ ಸೂಚಿಸಿದರು.
ಪೌರಕಾರ್ಮಿಕರ ಕಾರ್ಯನಿರ್ವಹಣೆಯನ್ನು ಸಮಗ್ರವಾಗಿ ಪರಿಶೀಲಿಸಲು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜಾರಿಯಾದ ನಂತರದಿಂದ ಇಲ್ಲಿಯವರೆಗೆ ಕರ್ತವ್ಯಕ್ಕೆ ಗೈರಾಗಿರುವ ಪೌರಕಾರ್ಮಿಕರ ವಿವರವನ್ನು ಇಳಿಕೆ ಕ್ರಮದಲ್ಲಿ (Descending Order) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅನಧಿಕೃತ ಗೈರುಹಾಜರಿ, ವೈದ್ಯಕೀಯ ರಜೆ ಹಾಗೂ ಇತರೆ ಗೈರುಹಾಜರಾತಿಗಳ ಸಂಪೂರ್ಣ ಮಾಹಿತಿಯನ್ನೂ ಸಲ್ಲಿಸುವಂತೆ ಸೂಚಿಸಲಾಯಿತು.
*ಬ್ಲ್ಯಾಕ್ ಸ್ಪಾಟ್ ತೆರವಿಗೆ ಆದ್ಯತೆ*
ನಗರದ ವಿವಿಧ ಭಾಗಗಳಲ್ಲಿ ಗುರುತಿಸಲಾಗಿರುವ ಬ್ಲ್ಯಾಕ್ ಸ್ಪಾಟ್ಗಳ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು, ಈಗಾಗಲೇ 20 ಸ್ಥಳಗಳಲ್ಲಿ ಬ್ಲ್ಯಾಕ್ ಸ್ಪಾಟ್ ತೆರವುಗೊಳಿಸಿರುವುದಾಗಿ ಮಾಹಿತಿ ನೀಡಿದರು. ಉಳಿದ ಸ್ಥಳಗಳಲ್ಲಿ ಅಗತ್ಯವಿರುವ ನಾಗರಿಕ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ, ಪ್ರತಿ ವಾರ ಕನಿಷ್ಠ 20 ಬ್ಲ್ಯಾಕ್ ಸ್ಪಾಟ್ಗಳನ್ನು ಶಾಶ್ವತವಾಗಿ ನಿವಾರಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುವಂತೆ ಆಯುಕ್ತರು ಸೂಚಿಸಿದರು.
*ಪೌರಕಾರ್ಮಿಕರ ಮರಣಾನಂತರ ಸೌಲಭ್ಯಗಳ ಶೀಘ್ರ ವಿಲೇವಾರಿ*
ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮೃತಪಟ್ಟ ಪೌರಕಾರ್ಮಿಕ ಸಿಬ್ಬಂದಿಯ ಕುಟುಂಬಗಳಿಗೆ ನೀಡಬೇಕಾದ ಆರ್ಥಿಕ ನೆರವು ಹಾಗೂ ಇತರೆ ಸೌಲಭ್ಯಗಳ ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು. ಬಾಕಿ ಇರುವ ಹಣವನ್ನು ಶೀಘ್ರ ಬಿಡುಗಡೆ ಮಾಡುವ ಕುರಿತು ಚರ್ಚೆ ನಡೆಸಿದ ಆಯುಕ್ತರು, ಯಾವುದೇ ವಿಳಂಬವಿಲ್ಲದೆ ಅರ್ಹ ಕುಟುಂಬಗಳಿಗೆ ಆರ್ಥಿಕ ಸೌಲಭ್ಯ ತಲುಪಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ಘನ ತ್ಯಾಜ್ಯ ನಿರ್ವಹಣಾ ಉಪಕರಣಗಳ ಪರಿಶೀಲನೆ*
ನಗರ ಸ್ವಚ್ಛತೆ ಹಾಗೂ ಕಸದ ನಿರ್ವಹಣೆಗೆ ಬಳಸಲಾಗುತ್ತಿರುವ ವಿವಿಧ ಉಪಕರಣಗಳು ಮತ್ತು ಸಾಧನಗಳ ಕಾರ್ಯಕ್ಷಮತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಗತ್ಯವಿರುವ ಉಪಕರಣಗಳ ನಿರ್ವಹಣೆ, ಗುಣಮಟ್ಟ ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.
*ಬಲ್ಕ್ ವೇಸ್ಟ್ ಜನರೇಟರ್ಗಳು ಹಾಗೂ ತೆರಿಗೆ ಮಾಹಿತಿ ಸಂಗ್ರಹಣೆ*
ನಗರದಲ್ಲಿರುವ ಅಪಾರ್ಟ್ಮೆಂಟ್ಗಳು ಹಾಗೂ ಬಲ್ಕ್ ವೇಸ್ಟ್ ಜನರೇಟರ್ಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ, ಘನ ತ್ಯಾಜ್ಯ ನಿರ್ವಹಣೆ ಹಾಗೂ ತೆರಿಗೆ ಪಾವತಿ ಸಂಬಂಧಿತ ಮಾಹಿತಿಯನ್ನು ನವೀಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
*ಕಸದ ವಿಂಗಡಣೆ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ*
ಮೂಲದಲ್ಲಿಯೇ ಕಸ ವಿಂಗಡಣೆ (Segregation) ಕಡ್ಡಾಯ ನಿಯಮವಾಗಿದ್ದರೂ, ಕೆಲವರು ನಿಯಮಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವುದು ಹಾಗೂ zಕಾನೂನುಬದ್ಧ ಕ್ರಮಗಳನ್ನು ಕೈಗೊಂಡು ಘನ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಯುಕ್ತರು ಸೂಚಿಸಿದರು.
*ವಾರ್ಡ್ ಮಾರ್ಷಲ್ಗಳ ಕಾರ್ಯಕ್ಷಮತೆಗೆ ಒತ್ತು*
ಎನ್ಸಿಸಿ (NCC) ಹಾಗೂ ಮಾಜಿ ಸೈನಿಕರ ಪೈಕಿ ಆಯ್ಕೆಯಾಗಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರ್ಷಲ್ಗಳನ್ನು ಘನತ್ಯಾಜ್ಯ ನಿರ್ವಹಣೆಯಲ್ಲಿ ಬಳಸಬೇಕು.
ಅವರುಗಳೆಲ್ಲ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ವೈಫಲ್ಯ ಕಂಡುಬಂದಲ್ಲಿ ಸಂಬಂಧಿತ ಮಾರ್ಷಲ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಪರ ಆಯುಕ್ತರಾದ (ಕಂದಾಯ ಪ್ರಭಾರ) ಹಾಗೂ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ, ಜಂಟಿ ಆಯುಕ್ತರಾದ ಶ್ರೀ ಮೊಹಮ್ಮದ್ ನಯೀಮ್ ಮೊಮಿನ್, ಶ್ರೀ ಅರುಣ್ ಪೈ, DGM ರಶ್ಮಿ, AGM ಗಳು, ಹಣಕಾಸು ವಿಭಾಗದ ಅಧಿಕಾರಿಗಳು ಹಾಗೂ ಸಂಬಂಧಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.